“ಉಡುಪಿ ಎಂದರೆ ಡಾ| ವಿ.ಎಸ್.ಆಚಾರ್ಯ ನೆನಪು’
Team Udayavani, Jul 8, 2019, 5:28 AM IST
ಉಡುಪಿ: ಉಡುಪಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಡಾ| ವಿ.ಎಸ್.ಆಚಾರ್ಯ ಅವರ ಪಾತ್ರ ಮಹತ್ತರವಾದುದು. ಈ ಕಾರಣಕ್ಕಾಗಿಯೇ ದೇಶದ ಹಲವು ನಾಯಕರು ಉಡುಪಿ ಅಂದಾಕ್ಷಣ ವಿ.ಎಸ್.ಆಚಾರ್ಯ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ 2019ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ ಹಾಗೂ ಡಾ| ವಿ.ಎಸ್.ಆಚಾರ್ಯ ಸ್ಮರಣ ಪಾರಿತೋಷಕ, ಗಾಯತ್ರಿ ಸ್ಮರಣ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ದೇಶ ಯುವ ತತ್ವದಲ್ಲಿ ಮುನ್ನಡೆಯಬೇಕು ಎಂಬುವುದಕ್ಕೆ ಭದ್ರ ಬುನಾದಿ ಹಾಕಿದವರು. ಡಾ| ವಿ.ಎಸ್.ಆಚಾರ್ಯ ಕೂಡ ಇದೇ ಹಾದಿಯಲ್ಲಿ ಮುನ್ನಡೆದವರು. ಕಷ್ಟದ ಸಂದರ್ಭದಲ್ಲಿ ಪಕ್ಷವನ್ನು ಕಟ್ಟಿದ್ದರು. ಕಠಿನ ಪರಿಶ್ರಮದ ಮೂಲಕ ಅವರು ಮೇಲೆ ಬಂದವರು. ತಾನು ರಾಜಕೀಯ ಜೀವನ ಪ್ರಾರಂಭಿಸಿದಾಗಲೂ ಹುರಿದುಂಬಿಸುವ ಕೆಲಸ ಮಾಡಿದ್ದರು. ಭಾರತೀಯ ಜನಸಂಘವನ್ನು ಬೆಳೆಸಿರುವ ರೀತಿ ನಮ್ಮನ್ನು ಈ ಹಂತಕ್ಕೆ ಬೆಳೆದು ನಿಲ್ಲಿಸಿದೆ ಎಂದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಅಭಿವೃದ್ಧಿ ಚಿಂತನೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಗರದ ಆದಾಯ ವೃದ್ಧಿಸುವಲ್ಲಿ ಡಾ| ವಿ.ಎಸ್.ಆಚಾರ್ಯ ಅವರ ಕೊಡುಗೆ ಮಹತ್ತರವಾದುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ಮುಖಂಡರಾದ ಸೋಮಶೇಖರ ಭಟ್, ಗುಜ್ಜಾಡಿ ಪ್ರಭಾಕರ ನಾಯಕ್ ಉಪಸ್ಥಿತರಿದ್ದರು. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು.
ಆಚಾರ್ಯರ ಕಲ್ಪನೆಯಂತೆ ಅಭಿವೃದ್ಧಿ
ಉಡುಪಿಯ ಅಭಿವೃದ್ಧಿ ಕೆಲಸಗಳೂ ವಿ.ಎಸ್.ಆಚಾರ್ಯ ಅವರ ಕಲ್ಪನೆಯಂತೆಯೇ ನಡೆದಿದೆ. ಅಭಿವೃದ್ಧಿ ಪರ ವಿಚಾರಗಳನ್ನು ತಿಳಿಸಿಕೊಡುವಲ್ಲಿ ಆಚಾರ್ಯರು ಮಹತ್ತರ ಪಾತ್ರ ವಹಿಸಿದ್ದರು. ಅಷ್ಟೊಂದು ಹಿರಿಯ ರಾಜಕಾರಣಿಯಾಗಿದ್ದರೂ ಎಲ್ಲರನ್ನೂ ಗೌರವಿಸುತ್ತಿದ್ದರು. ಅವರ ಈ ಸಾಧನೆಯ ಫಲದಿಂದಲೇ ಬಿಜೆಪಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಿದೆ. ರಾಜಕಾರಣದ ಮೂಲಕ ಸಮಾಜಸೇವೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದರು. ಅವರು ಇಂದು ಇದ್ದಿದ್ದರೆ ಉಡುಪಿಯ ಚಿತ್ರಣ ಮತ್ತಷ್ಟು ಬದಲಾಗುತ್ತಿತ್ತು. ಅವರು ಬಿಟ್ಟುಹೋಗಿರುವ ಚಿಂತನೆಗಳನ್ನು ಮುಂದುವರಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.