ಭಕ್ತಿಯಿಂದ ಭಗವಂತನ ಸಾಕ್ಷಾತ್ಕಾರ: ಡಾ| ಹೆಗ್ಗಡೆ
ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರಕ್ಕೆ ಶಿಲಾನ್ಯಾಸ
Team Udayavani, Feb 20, 2020, 1:41 AM IST
ಬೈಂದೂರು: ಭಗವಂತನ ಭಕ್ತಿಮಾರ್ಗಗಳಲ್ಲಿ ಭಜನೆ ಕೂಡ ಒಂದು. ನವ ವಿಧ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಬಹುದಾಗಿದ್ದು ಭಜನೆ ಸುಲಭದ ಮಾರ್ಗವಾಗಿದೆ. ಭಕ್ತಿಯಿಂದ ಮಾತ್ರ ಭಗವಂತನ ಸಾಕ್ಷಾ ತ್ಕಾರ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಹೇರಂಜಾಲು ಗ್ರಾಮದ ಗುಡೇ ಮಹಾಲಿಂಗೇಶ್ವರ ಭಜನ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಅಖಂಡ ಭಜನ ಸಪ್ತಾಹದ ಜತೆಗೆ ಮಹಾ ಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ರಾಜಗೋಪುರ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವಾಲಯಕ್ಕೆ ರಾಜಗೋಪುರದ ಅಗತ್ಯವನ್ನು ಪ್ರಸ್ತಾವಿಸಿದ ಹೆಗ್ಗಡೆ ಯವರು ಅದರ ಎತ್ತರ ಮತ್ತು ಭವ್ಯತೆ ಆಕಾಶಮಾರ್ಗದಲ್ಲಿ ಸಂಚರಿಸುವ ದೇವತೆಗಳನ್ನು ದೇವಾಲಯದತ್ತ ಆರ್ಕಷಿಸುತ್ತದೆ ಎಂದು ನಂಬಲಾಗು ತ್ತದೆ. ದೇವಾಲಯದಲ್ಲಿ ಒಬ್ಬ ದೇವರಿದ್ದರೆ ಗೋಪುರದಲ್ಲಿ ಎಲ್ಲ ದೇವರುಗಳೂ ಇರುತ್ತಾರೆ. ಭಗವಂತನ ನಾಮ ಹಲವಿದ್ದರೂ ದೇವರು ಒಬ್ಬನೇ ಎಂಬ ಕಲ್ಪನೆ ಮೂಡಿಸುತ್ತದೆ. ರಾಜಗೋಪುರ ದೇವಾಲಯ ಪ್ರವೇಶಿಸುವ ಭಕ್ತರಲ್ಲೂ ದೇವರ ದೊಡ್ಡತನದ ಭಾವ ಹುಟ್ಟಿಸುತ್ತದೆ ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ದೇವಸ್ಥಾನದ ಗೌರವಾಧ್ಯಕ್ಷ ಎಚ್. ಜಯಶೀಲ ಶೆಟ್ಟಿ, ಆಗಮ ವಿದ್ಯಾವಾರಿಧಿ ಕಟ್ಟೆ ಶಂಕರ ಭಟ್ಟ, ಧರ್ಮದರ್ಶಿ ಎಚ್. ಪದ್ಮನಾಭ ಮೆರ್ಟ, ಉದ್ಯಮಿ ಕೃಷ್ಣ ಪೂಜಾರಿ, ಖಜಾಂಚಿ ಎಚ್. ವಿಜಯ ಶೆಟ್ಟಿ ಹಾಜರಿದ್ದರು. ವಿನಾಯಕ ಮೆರ್ಟ ಸ್ವಾಗತಿಸಿದರು. ಭಜನ ಮಂಡಳಿಯ ಅಧ್ಯಕ್ಷ ಶ್ರೀನಾಥ ಮೆರ್ಟ ಮಾತನಾಡಿದರು. ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಮೆರ್ಟ ವಂದಿಸಿದರು.