ಗ್ರಾ.ಪಂ. ಪಿಡಿಒಗಳ ತಾಲೂಕು ಮಟ್ಟದ ಸ್ವೀಪ್ ಸಮಿತಿ ಸಭೆ
Team Udayavani, Mar 25, 2019, 6:30 AM IST
ಕುಂದಾಪುರ: ಲೋಕಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಕುಂದಾಪುರ ತಾಲೂಕಿನ ಎಲ್ಲ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಗಳ ತಾ| ಮಟ್ಟದ ಸ್ವೀಪ್ ಸಮಿತಿ ಸಭೆ ಶನಿವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡೆ°àಕರ್ ಮಾತನಾಡಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದು ಜಿಲ್ಲಾ ಸ್ವೀಪ್ ಸಮಿತಿಯ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಆಯಾಯ ಗ್ರಾಮ ಮಟ್ಟದಲ್ಲಿ ಗ್ರಾ. ಪಂ. ಪಿಡಿಒಗಳು ಅರಿವು ಮೂಡಿಸುವ ಕೆಲಸ ಮಾಡಬೇಕು. ಇದರೊಂದಿಗೆ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡ ತಮ್ಮ ವ್ಯಾಪ್ತಿಯ ಮತದಾರರಿಗೆ ವಿವಿ ಪ್ಯಾಟ್ ಮತ್ತು ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಬೇಕು ಎಂದರು.
ಪಂಚಾಯತ್ ಕಾರ್ಯ ನಿರ್ವಹಿಸಿ
ಚುನಾವಣೆ ಜತೆ – ಜತೆಗೆ ಪಿಡಿಒಗಳು ಪಂಚಾಯತ್ನಲ್ಲಿರುವ ಎಲ್ಲ ರೀತಿಯ ತೆರಿಗೆ ಸಂಗ್ರಹ, ನರೇಗಾ ವರದಿ ಸಹಿತ ಇನ್ನಿತರ ಕಾರ್ಯಗಳನ್ನು ಕೂಡ ನಿಭಾಯಿಸಿ. ಇನ್ನು ಎಲ್ಲಿಯೂ ಕೂಡ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಇರುವಂತಹ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ. ಚುನಾವಣೆ ಇದೆ ಅನ್ನುವ ನೆಪವೊಡ್ಡಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಇಒ ಅವರು ಅಧಿಕಾರಿಗಳಿಗೆ ಹೇಳಿದರು.
ತಾಲೂಕು ಮಟ್ಟದ ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಇಬ್ರಾಹಿಂಪುರ್, ವ್ಯವಸ್ಥಾಪಕ ಅನಿಲ್, ತಾ.ಪಂ. ಸಿಬಂದಿ ಹಾಗೂ ಎಲ್ಲ 65 ಗ್ರಾ.ಪಂ.ಗಳ ಪಿಡಿಒಗಳು ಪಾಲ್ಗೊಂಡಿದ್ದರು.