2023ರ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ದತೆ ಮಾಡಿಕೊಳ್ಳಿ: ಡಿ.ಕೆ ಅರುಣಾ
Team Udayavani, Jul 6, 2021, 6:09 PM IST
ಕಲಬುರಗಿ: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ದತೆಗಳನ್ನು ಮಾಡಿಕೊಳ್ಳಲು ಮುಂದಾಗುವಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ರಾಜ್ಯದ ಸಹ ಉಸ್ತುವಾರಿ ಡಿ.ಕೆ. ಅರುಣಾ ಕರೆ ನೀಡಿದರು.
ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ- ಮನೆಗೆ ಮುಟ್ಟಿಸುವ ಕಾರ್ಯದಲ್ಲಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಬಹು ಮುಖ್ಯವಾಗಿ ರಾಜ್ಯದ ಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವ ನಿಟ್ಟಿನಲ್ಲಿ ಧುಮುಕಬೇಕೆಂದರು.
ಕೊರೊನಾ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೃಢ ಹೆಜ್ಜೆಗಳನ್ನಿಟ್ಟಿದೆ. ಈ ಮೂಲಕ ವಿರೋಧ ಪಕ್ಷಗಳಿಗೆ ಏನು ಟೀಕೆ ಮಾಡದ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂದರು.
ಬಿಜೆಪಿ ರಾಜ್ಯ ವಕ್ತಾರಾಗಿರುವ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಸೇವಾ ಹಿ ಸಂಘಟನೆ ಹೆಸರಿನಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ .1.20 ಲಕ್ಷ ಆಹಾರ ಕಿಟ್ ಗಳನ್ನಿ ಹಂಚಲಾಗಿದೆ. ಅದೇ ರೀತಿ ಲಕ್ಷಾಂತರ ಜನರಿಗೆ ಊಟ ವಿತರಿಸಲಾಗಿದೆಯಲ್ಲದೇ ಜನ ಸಂಘ ಸಂಸ್ಥಾಪಕ ಶಾಮ ಪ್ರಸಾದ ಮುಖರ್ಜಿ ಜನ್ಮ ದಿನಾಚರಣೆಯಂಗವಾಗಿ 11ಲಕ್ಷ ಸಸಿಗಳನ್ಬು ನೆಡಲು ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದರು.
ಇದನ್ನೂ ಓದಿ :ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಈ ಎರಡು ಸೇವೆಗಳನ್ನು ಸ್ಥಗಿತಗೊಳಿಸಿದ ಯುಐಡಿಎಐ
ಮುಂದುವರೆದು ಮಾತನಾಡಿದ ತೇಲ್ಕೂರ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಬಿಜೆಪಿ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದೆ. ಆದರೆ ಮೀಸಲಾತಿ ನಿಗದಿ ಮಾಡುವುದು ಚುನಾವಣಾ ಆಯೋಗ. ಸಂವಿಧಾನದ ಬಗ್ಗೆ ಅರಿವಿದ್ದರೂ ಕಾಂಗ್ರೆಸ್ ಪಕ್ಷವು ಬಿಜೆಪಿ ಕೈವಾಡವಿದೆ ಎಂದು ಹೇಳುತ್ತಿರುವುದು ಶೋಭೆ ತರುವಂತದ್ದಲ್ಲ. ಮೀಸಲಾತಿ ನಿಗದಿ ಯಲ್ಲಿ ಬಿಜೆಪಿ ಪಕ್ಷದ ಕೈವಾಡವಿಲ್ಲ. ಬಿಜೆಪಿ ಸರ್ವ ವರ್ಗಗಳ ಹಿತ ಕಾಪಾಡುವ ಪಕ್ಷ ವಾಗಿದೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬುದು ರಾಜ್ಯ ಬಿಜೆಪಿ ಸರ್ಕಾರದ ತತ್ವವಾಗಿದೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಸಹ ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಗಿರುವ ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ, ಶಾಸಕರಾದ ಸುಭಾಷ್ ಆರ್. ಗುತ್ತೇದಾರ, ಬಸವರಾಜ್ ಮತ್ತಿಮಡು, ಡಾ.ಅವಿನಾಶ್ ಜಾಧವ್, ಸುನೀಲ್ ವಲ್ಲಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜೀ ಪಾಟೀಲ್ ಸೇರಿದಂತೆ ಮುಂತಾದವರು ವೇದಿಕೆ ಮೇಲಿದ್ದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶೋಕ ಬಗಲಿ ನಿರೂಪಿಸಿದರು.