ಎಂ.ಟಿ. ರಸ್ತೆ: ಅರ್ಧದಲ್ಲಿ ಬಾಕಿಯಾದ ಚರಂಡಿ ದುರಸ್ತಿ!
Team Udayavani, Jun 22, 2019, 5:00 AM IST
ನಗರ: ನಗರದ ಎಂ.ಟಿ. ರಸ್ತೆಯಲ್ಲಿ ಹೊಸದಾಗಿ ಅಳವಡಿಸಲಾದ ಕಾಂಕ್ರೀಟ್ ರಸ್ತೆ ಬದಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆಗೊಂಡಿದೆ.
ಎಂ.ಟಿ. ರಸ್ತೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭದಲ್ಲಿ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನೂ ಸಮರ್ಪಕಗೊಳಿಸಲಾಗುವುದು ಎಂದು ಸ್ಥಳೀಯಾಡಳಿತ ನಗರಸಭೆ ಭರವಸೆ ನೀಡಿತ್ತು. ಕಾಂಕ್ರೀಟ್ ರಸ್ತೆ ಇತ್ತೀಚೆಗೆ ಸಂಚಾರಕ್ಕೆ ಮುಕ್ತಗೊಂಡಿತ್ತು. ಆದರೆ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ.
ಚರಂಡಿಯನ್ನು ಪೂರ್ಣಗೊಳಿಸದೇ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜತೆಗೆ ತ್ಯಾಜ್ಯಗಳೂ ತುಂಬಿಕೊಂಡಿವೆ. ಇಲ್ಲಿಯೇ ಪರ್ಲಡ್ಕ ಭಾಗಗಳಿಗೆ ಹೋಗುವ ರಿಕ್ಷಾಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪ್ಪತ್ತಿಯಾಗಿರುವುದರಿಂದ ಮತ್ತು ದುರ್ನಾತ ಬೀರುತ್ತಿರುವುದರಿಂದ ಈ ಭಾಗದಲ್ಲಿ ಸಾಗುವ ವಾಹನಗಳು, ಪಾರ್ಕಿಂಗ್ನಲ್ಲಿನ ರಿಕ್ಷಾ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ರೋಗ ಹರಡುವ ಭಯವೂ ಎದುರಾಗಿದೆ.
ಕ್ರಮಕ್ಕೆ ಆಗ್ರಹ
ಮಳೆಗಾಲದಲ್ಲಿ ರಸ್ತೆ ಚರಂಡಿ ದುರಸ್ತಿಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆಗಳು ಉದ್ಭವಿಸಲು ಸಾಧ್ಯವಿರಲಿಲ್ಲ. ಇನ್ನಾದರೂ ನಗರಸಭೆ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರಿಕ್ಷಾ ಚಾಲಕರ ಹಾಗೂ ಸ್ಥಳೀಯರ ಆಗ್ರಹವಾಗಿದೆ.