ಜಿಂದಾಲ್ ವಿವಾದ ವಿಚಾರವೇ ಸಿಂಗ್ ರಾಜೀನಾಮೆಗೆ ಕಾರಣ
ನಾನು ಯಾರನ್ನೂ ಭೇಟಿ ಮಾಡಿಲ್ಲ, ಏಕಾಂಗಿ ಹೋರಾಟ
Team Udayavani, Jul 1, 2019, 2:30 PM IST
ಬೆಂಗಳೂರು: ಜಿಂದಾಲ್ ಗೆ ಸರಕಾರಿ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನಡೆಯನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಆಪರೇಷನ್ ಗೆ ಒಳಗಾಗುವುದಿಲ್ಲ. ನಾನು ಯಾರನ್ನೂ ಭೇಟಿಯಾಗಿಲ್ಲ. ನಾನು ಏಕಾಂಗಿಯಾಗಿ ಹೋರಾಟ ನಡೆಸುತ್ತೇನೆ ಎಂದು ವಿಜಯನಗರ ಶಾಸಕ ಆನಂದ್ ಸಿಂಗ್ ಹೇಳಿದರು.
ಸೋಮವಾರ ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಆನಂದ್ ಸಿಂಗ್ ಮಾತನಾಡಿದರು. “ ನಾನು ಸ್ಪೀಕರ್ ಅವರಿಗೂ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ಅವರು ತಲುಪಿಲ್ಲ ಎಂದಿದ್ದಾರೆ. ಬೇಕಾದರೆ ತಾಂತ್ರಿಕವಾಗಿ ಇನ್ನೊಮ್ಮೆ ಸಲ್ಲಿಸುತ್ತೇನೆ” ಎಂದರು.
ಜಿಂದಾಲ್ ಕಂಪೆನಿಗೆ ಸರಕಾರಿ ಭೂಮಿ ಪರಭಾರೆ ವಿಚಾರವಾಗಿ ಬಳ್ಳಾರಿಗೆ ಅನ್ಯಾಯವಾಗಿದೆ. ಜಿಲ್ಲೆಯ ಹಿತದೃಷ್ಟಿಯಿಂದ ನಾನು ಈ ನಿರ್ಧಾರ ಮಾಡಿದ್ದೇನೆ. ನಾನು ಯಾರನ್ನೂ ಭೇಟಿಯಾಗಿಲ್ಲ. ನಾನು ಏಕಾಂಗಿಯಾಗಿ ಹೋರಾಡುತ್ತೇನೆ ಎಂದರು.