“ಅಪ್ಪೆ ಟೀಚರ್’ ಟೀಂ ಸೃಷ್ಟಿಸಿದ “ಮಾಲ್ಗುಡಿ ಡೇಸ್’
Team Udayavani, Oct 24, 2019, 4:00 AM IST
ವೆರೈಟಿ ಸಿನೆಮಾಗಳ ಮೂಲಕ ಸದ್ದುಮಾಡಿದ ಕೋಸ್ಟಲ್ವುಡ್ನಲ್ಲಿ “ಅಪ್ಪೆ ಟೀಚರ್’ ಸಿನೆಮಾ ಬಹಳಷ್ಟು ಕ್ರೇಜ್ ಹುಟ್ಟಿಸಿತ್ತು. ಕಾಮಿಡಿ ಹಾಗೂ ಹೊಸ ಗೆಟಪ್ನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾರಂಗದಲ್ಲಿ ಹೊಸ ಶಕೆಯನ್ನೇ ಹುಟ್ಟುಹಾಕಿತ್ತು.
ಸ್ವಯಂಪ್ರಭಾ ಎಂಟರ್ಟೈನ್ಮೆಂಟ್ ಹಾಗೂ ಪ್ರೊಡಕ್ಷನ್ ಅರ್ಪಿಸಿದ ಕೆ. ರತ್ನಾಕರ್ ಕಾಮತ್ ನಿರ್ಮಾಣ, ಕಿಶೋರ್ ಮೂಡುಬಿದಿರೆ ಕಥೆ-ಚಿತ್ರಕಥೆ, ನಿರ್ದೇಶನದ ಸಿನೆಮಾವಿದು. ಕಿಶೋರ್ ಅವರ ಅಪ್ಪೆ ಟೀಚರ್ ಸಕ್ಸಸ್ ಆಗುತ್ತಿದ್ದಂತೆ ಅವರ ಮುಂದಿನ ಸಿನೆಮಾ ಯಾವುದು? ಎಂಬ ಕುತೂಹಲ ಶುರುವಾಗಿತ್ತು. ಕೋಸ್ಟಲ್ವುಡ್ನಲ್ಲಿಯೇ ತೊಡಗಿಸಲಿದ್ದಾರೆಯೇ? ಅಥವಾ ಸ್ಯಾಂಡಲ್ವುಡ್ನತ್ತ ಪಯಣಿಸಲಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿತ್ತು. ಈಗ ಈ ಪ್ರಶ್ನೆಗಳಿಗೆ ಉತ್ತರ ದೊರಕಿದೆ.
ಕನ್ನಡದಲ್ಲಿ ಹೊಸ ಬಗೆಯ ಸಿನೆಮಾ ಮಾಡುವ ತವಕದೊಂದಿಗೆ “ಮಾಲ್ಗುಡಿ ಡೇಸ್’ ಎಂಬ ಕಥಾನಕವನ್ನು ಪ್ರಸ್ತುತಪಡಿಸಲು ಕಿಶೋರ್ ಅವರು ಮುಂದೆ ಬಂದಿದ್ದಾರೆ. ಅಪ್ಪೆ ಟೀಚರ್ ಸಿನೆಮಾದ ನಿರ್ಮಾಪಕ ಕೆ. ರತ್ನಾಕರ್ ಕಾಮತ್ ಅವರೇ ಈ ಸಿನೆಮಾಕ್ಕೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಅಪ್ಪೆ ಟೀಚರ್ನ ಮುಖ್ಯ ನೆಲೆಯಲ್ಲಿದ್ದವರೇ ಈಗ ಕನ್ನಡ ಸಿನೆಮಾ ಮಾಡಿದಂತಾಗಿದೆ.
ಫೆ. 24ಕ್ಕೆ “ಮಾಲ್ಗುಡಿ ಡೇಸ್’ ಸಿನೆಮಾದ ಮುಹೂರ್ತ ನಡೆದಿತ್ತು. ಆ. 3ರ ವರೆಗೆ 3 ಹಂತದಲ್ಲಿ ಚಿತ್ರೀಕರಿಸಿ ಎಡಿಟಿಂಗ್ ಡಬ್ಬಿಂಗ್ ಮುಗಿದಿತ್ತು. ವಿಜಯ ರಾಘವೇಂದ್ರ
ವಿಶೇಷ ಪಾತ್ರದ ಮೊದಲ ಪೋಸ್ಟರ್ ಈಗ ಸಾಕಷ್ಟು ಸುದ್ದಿ ಮಾಡುತ್ತಿದೆ. ವಿಜಯ ರಾಘವೇಂದ್ರರ ವೃತ್ತಿ ಜೀವನದಲ್ಲಿ ಇದೊಂದು ವಿಶೇಷ ಸಿನೆಮಾ. ಏಕೆಂದರೆ ಇಲ್ಲಿ ಅವರು ಹಿಂದೆಂದೂ ನಿರ್ವಹಿಸದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಅಲ್ಲದೆ ಒಂದು ವರ್ಷದಿಂದ ವಿಜಯ ರಾಘವೇಂದ್ರ ಅವರು ತಮ್ಮನ್ನು ಬೇರೆ ಯಾವ ಸಿನೆಮಾದಲ್ಲೂ ತೊಡಗಿಸದೆ ತಮ್ಮನ್ನು ಪೂರ್ತಿಯಾಗಿ ಅರ್ಪಿಸಿದ್ದಾರೆ. ಕಥಾ ನಾಯಕಿಯಾಗಿ ಗ್ರೀಷ್ಮಾ ಶ್ರೀಧರ್ ಅವರು ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಅವರ ಜತೆ ಬಿಗ್ಬಾಸ್ ಖ್ಯಾತಿಯ ಧನರಾಜ್, ಗೋಪಿನಾಥ್ ಭಟ್, ರೂಪೇಶ್, ತೇಜಸ್ವಿನಿ, ಸಂದೇಶ್ ಜೈನ್ ಇದ್ದಾರೆ.
ಒಟ್ಟು 60 ದಿನಗಳ ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ತೀರ್ಥಹಳ್ಳಿ, ಪಾಂಡಿಚೇರಿ, ಬಾಳೆಹೊನ್ನೂರು, ಕಳಸ, ಶೃಂಗೇರಿ, ಆಗುಂಬೆಯ ಸುತ್ತಮುತ್ತ ಮಾಡಲಾಗಿದೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಒಟ್ಟು 6 ಹಾಡುಗಳಿವೆ. ಪ್ರದೀಪ್ ನಾಯಕ್ ಸಂಕಲನ, ಉದಯ್ ಲೀಲಾ ಕೆಮರಾ ಕೈಚಳಕವಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ರವಿಶಂಕರ್ ಪೈ, ಪೋಸ್ಟರ್ ಡಿಸೈನರ್ ಆಗಿ ಅಶ್ವಿನ್ ರಮೇಶ್, ಕಾಸ್ಟೂಮ್ ಡಿಸೈನರ್ ಶಿಲ್ಪಾ ಹೆಗ್ಡೆ ಮತ್ತು ರೋಷನ್ ಅಯ್ಯಪ್ಪ ನಿರ್ವಹಿಸಿದ್ದಾರೆ. ವಿಜಯ ರಾಘವೇಂದ್ರ ಅವರ ವಿಶೇಷ ಪಾತ್ರದ ಪ್ರೊಸ್ತೆಟಿಕ್ ಮೇಕಪ್ನ್ನು ಕೇರಳ ಮೂಲದ ರೋಷನ್ ಎನ್.ಜಿ. ಮಾಡಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಸಿನೆಮಾ ಬಿಡುಗಡೆಯ ನಿರೀಕ್ಷೆಯಲ್ಲಿದೆ.
- ದಿನೇಶ್ ಇರಾ