ಸಿಎಂ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ :ಅರುಣ್ ಸಿಂಗ್
Team Udayavani, Jun 16, 2021, 8:12 PM IST
ಬೆಂಗಳೂರು: ಪಕ್ಷ ಸಂಘಟನೆ ಮತ್ತು ಕೋವಿಡ್ ಸಂಬಂಧ ನಾನು ಇಲ್ಲಿ ಚರ್ಚೆ ಮಾಡಲಿದ್ದೇನೆ. ರಾಜ್ಯ ಸರಕಾರವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಷಿಗಳು ಮತ್ತು ರಾಜ್ಯದ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ತಿಳಿಸಿದರು.
ಎರಡು ಪ್ಯಾಕೇಜ್ಗಳ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗಿದೆ. 1,250 ಕೋಟಿ ರೂಪಾಯಿ ಮತ್ತು 500 ಕೋಟಿ ರೂಪಾಯಿಯ ಎರಡು ಪ್ಯಾಕೇಜ್ ಪ್ರಕಟಿಸಲಾಗಿದೆ. ಅಲ್ಲದೆ, ಕೋವಿಡ್ನಿಂದ ಮೃತಪಟ್ಟ ಬಡವರಿಗೆ ತಲಾ ಒಂದು ಲಕ್ಷ ನೀಡಲು 300 ಕೋಟಿ ನೀಡುವುದಾಗಿ ರಾಜ್ಯ ಸರಕಾರ ಪ್ರಕಟಿಸಿದ್ದು, ಇವೆಲ್ಲವೂ ಉತ್ತಮ ಕ್ರಮಗಳಾಗಿವೆ ಎಂದು ಅವರು ಕೆ.ಕೆ. ಅತಿಥಿಗೃಹದ ಬಳಿ ಪತ್ರಕರ್ತರಿಗೆ ತಿಳಿಸಿದರು.
ಮುಖ್ಯಮಂತ್ರಿ, ಸಚಿವರು, ಸರಕಾರ ಉತ್ತಮ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ. ಜೆಡಿಎಸ್ ಕ್ವಾರಂಟೈನ್ನಲ್ಲಿ ಇದೆ. ಕಾಂಗ್ರೆಸ್ನವರು ಕಚ್ಚಾಟದಲ್ಲಿ ನಿರತರಾಗಿದ್ದಾರೆ ಎಂದರು ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷವು “ಸೇವಾ ಹೀ ಸಂಘಟನ್” ಮೂಲಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ವಿವರಿಸಿದರು.
ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 17193 ಸೋಂಕಿತರು ಗುಣಮುಖ; 7345 ಹೊಸ ಪ್ರಕರಣ ಪತ್ತೆ
ಸಿಎಂ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರು ವಿಮಾನನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಅತ್ಯುತ್ತಮ ರೀತಿಯಲ್ಲಿ ಸೇವೆ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಜನಸೇವೆ ಮಾಡಿಲ್ಲ. ಜನರು ಕಾಂಗ್ರೆಸ್ನ ಕಾರ್ಯವೈಖರಿಯನ್ನು ಗಮನಿಸುತ್ತಾರೆ ಎಂದು ಅವರು ತಿಳಿಸಿದರು.
ಸೇವೆಯೇ ಸಂಘಟನೆ ಎಂಬ ಮಾದರಿಯಲ್ಲಿ ಪಕ್ಷ ಮತ್ತು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಸಸಿ ನೆಡುವ ಕಾರ್ಯ ನಡೆಯುತ್ತಿದೆ. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ ಎಂದು ಅವರು ತಿಳಿಸಿದರು.