ಜಡೇಜ ಜಬರ್ದಸ್ತ್ ಪ್ರದರ್ಶನದಿಂದ ಅವಕಾಶ ಕಷ್ಟ : ಅಕ್ಷರ್ ಪಟೇಲ್
Team Udayavani, May 28, 2021, 11:12 PM IST
ಹೊಸದಿಲ್ಲಿ : ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿ ಬರೋಬ್ಬರಿ 6 ವರ್ಷಗಳ ಬಳಿಕ ಟೆಸ್ಟ್ ಆಡಿದ್ದು, ಇಂಗ್ಲೆಂಡ್ ಎದುರಿನ ಸರಣಿಯ 3 ಪಂದ್ಯಗಳಿಂದ 27 ವಿಕೆಟ್ ಉಡಾಯಿಸಿ ಮೆರೆದದ್ದೆಲ್ಲ ಈಗ ಇತಿಹಾಸ.
ಆದರೆ ಈ ಸಾಧನೆ ಎನ್ನುವುದು ಅವರಿಗೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಅವಕಾಶ ನೀಡಲಿದೆ ಎಂಬ ನಿರೀಕ್ಷೆಯನ್ನು ಇರಿಸಿಕೊಳ್ಳುವ ಹಾಗಿಲ್ಲ. ಇದಕ್ಕೆ ಕಾರಣ, ಮತ್ತೋರ್ವ ಎಡಗೈ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜ ಅವರ ಪುನರಾಗಮನ. ಜಡೇಜ ಜಬರ್ದಸ್ತ್ ಪ್ರದರ್ಶನ ನೀಡುತ್ತಿರುವಾಗ ಸಹಜವಾಗಿಯೇ ಮತ್ತೋರ್ವ ಎಡಗೈ ಸ್ಪಿನ್ನರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಸಂಪಾದಿಸುವುದು ಸುಲಭವಲ್ಲ.
ಇಂಥದೊಂದು ಹೇಳಿಕೆ ನೀಡಿದವರು ಬೇರೆ ಯಾರೂ ಅಲ್ಲ, ಸ್ವತಃ ಅಕ್ಷರ್ ಪಟೇಲ್. ಹಾಗೆಯೇ ಅನುಭವಿ ಆಫ್ಸ್ಪಿನ್ನರ್ ಆರ್. ಅಶ್ವಿನ್ ಉಪಸ್ಥಿತಿಯಿಂದಲೂ ತನಗೆ ಹನ್ನೊಂದರ ಬಳಗದಲ್ಲಿ ಅವಕಾಶ ಕಷ್ಟ ಎಂದೂ ಅಕ್ಷರ್ ಹೇಳಿದ್ದಾರೆ.
“ಅವಕಾಶ ಸಾಬೀತುಪಡಿಸಿದ್ದೇನೆ’ “ಸದ್ಯ ನನ್ನ ಫಾರ್ಮ್ ಉತ್ತಮವಾಗಿದೆ. ಯಾವುದೇ ಕೊರತೆ ಇಲ್ಲ. ದುರದೃಷ್ಟ ವಶಾತ್, ಗಾಯಾಳಾದ ಕಾರಣ ಏಕದಿನ ಅವಕಾಶ ಕಳೆದುಕೊಂಡೆ. ಆದರೆ ಟೆಸ್ಟ್ನಲ್ಲಿ ಜಡೇಜ, ಅಶ್ವಿನ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಜಡೇಜ ಜಬರ್ದಸ್ತ್ ಶೋ ನೀಡುತ್ತಿರುವಾಗ ಮತ್ತೋರ್ವ ಎಡಗೈ ಸ್ಪಿನ್ ಆಲ್ರೌಂಡರ್ ಹನ್ನೊಂದರ ಬಳಗ ಪ್ರವೇಶಿಸುವುದು ಕಷ್ಟ. ಹೀಗಾಗಿ ನಾನು ಟೆಸ್ಟ್ ತಂಡ ದಿಂದ ಹೊರಗುಳಿಯ ಬೇಕಾಯಿತು. ಆದರೆ ಅವಕಾಶ ಸಿಕ್ಕಿದಾಗ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ದ್ದೇನೆ’ ಎಂದು ಅಕ್ಷರ್ ಹೇಳಿದರು.