ಇನ್ನೂ 13 ಶಾಸಕರ ರಾಜೀನಾಮೆ ಪೆಂಡಿಂಗ್: ಮುಂದುವರಿದ ಅತಂತ್ರ ಸ್ಥಿತಿ
ಪ್ರಸಕ್ತ ವಿಧಾನಸಭೆಗೆ ರಮೇಶ್ ಜಾರಕಿಹೊಳಿ, ಕುಮಟಳ್ಳಿ, ಶಂಕರ್ ಸ್ಪರ್ಧಿಸುವಂತಿಲ್ಲ
Team Udayavani, Jul 26, 2019, 6:10 AM IST
ಬೆಂಗಳೂರು: ರಾಜ್ಯ ರಾಜಕೀಯ ಸ್ಥಿತಿ ಡೋಲಾಯಮಾನವಾಗಿರುವ ನಡುವೆಯೇ, ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಹದಿನೈದನೇ ವಿಧಾನಸಭೆಯಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ಕುಮಾರ್ ತೀರ್ಪು ನೀಡಿದ್ದಾರೆ.
ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳು ಆರಂಭವಾಗಿವೆ. ಅನರ್ಹಗೊಂಡ ಈ ಶಾಸಕರು ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ (ಇನ್ನೂ 3 ವರ್ಷ 10 ತಿಂಗಳು) ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಅಥವಾ ಅಧಿಕಾರ ಅನುಭವಿಸುವ ಹಾಗಿಲ್ಲ. ಒಂದು ವೇಳೆ, ಈ ವಿಧಾನಸಭೆಯ ಅವಧಿ ಮೊಟಕುಗೊಂಡಲ್ಲಿ 16ನೇ ವಿಧಾನಸಭೆಗೆ ನಡೆಯಬಹುದಾದ ಚುನಾವಣೆಗೆ ಸ್ಪರ್ಧಿಸಲು ಅಡ್ಡಿ ಇಲ್ಲ. ಆದರೆ, ಅನರ್ಹತೆಗೊಂಡಿರುವ ಮೂವರು ಸುಪ್ರೀಂ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ರಾಜೀನಾಮೆ ನೀಡಿರುವ ಕಾಂಗ್ರೆಸ್ನ 10 ಮಂದಿ ಹಾಗೂ ಜೆಡಿಎಸ್ನ ಮೂವರು ಶಾಸಕರ ಪ್ರಕರಣದ ಬಗ್ಗೆ ಇನ್ನೂ ಪರಿಶೀಲನೆ ನಡೆದಿದೆ.
ಈ ಬಗ್ಗೆ ಕೆಲವೇ ದಿನಗಳಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಬಿಜೆಪಿ ಮತ್ತಷ್ಟು ಕಾಯುವ ಸಂದರ್ಭ ಬರಬಹುದು. ಎಲ್ಲ ಶಾಸಕರ ರಾಜೀನಾಮೆ ಕುರಿತ ತೀರ್ಪು ಹೊರಬೀಳುವವರೆಗೆ ಗೊಂದಲಗಳು ಮುಂದುವರೆಯಲಿದೆ. ಒಂದೆಡೆ, ಮುಂಬೈನಲ್ಲಿರುವ ಕೆಲ ಶಾಸಕರು ಮತ್ತೆ ಮರಳುತ್ತಾರೆ ಎಂದು ಕಾಂಗ್ರೆಸ್, ಜೆಡಿಎಸ್ ಕಾಯುತ್ತ ಕೂತಿದ್ದರೆ, ಇನ್ನೊಂದೆಡೆ ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ ಎಂಬ ಪ್ರಶ್ನೆಗಳು ಮೂಡಿವೆ.
ಹೊಸ ಲೆಕ್ಕಾಚಾರ
ಪ್ರಸ್ತುತ ಸ್ಪೀಕರ್ ಕ್ರಮದಿಂದ ರಾಜ್ಯ ವಿಧಾನಸಭೆಯ ಬಲ 221ಕ್ಕೆ ಇಳಿದಿದ್ದು ಬಹುಮತಕ್ಕೆ 112 ಬೇಕಾಗಿದೆ. ಪಕ್ಷೇತರ ಶಾಸಕನ ಆನರ್ಹತೆಯಿಂದ ಬಿಜೆಪಿಯ ಬಲ 105 ಹಾಗೂ ಒಬ್ಬ ಪಕ್ಷೇತರ ಸೇರಿ 106 ಆಗಲಿದೆ. ಸ್ಪೀಕರ್ ಸೇರಿ ಕಾಂಗ್ರೆಸ್-ಜೆಡಿಎಸ್ ಬಲ 100 ಆಗುತ್ತದೆ. ಬಿಎಸ್ಪಿ ಶಾಸಕ ಬೆಂಬಲ ನೀಡಿದರೆ 101, ನಾಮನಿರ್ದೇಶನ ಸದಸ್ಯನಿಗೆ ಮತದಾನ ಹಕ್ಕು ಇರುವುದರಿಂದ 102 ಆಗಲಿದ್ದು, ಹದಿಮೂರು ಅತೃಪ್ತರು ವಾಪಸ್ ಬಂದು ರಾಜೀನಾಮೆ ಹಿಂಪಡೆದರೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಬಲ 115 ಕ್ಕೆ ಏರಲಿದೆ. ಗೈರು ಹಾಜರಾಗಿದ್ದ ಶ್ರೀಮಂತಪಾಟೀಲ್, ಬಿ.ನಾಗೇಂದ್ರ ಇದೀಗ ಅನಿವಾರ್ಯವಾಗಿ ಬರಬೇಕಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ನದು. ಇತ್ತ ಕಡೆ, ಬಿಜೆಪಿಯ ಈಗಿನ ಸದಸ್ಯ ಬಲ 106 ಆಗಿದ್ದು, ಬಹುಮತ ಸಾಬೀತುಪಡಿಸಲು ಇನ್ನೂ ಆರು ಮಂದಿ ಬೇಕಾಗುತ್ತದೆ. ಒಂದು ವೇಳೆ ಮೊನ್ನೆಯ ಹಾಗೆ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಂತೆ ನೋಡಿಕೊಂಡಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ. ಆದರೆ, ಅತೃಪ್ತ ಶಾಸಕರು ಸದನಕ್ಕೆ ಬಂದಲ್ಲಿ ಪರಿಸ್ಥಿತಿ ಬದಲಾಗಬಹುದು.
-ಈ ವಿಧಾನಸಭೆ ಅವಧಿಯಲ್ಲಿ ಸಚಿವರಾಗುವಂತಿಲ್ಲ ಹಾಗೂ ಸರ್ಕಾರದಲ್ಲಿ ವೇತನ ಸಹಿತ ಹುದ್ದೆ ಹೊಂದುವಂತೆ ಇಲ್ಲ.
-ಅನರ್ಹತೆ ಆತಂಕದಿಂದ ಅತೃಪ್ತರು ಮರಳಿ ಕಾಂಗ್ರೆಸ್-ಜೆಡಿಎಸ್ಗೆ ಬರುವ ನಿರೀಕ್ಷೆ -ಅತೃಪ್ತರು ವಾಪಸ್ ಬರದಂತೆ ನೋಡಿಕೊಂಡು ಇರುವ ಸಂಖ್ಯಾಬಲದಡಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಬಿಜೆಪಿ ಹಕ್ಕು ಮಂಡಿಸಬಹುದು
-ವಿಧಾನಸಭೆ ಕೆಲ ಕಾಲ ಅಮಾನತ್ತಿಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬಹುದು
ಪಕ್ಷೇತರ ಶಾಸಕ ಆರ್.ಶಂಕರ್ (ರಾಣೆಬೆನ್ನೂರು) ಅವರು ಜೂನ್ ತಿಂಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ತಾವು ಪ್ರತಿನಿಧಿಸಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದೇನೆ ಎಂದು ಪತ್ರ ನೀಡಿದ್ದು, ಆದಾದ ನಂತರ ಜುಲೈ ನಲ್ಲಿ ಮತ್ತೆ ರಾಜ್ಯಪಾಲರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಆನ್ವಯದಡಿ ಆನರ್ಹಗೊಳಿಸಲಾಗಿದೆ.