ಅಜಿತ್ ದೋವಲ್ ಮನೆಯ ಭದ್ರತಾ ಲೋಪ ಕೇಸ್: NSA ಭದ್ರತೆಯಲ್ಲಿದ್ದ 3 ಕಮಾಂಡೋಗಳ ವರ್ಗಾವಣೆ
2022ರ ಫೆಬ್ರವರಿಯಲ್ಲಿ ವ್ಯಕ್ತಿಯೊಬ್ಬ ಎನ್ ಎಸ್ ಎ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದ
Team Udayavani, Aug 17, 2022, 5:11 PM IST
ನವದೆಹಲಿ: ಫೆಬ್ರವರಿಯಲ್ಲಿ ಸಂಭವಿಸಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಅಜಿತ್ ದೋವಲ್ ಅವರ ಭದ್ರತೆಯಲ್ಲಿ ತೊಡಗಿದ್ದ ಮೂವರು ಕಮಾಂಡೋಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಸೈಮಾ ಅವಾರ್ಡ್ಸ್ ಗೆ ಕನ್ನಡದ 3 ಚಿತ್ರಗಳು ನಾಮಿನೇಟ್: ಪ್ರಮುಖ ನಾಮಿನೇಟ್ ಪಟ್ಟಿ ಇಲ್ಲಿದೆ
ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ವಿಐಪಿ ಭದ್ರತೆಗೆ ಸಂಬಂಧಿಸಿದಂತೆ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಮತ್ತು ಕಮಾಂಡೆಂಟ್ ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಏನಿದು ಭದ್ರತಾ ಲೋಪ ಪ್ರಕರಣ:
2022ರ ಫೆಬ್ರವರಿಯಲ್ಲಿ ವ್ಯಕ್ತಿಯೊಬ್ಬ ಎನ್ ಎಸ್ ಎ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದ, ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ತಡೆದು ನಿಲ್ಲಿಸಿದ್ದರು. ಬಳಿಕ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಇದು ಎನ್ ಎಸ್ ಎ ದೋವಲ್ ಅವರಿಗೆ ನೀಡಿರುವ ಭದ್ರತೆಯಲ್ಲಾದ ಲೋಪ ಎಂದು ಆರೋಪಿಸಲಾಗಿತ್ತು.
ಕೆಂಪು ಬಣ್ಣದ ಎಸ್ ಯುವಿನಲ್ಲಿ ಆಗಮಿಸಿದ್ದ ವ್ಯಕ್ತಿಯೊಬ್ಬ ಅತ್ಯಂತ ಬಿಗಿ ಭದ್ರತೆಯ ಅಜಿತ್ ದೋವಲ್ ನಿವಾಸದೊಳಕ್ಕೆ ಪ್ರವೇಶಿಸಲು ಯತ್ನಿಸಿದ್ದ ಎಂದು ವರದಿ ವಿವರಿಸಿದೆ. ಕಾರನ್ನು ತಡೆದ ನಂತರ ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್) ನ ಸಿಬ್ಬಂದಿಗಳು ವ್ಯಕ್ತಿಯನ್ನು ಬಂಧಿಸಿದ್ದರು.
ವರದಿಯಂತೆ, ಈ ವ್ಯಕ್ತಿಯನ್ನು ಬೆಂಗಳೂರು ಮೂಲದ ಶಂತನು ರೆಡ್ಡಿ ಎಂದು ಗುರುತಿಸಲಾಗಿತ್ತು. ತನ್ನ ದೇಹದೊಳಗೆ ಚಿಪ್ ಇದ್ದಿರುವುದಾಗಿ ಹೇಳಿಕೊಂಡಿದ್ದ ರೆಡ್ಡಿ, ಬಾಹ್ಯವಾಗಿ ನಿಯಂತ್ರಿಸಲಾಗುತ್ತಿದೆ ಎಂದು ತಿಳಿಸಿದ್ದ. ಆದರೆ ಎಂಆರ್ ಐ ಸ್ಕ್ಯಾನ್ ನಲ್ಲಿ ಯಾವುದೇ ಚಿಪ್ ಪತ್ತೆಯಾಗಿರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ. ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ.