ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಯಕ್ಷಗಾನ
Team Udayavani, Jan 9, 2020, 6:59 AM IST
ಕಿರಿಮಂಜೇಶ್ವರದ ಸುಬ್ರಹ್ಮಣ್ಯ ಧಾರೇಶ್ವರ ಅವರು ಬಡಗುತಿಟ್ಟಿನ ಯಕ್ಷಗಾನದಲ್ಲಿ ದೊಡ್ಡ ಹೆಸರು. ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಕಾಳಿಂಗ ನಾವಡರು ಹಾಗೂ ಧಾರೇಶ್ವರರು ಹೊಸತನದ ಮೂಲಕ ದೊಡ್ಡ ಕ್ರಾಂತಿ ಮಾಡಿದವರು. ಸುದಿನದೊಂದಿಗಿನ ಮಾತುಕತೆಯ ಭಾಗವಿದು.
ಲಕ್ಷ್ಮೀನಾರಾಯಣ ಭಟ್ಟ ಮತ್ತು ಲಕ್ಷ್ಮೀ ದಂಪತಿಯ ಏಕಮಾತ್ರ ಪುತ್ರ. 1957 ಸೆ,5ರಂದು ಗೋಕರ್ಣದಲ್ಲಿ ಜನಿಸಿದರು. ಎಳೆಯ ಪ್ರಾಯದಲ್ಲೇ ಸುಗಮ ಸಂಗೀತ ಅಭ್ಯಸಿಸಿ 100ಕ್ಕೂ ಮಿಕ್ಕಿ ಸಾರ್ವಜನಿಕ ಕಾರ್ಯಕ್ರಮ ನೀಡಿ ಭಕ್ತಿಗೀತೆಯ ಧ್ವನಿಸುರುಳಿಗಳಲ್ಲಿ ಹಾಡಿದ್ದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಅಮೃತೇಶ್ವರಿ ಮೇಳದಲ್ಲಿ ವಿದ್ಯುತ್ ಸಂಯೋಜಕರಾಗಿ ಸೇರಿದರು. ಇವರ ಆಸಕ್ತಿ ಗಮನಿಸಿದ ಗುರುಗಳು ಸಂಗೀತಗಾರರಾಗಿ ಭಡ್ತಿ ನೀಡಿದರು. ಘಟಾನುಘಟಿ ಕಲಾವಿದರ ಒಡನಾಟ ಮಾರ್ಗದರ್ಶನ ದೊರೆಯಿತು. ಬಳಿಕ ಪಂಚಲಿಂಗೇಶ್ವರ ಮೇಳದಲ್ಲಿ ಸೇವೆ ಸಲ್ಲಿಸಿ, ನಂತರ 26 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಹೆಸರು, ಖ್ಯಾತಿ ಗಳಿಸಿದರು. ಬಡಗಿನ ಕುಂಜಾಲು ಮತ್ತು ಮಾರ್ವಿ ಎರಡೂ ಶೈಲಿಯ ಪ್ರಾತಿನಿಧಿಕರಾಗಿದ್ದು ಕಂಠಸಿರಿಯಿಂದಲೇ ಲಕ್ಷಾಂತರ ಯಕ್ಷಗಾನ ಪ್ರೇಕ್ಷಕರ
ಹೃದಯಸಿಂಹಾಸನದಲ್ಲಿ ನೆಲೆಸಿದವರು.
ಶುದ್ಧ ಯಕ್ಷಗಾನ ಪರಂಪರೆಯ ಕಾಲ ಘಟ್ಟದಲ್ಲಿ ಹಿಂದೂಸ್ತಾನಿ, ಜನಪದ ಶೈಲಿ ಬಳಕೆ ಮೂಲಕ ಭಾಗವತಿಕೆಯಲ್ಲಿ ಹೊಸ ಅಲೆ ಹುಟ್ಟಿಸಿದವರು ನೀವು. ಹೇಗೆ ಸ್ವೀಕರಿಸಿದರು ಜನ?
-ವಿರೋಧ ಬಂದಿದೆ. ಆ ಕಾಲದ ವಿರೋಧಗಳು ನಮ್ಮನ್ನು ಎಚ್ಚರಿಸುವಂತಿದ್ದವು. ಈಗ ತೀರಾ ಕೀಳು ಕಮೆಂಟ್ಸ್ ಬರುತ್ತದೆ. ಆಗ ಅದರ ಪ್ರಮಾಣ ಕಡಿಮೆ ಇತ್ತು. ಶೂದ್ರ ತಪಸ್ವಿನಿಯ ಕೊರವಂಜಿ ಹಾಡಿನ ರಾಗಕ್ಕೆ ಬಂದ ಆಕ್ಷೇಪಕ್ಕೆ ನಾನು ಪತ್ರಿಕಾಗೋಷ್ಠಿ ಕರೆದು ಅದು ಪುನ್ನಾಗತೋಡಿ ರಾಗದ್ದು ಎಂದು ಉತ್ತರಿಸಬೇಕಾಯಿತು. ಈಗ ಯಾರೂ ಯಾರನ್ನೂ ವಿಮರ್ಶಿಸುವ ಕಾಲ. ವಿಮರ್ಶೆಗೆ ಮಾನದಂಡ ಇಲ್ಲ. ಆದರೆ ಇಂಥ ವಿಮರ್ಶೆಯಿಂದ ಇಷ್ಟಾದರೂ ಯಕ್ಷಗಾನ ನಿಂತಿದೆ ಎನ್ನಬಹುದು.
ಕಾಳಿಂಗ ನಾವಡರು ಮತ್ತು ನೀವು ಆ ಕಾಲದ ಬದಲಾವಣೆಯಲ್ಲಿ ಮುಂಚೂಣಿ ವಹಿಸಿದವರು…
-ನಾನು ಮತ್ತು ಅವರು ಮಾತಾಡಿಕೊಳ್ಳುತ್ತಿದ್ದೆವು. ವಿಮರ್ಶೆ ಮಾಡಿಕೊಳ್ಳುತ್ತಿದ್ದೆವು. ಅವರೂ ಅಷ್ಟೇ ಸಹೃದಯರಾಗಿ ಚರ್ಚೆಗೆ ಒಡ್ಡಿಕೊಳ್ಳುತ್ತಿದ್ದರು.
ಭಾಗವತರ ಪಾತ್ರ ಔಚಿತ್ಯ, ಕಾಲೌಚಿತ್ಯ ಕುರಿತು?
-ಅದಿಲ್ಲದಿದ್ದರೆ ರಂಗ ಹಾಳಾಗುತ್ತದೆ. ಚಿತ್ರಾಂಗದೆ, ಸುಭದ್ರೆ ಎರಡೂ ಸ್ತ್ರೀ ಪಾತ್ರಗಳೇ ಇರಬಹುದು. ಮೂರು ಲೋಕ ಗೆದ್ದ ಅರ್ಜುನನ ಮಡದಿ, ರಾಣಿಯರು. ಅವರನ್ನು ಹೆಚ್ಚು ಕುಣಿಸಬಾರದು. ಈಗ ಕೆಲವರು ಮುಕ್ಕಾಲು ಗಂಟೆ ಕುಣಿಸುತ್ತಾರೆ. ಔಚಿತ್ಯಪ್ರಜ್ಞೆ ಇರಬೇಕು. ಬಭುವಾಹನ ಕಾಳಗದ ಅರ್ಜುನನಿಗೆ ಕುಂದಾಪುರ ಕಡೆ ಚಾಪೆ ಅರ್ಜುನ ಎಂದೇ ಹೆಸರು! ಈ ರಂಗ ಮಾಹಿತಿ ಕಲಾವಿದರಿಗೆ ಇರಬೇಕು.
ಯಕ್ಷಗಾನ ಕೆಡಿಸುವಲ್ಲಿ ಕಲಾವಿದರ ಪಾತ್ರ ಇದೆ ಎಂದೆನಿಸು ತ್ತದೆಯೇ?
-ಕಲಾವಿದರ ಕಲೆಗೆ ಅನ್ಯಾಯವಾಗಬಾರದು ಎಂಬ ಬದ್ಧತೆಯಿಂದ ಪ್ರಾಮಾಣಿಕವಾಗಿ ದುಡಿಯಬೇಕು. ಹರಕೆದಾರ, ಸಂಘಟಕ ಕಲಾವಿ ದನ ಪ್ರದರ್ಶನ ಕುರಿತು ಪ್ರತಿಕ್ರಿಯಿಸುವುದಿಲ್ಲ. ಅರ್ಪಣಾ ಭಾವದಿಂದ ಆಟ ಆಡಿಸುತ್ತಾರೆ. ಇಂದಿಗೂ ಮಾರಣಕಟ್ಟೆ, ಮಂದಾರ್ತಿ, ಕಟೀಲು, ಧರ್ಮಸ್ಥಳ ಮೊದಲಾದ ಕ್ಷೇತ್ರಗಳ ಮೇಳಗಳ ಕುರಿತು ಜನರಿಗೆ ಭಾವನಾತ್ಮಕ ಒಲವು ಇದೆ. ಅವರ ಭಾವನೆಗೆ ಧಕ್ಕೆ ಬರದಂತೆ ಕಲಾವಿದ ಜಾಗರೂಕನಾಗಿರಬೇಕು.
ಸಾಮಾಜಿಕ ಜಾಲತಾಣದ ಹೊರ ತಾಗಿ ಯಕ್ಷಗಾನವನ್ನು ಯುವ ಜನತೆಗೆ ಹೇಗೆ ತಲುಪಿಸಬಹುದು?
-ಪೌರಾಣಿಕ ಪ್ರಸಂಗಗಳನ್ನೇ ಹೊಸದಾಗಿ ಜನರಿಗೆ ನೀಡಬೇಕು. ಪುರಾಣದೊಳಗಿನ ಸತ್ಯ ಸಮಾಜಕ್ಕೆ ತೆರೆದಿಡಬೇಕು. ಪುರಾಣ ಪಾತ್ರಗಳ ಕುರಿತಾದ ನಂಬಿಕೆ ಬೇರೆಯೇ ವಾಸ್ತವ ಬೇರೆಯೇ ಎನ್ನುವ ಮಾಹಿತಿ ಅರಿವಾಗಬೇಕು. ಅದೇ ಹಳೆ ಪ್ರಸಂಗಗಳನ್ನು ಮತ್ತೆ ಮತ್ತೆ ಪ್ರದರ್ಶಿಸುವ ಬದಲು ಪುರಾಣದ ಹೊಸ ಕಥೆಗಳನ್ನು ಪ್ರಯತ್ನಿಸಬೇಕು. ಸಾವಿರಾರು ಪ್ರಸಂಗಗಳಿವೆ, ಪ್ರದರ್ಶನ ಕಾಣುವುದು ಕೆಲವು ಮಾತ್ರ.
ರಾಜಕೀಯ ವ್ಯಕ್ತಿಗಳ ಯಕ್ಷಗಾನ ಬರುತ್ತಿದೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು?
– ಯಕ್ಷಗಾನ ರಂಗಭೂಮಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜನರಿಗೆ ಕೊಡುವ ಸಂದೇಶ ಮುಖ್ಯ. ದ.ಕ., ಉಡುಪಿಯ ಮನೆಮನೆಗಳಲ್ಲಿ ಯಕ್ಷಗಾನ ಬೆಳೆದಿದೆ. ರಾಮಾಯಣ, ಮಹಾಭಾರತ ಇಡೀ ಗ್ರಂಥ ಓದುವ ತಾಳ್ಮೆ, ಜಾಣ್ಮೆ ಕಡಿಮೆಯಿದ್ದರೂ ಯಕ್ಷಗಾನ ಅದರ ಕಥಾಸಾರ ತಿಳಿಸುತ್ತದೆ. ಯಕ್ಷಗಾನದ ಪ್ರಭಾವದಿಂದ ಸಮಾಜ ದಾನಿಯನ್ನು ಕರ್ಣ ಎಂದು, ಡಬ್ಬಲ್ಗೇಮ್ ಆಡುವವನನ್ನು ಶಕುನಿ ಎಂದೂ ಕರೆಯುತ್ತದೆ. ಒಳ್ಳೆಯ ವ್ಯಕ್ತಿಯ ಸಂದೇಶ ಕೊಡುವ ಕಥಾನಕವಾದರೆ ಪರವಾಗಿಲ್ಲ. ಇಂದೊಬ್ಬರ ಕಥೆ, ನಾಳೆ ಇನ್ನೊಬ್ಬರ ಕಥೆ ಎಂದು ಸಂಘರ್ಷದ ಹಂತಕ್ಕೆ ತಲುಪಬಾರದು.
ಪ್ರಚಂಡ ವೀರಪ್ಪನ್ ಎಂಬ ಯಕ್ಷಗಾನ ಬಂದಿತ್ತಲ್ಲವೇ?
-ಇದು ಕೂಡ ಯಕ್ಷಗಾನದ ಮೂಲಕ ಸಂದೇಶ ನೀಡುವ ಪ್ರಯತ್ನ. ಚಿಟ್ಟಾಣಿಯವರೇ ವೀರಪ್ಪನ್ ಪಾತ್ರ ಮಾಡಿದ್ದರು. ಆದರೆ ಅಲ್ಲಿ ಆತನ ಅಂತ್ಯ ವಾಗುವ ಮೂಲಕ, ರಾಜ, ಮಂತ್ರಿಯೇ ಆತನನ್ನು ಬೆಳೆಸಿದ್ದು ಎಂದು ಹೇಳುವ ಸಂದೇಶವನ್ನು ನೀಡಿದ್ದೆವು.
ಸಾಮಾಜಿಕ ಪ್ರಸಂಗಗಳ ಕುರಿತಾಗಿ ನಿಮ್ಮ ಅಭಿಪ್ರಾಯ?
-ಎಲ್ಲ ಸಾಮಾಜಿಕ ಪ್ರಸಂಗಗಳ ಕುರಿತಾಗಿ ನಾನು ಪ್ರತಿಕ್ರಿಯಿಸುವುದಿಲ್ಲ. ಅನೇಕ ಪ್ರಸಂಗಗಳು ಸಮಾಜಕ್ಕೆ ಹಿರಿನಾಗರದ ನಂಜು ಕಿರಿನಾಗರದ ಪಾಲು, ತಂದೆ ಮಾಡಿದ ಪಾಪ ಕುಲದ ಪಾಲು ಎಂಬಂತಹ ಸಂದೇಶ ನೀಡುವಂತಹವು. ಪೌರಾಣಿಕ ಪ್ರಸಂಗಗಳಲ್ಲಿ ಸಂದೇಶ ನೀಡಲು ಒಂದು ಚೌಕಟ್ಟು ಇರುತ್ತದೆ. ಆದರೆ ಸಾಮಾಜಿಕದಲ್ಲಿ ಆ ಚೌಕಟ್ಟನ್ನು ವಿಸ್ತರಿಸಬಹುದು.
ಸಾಮಾಜಿಕ ಪ್ರಸಂಗಗಳಲ್ಲಿ ಸಿನೆಮಾ ರಾಗಗಳ ಬಳಕೆ ಕುರಿತು?
-ಯಾವುದೇ ರಾಗ ಆದರೂ ಅದು ಸಂಗೀತದ್ದೇ ಆಗಿರುತ್ತದೆ. ಅದನ್ನು ಸಿನೆಮಾದಲ್ಲಿ ಬಳಸಿರಬಹುದು. ಹಾಗಂತ ಸಿನೆಮಾ ಶೈಲಿಯ ನೇರ ಅನುಕರಣೆ ಅಷ್ಟೇನೂ ಹಿತವಲ್ಲ. ನಾನು ನಾಗವಲ್ಲಿಯ ರಾ ರಾ ಹಾಡನ್ನು ಮಾತ್ರ ನೇರ ಬಳಸಿದ್ದು. ಉಳಿದಂತೆ, ಹುಡುಕುವವನಿಗೆ ಎಲ್ಲೋ ಕೇಳಿದ ಹಾಗಿದೆ ಎಂಬ ಭ್ರಮೆ ಹುಟ್ಟಿಸಿ ಎಲ್ಲಿ ಎಂದು ಸಿಗದಂತಿರುವ ಹಾಗೆ ಬಳಸುತ್ತೇನೆ.
ಇಷ್ಟದ ರಾಗಗಳು?
-ಮಾಲ್ಕೋಂಸ್ (ಹಿಂದೋಳ), ಮಧ್ಯಮಾ ವತಿ, ಭೀಮ್ಪಲಾಸ್, ಬೃಂದಾವನಸಾರಂಗ, ಉದಯರವಿಚಂದ್ರಿಕಾ, ಚಾರುಕೇಶಿ
- ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ