ಎಲ್ಲ ಆಶ್ವಾಸನೆ ಈಡೇರಿಕೆಗೆ ಬದ್ಧ: ಸಂಸದ ಬಿ.ವೈ. ರಾಘವೇಂದ್ರ
Team Udayavani, Jun 1, 2019, 10:47 AM IST
ಕುಂದಾಪುರ : ಶಿವಮೊಗ್ಗದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೈಂದೂರಲ್ಲಿ 1 ಲಕ್ಷಕ್ಕೂ ಮಿಕ್ಕಿ ಮತ ಸಿಕ್ಕಿದ್ದು, ಗರಿಷ್ಠ 72 ಸಾವಿರ ಮತಗಳ ಅಂತರದ ಮುನ್ನಡೆಯೂ ಸಿಕ್ಕಿದೆ. ಕ್ಷೇತ್ರದಲ್ಲಿ ಆಗಬೇಕಿರುವ ವಿಮಾನ ನಿಲ್ದಾಣ ಸಹಿತ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಸಮಸ್ಯೆಗಳ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲು ಬದ್ಧ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ಬೈಂದೂರು ವಿಧಾನಸಭಾ ಕ್ಷೇತ್ರಾದ್ಯಂತ ವಿವಿಧೆಡೆಗಳಲ್ಲಿ ನಡೆದ ಬಿಜೆಪಿ ವಿಜಯೋತ್ಸವ ಯಾತ್ರೆಯಲ್ಲಿ ಮಾತನಾಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಪೂರ್ವ ಬೆಂಬಲ ವ್ಯಕ್ತವಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರದಲ್ಲಿ ಮತ್ತೂಮ್ಮೆ ಅಧಿಕಾರಕ್ಕೇರಲು ಸಹಾಯವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎನ್ನುವ ದೇಶದ ಬಹುತೇಕ ಜನರ ಆಸೆಯೂ ಕೈಗೂಡಿದ್ದು, ಪಕ್ಷದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು
ವಿಜಯೋತ್ಸವ ಯಾತ್ರೆಯು ಕೊಲ್ಲೂರಿನಿಂದ ಆರಂಭಗೊಂಡು, ಗೋಳಿಹೊಳೆ, ಬೈಂದೂರು, ಉಪ್ಪುಂದ, ಶಿರೂರು, ಬಿಜೂರು, ಕೆರ್ಗಾಲು, ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್, ಮರವಂತೆ, ಗುಜ್ಜಾಡಿ, ತಲ್ಲೂರು, ನೇರಳಕಟ್ಟೆ, ಅಂಪಾರು, ಶಂಕರನಾರಾಯಣ, ಸಿದ್ದಾಪುರದ ಮೂಲಕ ಸಾಗಿ, ನೆಂಪುವಿನಲ್ಲಿ ಸಮಾಪನಗೊಂಡಿತು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿಗಳಾದ ಬಾಲಚಂದ್ರ ಭಟ್, ದೀಪಕ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದತ್ತಾತ್ರೇಯ, ಜಿ.ಪಂ. ಸದಸ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.