‘ಅನ್ನಭಾಗ್ಯ’ ಯೋಜನೆಗೆ ಕತ್ತರಿ ಹಾಕಿದರೆ ಉಗ್ರ ಹೋರಾಟ
Team Udayavani, Aug 18, 2019, 6:00 AM IST
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ ‘ಅನ್ನಭಾಗ್ಯ’ ಹಾಗೂ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ಬಿಜೆಪಿ ಸರ್ಕಾರ ಕತ್ತರಿ ಪ್ರಯೋಗ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ 4 ಕೋಟಿ ಬಡವರಿಗೆ ಎರಡು ಹೊತ್ತು ಊಟ ನೀಡಬೇಕೆಂದು ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಆರಂಭಿಸಿದ್ದೆವು. ಮೈತ್ರಿ ಸರ್ಕಾರ ಅದನ್ನು ಮುಂದುವರಿಸಿಕೊಂಡು ಬಂದಿದೆ.
ಈಗ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಹೊಂದಿಸಿಕೊಳ್ಳಲು ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ.ಅಕ್ಕಿಯನ್ನು ಕಡಿತ ಮಾಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇದು ಬಡವರ ವಿರೋಧಿ ಧೋರಣೆಯಾಗಿದೆ. ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನು ನಾವು ಸಹಿಸುವುದಿಲ್ಲ. ಬಿಜೆಪಿ ಸರ್ಕಾರ ಈ ಚಿಂತನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಕಾಂಗ್ರೆಸ್ನಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ.ನೀಡಲು ನಮ್ಮ ವಿರೋಧವಿಲ್ಲ. ಆದರೆ, ಬಡವರಿಗೆ ನೀಡುವ ಅಕ್ಕಿಯನ್ನು ಕಡಿಮೆ ಮಾಡಿ, ಆ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಸರಿ ಹೊಂದಿಸುವುದು ಬಡವರ ವಿರೋಧಿ ಧೋರಣೆಯಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಿರಂತರವಾಗಿರಬೇಕು: ಇಂದಿರಾ ಕ್ಯಾಂಟೀನ್ಗೆ ಸರ್ಕಾರದಿಂದ ಹಣ ನೀಡಲು ಆಗುತ್ತಿಲ್ಲ. ಬಿಬಿಎಂಪಿಯಿಂದಲೇ ನೋಡಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆಂಬ ಮಾಹಿತಿಯಿದೆ. ರಾಜ್ಯ ಸರ್ಕಾರದಿಂದ ನಿರಂತರವಾಗಿ ನಡೆಯಬೇಕೆಂದು ರೂಪಿಸಿರುವ ಯೋಜನೆ ಇದು. 2.30 ಲಕ್ಷ ಕೋಟಿ ರೂ.ರಾಜ್ಯ ಬಜೆಟ್ ಇದೆ. ಇಂದಿರಾ ಕ್ಯಾಂಟೀನ್ ಯೋಜನೆಗೆ 200 ಕೋಟಿ ರೂ.ಕೂಡ ಆಗಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲಬಾರದು ಎಂದರು.
ಅಧಿವೇಶನ ಕರೆಯಲಿ: ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಿನ್ನೆಲೆಯಲ್ಲಿ ತುರ್ತು ವಿಧಾನ ಮಂಡಲ ಅಧಿವೇಶನ ಕರೆದು, ವಿಶೇಷ ಅನುದಾನಕ್ಕಾಗಿ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕು. ಮೋದಿಯನ್ನು ಕಂಡರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಭಯ ಇರಬೇಕು. ಸರ್ವಪಕ್ಷದ ಸಭೆ ಕರೆದು, ನಿಯೋಗವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಲಿ. ಅಲ್ಲಿ ನಾವೇ ಮಾತನಾಡುತ್ತೇವೆ. ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ನಿಯೋಗ ಕರೆದೊಯ್ಯುತ್ತಿದ್ದೆ. ನಿಯೋಗದಲ್ಲಿ ಬರುತ್ತಿದ್ದ ಯಡಿಯೂರಪ್ಪ ಮಾತನಾಡುತ್ತಲೇ ಇರಲಿಲ್ಲ. ರಾಜ್ಯದಲ್ಲಿ ಪ್ರವಾಹ ಹಾಗೂ ಬರದಿಂದ ಸಾಕಷ್ಟು ತೊಂದರೆ ಉಂಟಾಗಿದ್ದು ಇದರ ಬಗ್ಗೆ ಚರ್ಚೆ ಮಾಡಲು ತುರ್ತು ಅಧಿವೇಶನ ಕರೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಪರಿಶೀಲನೆ ನಡೆಸಿದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ನಷ್ಟ ಎಷ್ಟಾಗಿದೆ ಎಂಬ ಸರ್ವೆಯನ್ನು ಮಾಡಿಸಿಲ್ಲ. ನಷ್ಟದ ಅಂದಾಜಿನ ಬಗ್ಗೆ ವರದಿಯನ್ನೇ ಕೇಂದ್ರಕ್ಕೆ ನೀಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ವರದಿ ಸಲ್ಲಿಸುವುದು ಯಾವಾಗ?. ಕೇಂದ್ರದಿಂದ ಪರಿಹಾರ ಬರುವುದು ಯಾವಾಗ?’ ಎಂದು ಪ್ರಶ್ನಿಸಿದರು. ‘ಮೋದಿಯವರು ಬಂದು ಪರಿಶೀಲಿಸಿ, ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.
ಇತಿಹಾಸದಲ್ಲೇ ಮೊದಲು
ಉಸ್ತುವಾರಿ ಸಚಿವರಿಲ್ಲದೆ ಸ್ವಾತಂತ್ರ್ಯೋತ್ಸವ ಮತ್ತು ಧ್ವಜಾರೋಹಣ ನಡೆದಿರುವುದು ಬಹುಶಃ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲಿರಬೇಕು. ಪ್ರಜಾಪ್ರಭುತ್ವ ಇದೆಯೇ? ಎಲ್ಲಿದೆ ಪ್ರಜಾಪ್ರಭುತ್ವ? ಅಧಿಕಾರಿಗಳು ಧ್ವಜಾರೋಹಣ ಮಾಡಿದ್ದಾರೆಂದು ಸಿದ್ದರಾಮಯ್ಯ ಕಿಡಿಕಾರಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 20 ದಿನ ಕಳೆದರೂ, ರಾಜ್ಯದಲ್ಲಿ ಸರ್ಕಾರ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮೊದಲಾದ ಕಡೆಗಳಲ್ಲಿ ವಾಡಿಕೆ ಮಳೆಗಿಂತ ಶೇ.20ರಷ್ಟು ಕಡಿಮೆಯಾಗಿದೆ. ಇವತ್ತಿನವರೆಗೂ ಬರ ಪೀಡಿತ ಪ್ರದೇಶಗಳ ಘೋಷಣೆ ಆಗಿಲ್ಲ. ಬರ ಪೀಡಿತ ಪ್ರದೇಶದ ಘೋಷಣೆ ಮಾಡದಿದ್ದರೆ ಪರಿಹಾರ ಬರಲ್ಲ. ಬಿತ್ತನೆ ಬೀಜಗಳು ಹಾಳಾಗಿವೆ. ದನ-ಕರುಗಳಿಗೆ ಮೇವು ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ರೈತರಿಗೆ, ಬಡವರಿಗೆ ಈ ಸರ್ಕಾರದಿಂದ ಸಹಾಯ ಆಗುತ್ತಿಲ್ಲ. ಹಾಗಾದರೆ ಈ ಸರ್ಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.
-ಸಿದ್ದರಾಮಯ್ಯ ಮಾಜಿ ಸಿಎಂ