ಹಾಲಿಗೆ, ಪ್ರಾಮಾಣಿಕ ಮೌಲ್ಯನೀಡಲು ಆರಂಭಗೊಂಡ ಸೊಸೈಟಿ
ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘ
Team Udayavani, Feb 26, 2020, 5:00 AM IST
ಇನ್ನಂಜೆ ಹಾಲುಉತ್ಪಾದಕರ ಸಹಕಾರ ಸಂಘ ಹೈನುಗಾರರ ಅಭಿವೃದ್ಧಿಗೆಂದೇ ಹುಟ್ಟಿಕೊಂಡ ಸಂಸ್ಥೆ, ಉತ್ತಮ ಗುಣಮಟ್ಟದ ಹಾಲು ಬೆಲೆಯಿಲ್ಲದೆ, ವಂಚನೆ ಅನುಭವಿಸುತ್ತಿದ್ದಾಗ ಸಂಸ್ಥೆ ಸ್ಥಾಪನೆಯಾಯಿತು.
ಕಾಪು: ಗುಣಮಟ್ಟದ ಹಾಲಿಗೆ ಬೆಲೆಯಿಲ್ಲದೆ, ಕಲಬೆರಕೆಯ ಹಾಲು ಹಳ್ಳಿಗಳಲ್ಲಿ ರಾರಾಜಿಸುತ್ತಿದ್ದ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಹೈನುಗಾರರ ಸಂಕಷ್ಟವನ್ನು ಮನಗಂಡು ಆಗಿನ ಮಂಡಲ ಪ್ರಧಾನರಾಗಿದ್ದ ದಿ| ಐ ಶ್ರೀಧರ ಶೆಟ್ಟಿ, ದಿ| ಮುರಳೀಧರ ಭಟ್, ದಿ| ರಘುನಾಥ ಶೆಟ್ಟಿ ಮತ್ತು ನಾಗೇಂದ್ರ ರಾವ್ ಅವರು ಜತೆ ಸೇರಿ ಮಣಿಪಾಲ ಡೈರಿ ಸಹಾಯಕ ವ್ಯವಸ್ಥಾಪಕ ಶಂಕರ್ ಅವರ ಮಾರ್ಗದರ್ಶನದಿಂದ ಮನೆ ಮನೆಗೆ ತೆರಳಿ 10 ರೂ. ಗಳಂತೆ ಷೇರು ಧನ ಪಡೆದು 1990ರ ನ. 7ರಂದು ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಿದರು.
ಸ್ವಂತ ಕಟ್ಟಡಕ್ಕೆ ಸ್ಥಳಾಂತರ
2003ರವರೆಗೆ ಶಾಲೆಯ ಕಟ್ಟಡದಲ್ಲಿ ಬಾಡಿಗೆಗೆ ಕಾರ್ಯ ನಿರ್ವಹಿಸುತ್ತಿದ್ದ ಸಂಘವು ಲಕ್ಷ್ಮಣ್ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಅವರ ಪ್ರಯತ್ನ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಅವರ ಸಹಕಾರದಿಂದ ಸ್ಥಳ ಖರೀದಿಸಿ 2003ರ ಮೇ 24ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸಂಘದ ಆರಂಭ ಕಾಲದಲ್ಲಿ 55 ಲೀಟರ್ ಹಾಲು ಶೇಖರಣೆಗೊಳ್ಳುತ್ತಿತ್ತು. ಪ್ರಸ್ತುತ 140 ಸದಸ್ಯರಿಂದ ಪ್ರತೀ ದಿನ 1005 ಲೀ. ಹಾಲು ಸಂಗ್ರಹಿಸಲಾಗುತ್ತಿದೆ.
ಪ್ರಸ್ತುತ ಸ್ಥಿತಿಗತಿ
ಸಂಘದಲ್ಲಿ ಒಟ್ಟು 238 ಸದಸ್ಯರು ಇದ್ದು, 1 ಕೋ. ರೂ. ಗೂ ಮೀರಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಸಂಘದ ಮೂಲಕ 245 ರಾಸುಗಳಿಂದ 2,55,500 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಕಳೆದ 16 ವರ್ಷಗಳಿಂದ ನಿರಂತರವಾಗಿ ಎ ಗ್ರೇಡ್ ದರ್ಜೆಯ ಸಂಘ ಎಂಬ ಹೆಗ್ಗಳಿಕೆ ಗಳಿಸುತ್ತಾ ಬರುತ್ತಿದೆ.
ತಳಿ ಅಭಿವೃದ್ಧಿಗೆ ಒತ್ತು
ಇನ್ನಂಜೆಯೆಂಬ ಪುಟ್ಟ ಗ್ರಾಮದಲ್ಲಿ ಸಂಪೂರ್ಣವಾಗಿ ನಾಟಿ ಹಸುಗಳಿದ್ದು ತಳಿ ಅಭಿವೃದ್ಧಿಗಾಗಿ ಸಂಘದ ಕಾರ್ಯದರ್ಶಿಯವರಿಗೆ ದ.ಕ. ಒಕ್ಕೂಟದ ವತಿಯಿಂದ ಕೃತಕ ಗರ್ಭಧಾರಣೆ ಮತ್ತು ಪಶುಪಾಲನೆಯ ಬಗ್ಗೆ 90 ದಿನಗಳ ತರಬೇತಿ ನೀಡಿ ಪ್ರಸ್ತುತ ಜೆರ್ಸಿ, ಹೆಚ್ ಎಫ್, ಗೀರ್, ರೆಡ್ ಸಿಂಥಿ, ಪುಂಗನೂರು ತಳಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರತೀ ತಿಂಗಳು ಸರಾಸರಿ 125 ಕೃತಕ ಗರ್ಭಧಾರಣೆ ಮತ್ತು ನೂರಕ್ಕೂ ಹೆಚ್ಚು ಪ್ರಥಮ ಚಿಕಿತ್ಸೆ ಸದಸ್ಯರ ರಾಸುಗಳಿಗೆ ನೀಡಲಾಗುತ್ತಿದೆ.
ಅನುದಾನ ವಿಮೆ
ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ವಿಮೆ ಯೋಜನೆಯಡಿ ರಾಸುಗಳಿಗೆ ವಿಮೆ, ಈ ಬಗ್ಗೆ ಶೇ. 50 ಸಂಘದ ವಂತಿಗೆ ಪ್ರತೀ 6 ತಿಂಗಳಿಗೊಮ್ಮೆ ಸಾಮೂಹಿಕ ಉಚಿತ ಜಂತು ಹುಳದ ಔಷಧಿಯನ್ನು, ಪ್ರತೀ ವರ್ಷ ಸುಮಾರು 500 ಕೆ.ಜಿ. ಮೇವಿಗಾಗಿ ಉಚಿತ ಜೋಳದ ಬೀಜವನ್ನು ನೀಡಲಾಗುತ್ತಿದೆ.
ಸಾಧಕರಿಗೆ ಸಮ್ಮಾನ
ಪ್ರತೀವರ್ಷ ಸಂಘದ ಸದಸ್ಯರ ಮಕ್ಕಳಿಗೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಗೌರವಿಸಿ, ಪ್ರೋತ್ಸಾಹಿ ಸಲಾಗುವುದು. ಇಷ್ಟು ಮಾತ್ರವಲ್ಲದೆ 11 ವರ್ಷದಿಂದ ಸಂಘದ ಸಕ್ರಿಯ ಹಿರಿಯ 3 ಸದಸ್ಯರನ್ನು ಉತ್ತಮ ಹೈನುಗಾರ ಪ್ರಶಸ್ತಿ ನೀಡಿ ಪ್ರತೀ ವರ್ಷ ಸಮ್ಮಾನಿಸಲಾಗುವುದು. ಸದಸ್ಯರಿಗೆ ನೇತ್ರ ತಪಾಸಣೆ ಶಿಬಿರ, ಶಾಲಾ ಮಕ್ಕಳ ಅರಿವು ಕಾರ್ಯಕ್ರಮ ಏರ್ಪಡಿಸುತ್ತಿದೆ.
ನಿರಂತರವಾಗಿ ಹಾಲಿನ ಜಿಡ್ಡು ಪರೀಕ್ಷೆ ನಡೆಸಿ ಒಕ್ಕೂಟದ ದರ ಪಟ್ಟಿಯಂತೆ ಹಾಲು ಉತ್ಪಾದಕರಿಗೆ ಬ್ಯಾಂಕ್ ಮುಖಾಂತರ ಹಣ ಪಾವತಿಸಲಾಗುತ್ತಿದೆ. ರೈತ ರಿಗೆ ಉತ್ತಮ ಬೋನಸ್ ವಿತರಿಸ ಲಾಗುತ್ತಿದೆ. ಹೈನುರಾಸು ನಿರ್ವಹಣ ತರಬೇತಿ, ಅತೀ ಹೆಚ್ಚು ಹಾಲು ಪೂರೈಸಿದ 3 ಸದಸ್ಯರಿಗೆ ಬಹುಮಾನ ಹಾಗೂ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ದ. ಕ. ಹಾಲು ಒಕ್ಕೂಟದ ಪಶು ವೈದ್ಯರಿಂದ ರೈತರ ರಾಸುಗಳಿಗೆ ತುರ್ತು ಚಿಕಿತ್ಸೆ ಸೌಲಭ್ಯ ಕೂಡಾ ಇದೆ. ಪ್ರತೀ 3 ತಿಂಗಳಿಗೊಮ್ಮೆ ಉಚಿತ ಬಂಜೆತನ ಶಿಬಿರ ಮತ್ತು ಪ್ರತೀ 6 ತಿಂಗಳಿಗೊಮ್ಮೆ ಪಶು ಸಂಗೋಪನಾ ಇಲಾಖೆ ಅವರ ಜೊತೆ ಸೇರಿ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ನಡೆಸುತ್ತಿದೆ.
ಪ್ರಶಸ್ತಿ – ಪುರಸ್ಕಾರ
3 ಬಾರಿ ತಾಲೂಕು ಮಟ್ಟದಲ್ಲಿ ಪ್ರಥಮ, 4 ಬಾರಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2017-18ನೇ ಸಾಲಿನಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಘದ ಕಾರ್ಯದರ್ಶಿ ಅವರಿಗೆ ಕ್ಲಸ್ಟರ್ ಸಂಘಗಳ ಜಾನುವಾರು ಪ್ರದರ್ಶನದಲ್ಲಿ ಉತ್ತಮ ಕೃತಕ ಗರ್ಭಧಾರಣೆ ಕಾರ್ಯಕರ್ತ ಪುರಸ್ಕಾರ, ತಾಲೂಕು ಮಟ್ಟದಲ್ಲಿಯೂ ಉತ್ತಮ ಕೃ,ಗ ಕಾರ್ಯಕರ್ತ ಪ್ರಶಸ್ತಿ ಲಭಿಸಿದೆ.
ನಮ್ಮ ಸಂಘವು ಯಾವುದೇ ಸಾಲದ ಹೊರೆ ಇಲ್ಲದೆ ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿದೆ. ಶುದ್ಧ ಹಾಲಿನ ಉತ್ಪಾದನೆಗೆ ಒತ್ತು ನೀಡುವ ಮೂಲಕ ರೈತರು ಮತ್ತು ಹೈನುಗಾರರಿಗೆ ಯಾವುದೇ ನಷ್ಟ ಆಗದಂತೆ ನೋಡಿಕೊಂಡು ಪಾರದರ್ಶಕವಾಗಿ ಸಂಘವನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಇದಕ್ಕೆ ಸದಸ್ಯರೆಲ್ಲರ ಸಹಕಾರವೂ ಅತೀ ಮುಖ್ಯವಾಗಿದೆ.
ಲಕ್ಷ್ಮಣ್ ಕೆ. ಶೆಟ್ಟಿ ಅಧ್ಯಕ್ಷರು
ಅಧ್ಯಕ್ಷರು
ದಿ| ಐ ಶ್ರೀಧರ್ ಶೆಟ್ಟಿ (ಸ್ಥಾಪಕ ಅಧ್ಯಕ್ಷರು), ದಿ| ರಘುನಾಥ ಶೆಟ್ಟಿ, ನಾಗೇಂದ್ರ ರಾವ್, ದಿ| ಕಾಂಪರ ಶೆಟ್ಟಿ, ರಾಘವೇಂದ್ರ ಉಪಾಧ್ಯಾಯ, ಲಕ್ಷ್ಮಣ ಕೆ. ಶೆಟ್ಟಿ (ಹಾಲಿ)
ಕಾರ್ಯದರ್ಶಿ
ಸುಬ್ರಹ್ಮಣ್ಯ ಎನ್. ಭಟ್ (ಕಳೆದ 30 ವರ್ಷಗಳಿಂದ)
- ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ