ಶ್ರೀಕೃಷ್ಣಾಷ್ಟಮಿಗೆ ಸರ್ವ ತಯಾರಿ
ಮುದ ನೀಡುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು
Team Udayavani, Aug 22, 2019, 5:00 AM IST
ಉಡುಪಿ: ಶ್ರೀಕೃಷ್ಟಾಷ್ಟಮಿ ಸಂಭ್ರಮಕ್ಕೆ ಶ್ರೀಕೃಷ್ಣ ಮಠ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ದಿನನಿತ್ಯ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಸೋಮವಾರ ರಾತ್ರಿ ಫಯಾಜ್ ಖಾನ್ರಿಂದ ಹಿಂದೂಸ್ಥಾನೀ ಸಂಗೀತ, ಮಂಗಳವಾರ ರಾತ್ರಿ ಚೆನ್ನೈನ ಪದ್ಮಭೂಷಣ ಟಿ.ವಿ.ಶಂಕರನಾರಾಯಣ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ ನಡೆಯಿತು.
ಬುಧವಾರ ಸಾರ್ವಜನಿಕರಿಗಾಗಿ ಶಂಖ ಊದುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಆ.3ರಿಂದ 19ರ ವರೆಗೆ ನಡೆದ ಚಿತ್ರಕಲೆ, ಹುಲಿಕುಣಿತ, ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು. ಗುರುವಾರ ಸಾರ್ವಜನಿಕರಿಗಾಗಿ ಬತ್ತಿ ಮಾಡುವ ಸ್ಪರ್ಧೆ ನಡೆಯಲಿದೆ.
ಲಗ್ಗೆಯಿಡುತ್ತಿದ್ದಾರೆ ವ್ಯಾಪಾರಿಗಳು
ಬುಧವಾರ ರಥಬೀದಿಯಲ್ಲಿಯೂ ಜನಸಂಖ್ಯೆ ಅಧಿಕವಾಗಿತ್ತು. ಹಳೇ ವ್ಯಾಪಾರಿಗಳ ನಡುವೆ ಬೇರೆ ಜಿಲ್ಲೆಯ ವ್ಯಾಪಾರಿಗಳೂ ಕಾಣಸಿಕ್ಕರು. 5 ಮಂದಿ ಹೂವಿನ ವ್ಯಾಪಾರಿಗಳು ಬುಧವಾರ ಹಾಸನದಿಂದ ಬಂದು ಇಲ್ಲಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂತು. ಸೇವಂತಿಗೆ ಹಾಗೂ ಮಾರಿಗೋಲ್ಡ್ ಹೂಗಳನ್ನು ಮಾರಾಟ ಮಾಡುತ್ತಿದ್ದರು. ಸೇವಂತಿಗೆ ಮೊಳಕ್ಕೆ 20 ರೂ.ಗಳಾದರೆ ಮಾರಿಗೋಲ್ಡ್ ಹೂವಿನ ದರ 30 ರೂ.ಗಳಷ್ಟಿತ್ತು.
ಮತ್ತಷ್ಟು ವ್ಯಾಪಾರಿಗಳ ನಿರೀಕ್ಷೆ
ಗುರುವಾರ ಹಾಸನ, ಚಿಕ್ಕಮಗಳೂರು, ದಾವಣಗೆರೆಯಿಂದ ಸುಮಾರು 40ರಿಂದ 60ರಷ್ಟು ಹೂವಿನ ವ್ಯಾಪಾರಿಗಳು ರಥಬೀದಿಗೆ ಬರಲಿದ್ದಾರೆ. ಬುಧವಾರ ಬೆಳಗ್ಗಿನಿಂದ ವ್ಯಾಪಾರ ಪ್ರಾರಂಭಿಸಿದ್ದೇವೆ. ವ್ಯಾಪಾರ ತುಸು ನಿಧಾನವಾಗಿ ನಡೆಯುತ್ತಿದೆ. ನಾಳೆ, ನಾಡಿದ್ದು ಗ್ರಾಹಕರ ಸಂಖ್ಯೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಹಾಸನ ಮೂಲದ ಹೂವಿನ ವ್ಯಾಪಾರಿಗಳು.
ಮಳೆಯ ಕಾಟ
ಹೂವಿನ ವ್ಯಾಪಾರ ಅಲ್ಲದೆ ಬಟ್ಟೆ, ರೆಡಿಮೆಡ್ ಹೂಗಳು, ವಿಗ್ರಹಗಳ ವ್ಯಾಪಾರಿಗಳೂ ಕಂಡುಬಂದರು. ಮೋಡ ಹಾಗೂ ಮಳೆಯ ಲಕ್ಷಣ ಇದ್ದ ಕಾರಣದಿಂದ ಬಹುತೇಕ ವ್ಯಾಪಾರಿಗಳು ತಮ್ಮ ಉತ್ಪನ್ನಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದ್ದು ವ್ಯಾಪಾರ ಮಾಡುತ್ತಿದ್ದರು.
ಆ.24ಕ್ಕೆ ಆಲಾರೆ ಗೋವಿಂದ ತಂಡ
ವಿಟ್ಲಪಿಂಡಿ ಉತ್ಸವದ ಅಂಗವಾಗಿ ಆ. 24ರಂದು ದಹಿಹಂಡಿ ಸ್ಪರ್ಧೆ ನಡೆಯಲಿದೆ. ಮುಂಬಯಿನ ಸಾಂತಾಕ್ರೂಸ್ ಬಾಲಮಿತ್ರ ಮಂಡಳಿಯ ಅಲಾರೆ ಗೋವಿಂದ ತಂಡ ಆಗಮಿಸಲಿದೆ. ನಗರದ ವಿವಿಧ ಭಾಗಗಳಲ್ಲಿ 50 ಅಡಿ ಎತ್ತರದಲ್ಲಿ ಮಡಕೆ ಒಡೆಯಲಿದ್ದಾರೆ. ಬೆಳಗ್ಗೆ 9ಕ್ಕೆ ವಸಂತ ಮಂಟಪದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10ಕ್ಕೆ ಕನಕ ಮಂಟಪದ ಮುಂಭಾಗ, 10.30ಕ್ಕೆ ಕಡಿಯಾಳಿ, 11.30ಕ್ಕೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, 12ಕ್ಕೆ ಲಯನ್ಸ್ ಸರ್ಕಲ್, 12.30ಕ್ಕೆ ತ್ರಿವೇಣಿ ಸರ್ಕಲ್, 2ಕ್ಕೆ ಕಾಣಿಯೂರು ಮಠ, 2.30ಕ್ಕೆ ಪುತ್ತಿಗೆ ಮಠ, 3ಕ್ಕೆ ಪೇಜಾವರ ಮಠ, 4ಕ್ಕೆ ಕಿದಿಯೂರು ಹೊಟೇಲ್, 5ಕ್ಕೆ ಡಯಾನಾ ಹೊಟೇಲ್ ಮುಂಭಾಗದಲ್ಲಿ ಮಡಕೆ ಒಡೆಯುವ ಪ್ರದರ್ಶನವನ್ನು ಈ ತಂಡದವರು ನೀಡಲಿದ್ದಾರೆ.
ವಿತರಣೆಗೆ ಸಿದ್ಧಗೊಂಡಿರುವ ಉಂಡೆ, ಚಕ್ಕುಲಿ
ಉಡುಪಿ: ಶ್ರೀಕೃಷ್ಣಮಠದಲ್ಲಿ ನಡೆಯುವ ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರ ಸಂತರ್ಪಣಾ ಶಾಲಾ ಮಕ್ಕಳಿಗೆ ಹಾಗೂ ಭಕ್ತರಿಗೆ ಪ್ರಸಾದ ರೂಪವಾಗಿ ವಿತರಿಸಲು ಉಂಡೆ ಚಕ್ಕುಲಿ ತಯಾರಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 150ರಷ್ಟು ಶಾಲೆಗಳಿದ್ದು, 40 ಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ವಿಟ್ಲಪಿಂಡಿಯ ಮರುದಿನ ಶಾಲಾ ವಿದ್ಯಾರ್ಥಿಗಳಿಗೆ ಇದನ್ನು ವಿತರಿಸಲಾಗುತ್ತದೆ. ಆದರೆ ಈ ಬಾರಿ ರವಿವಾರ ಬಂದಿರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಉಂಡೆಚಕ್ಕುಲಿ ವಿತರಿಸುವ ಕಾರ್ಯ ಸೋಮವಾರ ನಡೆಯಲಿದೆ ಎಂದು ಶ್ರೀಕೃಷ್ಣಮಠದ ಮೂಲಗಳು ತಿಳಿಸಿವೆ.
ಮೃಣ್ಮಯ ಮೂರ್ತಿಯೂ ಸಿದ್ಧ
ವಿಟ್ಲಪಿಂಡಿ ಉತ್ಸವದಲ್ಲಿ ರಥದಲ್ಲಿ ಸ್ಥಾಪಿಸಲಾಗುವ ಕೃಷ್ಣನ ಮೃಣ್ಮಯ ಮೂರ್ತಿ ಸಿದ್ಧಗೊಂಡಿದೆ. ಭಾಗೀರಥಿ ಜಯಂತಿಯಂದು ಕೃಷ್ಣ ಮಠದ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ಹೀಗಾಗಿ ಚಾತುರ್ಮಾಸ ವ್ರತ ಕಾಲದಲ್ಲಿ ಯಾವುದೇ ಉತ್ಸವಗಳು ಇರುವುದಿಲ್ಲ. ಮತ್ತೆ ಉತ್ಥಾನ ದ್ವಾದಶಿಯಂದು ಮೂರ್ತಿಯನ್ನು ಹೊರತರಲಾಗುತ್ತದೆ. ವಿಟ್ಲಪಿಂಡಿ ಉತ್ಸವದಂದು ರಥೋತ್ಸವ ನಡೆಯಲಿರುವುದರಿಂದ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ ಮೆರವಣಿಗೆ ಮೂಲಕ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ.
ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚೆನ್ನೈನ ಪದ್ಮಭೂಷಣ ಟಿ.ವಿ.ಶಂಕರನಾರಾಯಣ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ