ರಾಮ ಮಂದಿರಕ್ಕೆ 2 ಸಂಸ್ಥೆಗಳ ಉಸ್ತುವಾರಿ! ಅಯೋಧ್ಯೆಯಲ್ಲಿ ಇಂದು ಟ್ರಸ್ಟ್ನ ಅಧಿಕೃತ ಸಭೆ
Team Udayavani, Nov 1, 2020, 5:25 AM IST
ಉಡುಪಿ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುವ ಮಂದಿರವನ್ನು ಎರಡು ಪ್ರಮುಖ ನಿರ್ಮಾಣ ಸಂಸ್ಥೆಗಳು ಜತೆಗೂಡಿ ಕಾರ್ಯನಿರ್ವಹಿಸಲಿವೆ.
ಶನಿವಾರ ಸಂಜೆ ಅಯೋಧ್ಯೆಯ ಪೇಜಾವರ ಶಾಖಾ ಮಠದಲ್ಲಿ ಮಂದಿರ ನಿರ್ಮಾಣ ಕುರಿತು ಅನೌಪಚಾರಿಕ ಸಭೆ ನಡೆಯಿತು. ಎಲ್ ಆ್ಯಂಡ್ ಟಿ ಕಂಪೆನಿಯು ಮಂದಿರದ ನಿರ್ಮಾಣವನ್ನು ಮಾಡಿದರೆ, ಅದನ್ನು ಪರಿಶೀಲನೆ ಮಾಡುವ ಜವಾಬ್ದಾರಿಯನ್ನು ಟಾಟಾ ಕಂಪೆನಿಯವರಿಗೆ ವಹಿಸಲಾಗುವುದು. ಇವರಿಬ್ಬರೂ ಚರ್ಚೆ ನಡೆಸಿದ ಅನಂತರ ಟ್ರಸ್ಟಿಗಳಲ್ಲಿ ಒಬ್ಬರಾದ ಯೋಜನಾ ವ್ಯವಸ್ಥಾಪಕರು ಒಪ್ಪಿಗೆ ಸೂಚಿಸಬೇಕು. ಬಳಿಕ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ರಾಯ್ ಅವರು ಅಂತಿಮ ಒಪ್ಪಿಗೆಯನ್ನು ಸೂಚಿಸಲಿದ್ದಾರೆಂದು ಸಭೆಯಲ್ಲಿ ತಿಳಿಸಲಾಯಿತು.
ಅನೌಪಚಾರಿಕ ಸಭೆಯಲ್ಲಿ ಟ್ರಸ್ಟ್ನ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಚಂಪತ್ರಾಯ್, ನೃಪೇಂದ್ರ ಮಿಶ್ರಾ, ದಿನೇಶಚಂದ್ರ, ನಿವೃತ್ತ ಮುಖ್ಯ ಎಂಜಿನಿಯರ್ ಜಗದೀಶ್ ಪಾಲ್ಗೊಂಡಿದ್ದರು.
ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧೀಕೃತ ಸಭೆ ರವಿವಾರ ದಿನವಿಡೀ ಅಯೋಧ್ಯೆ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ. ಟ್ರಸ್ಟ್ ರಚನೆಯಾದ ಬಳಿಕ ಇದೇ ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿರುವ ಸ್ವಾಮೀಜಿ ರವಿವಾರ ಬೆಳಗ್ಗೆ ಬೇಗ ಪೂಜೆ ಮುಗಿಸಿ ಸಭೆಯಲ್ಲಿ ಪಾಲ್ಗೊಂಡು ರಾಮಲಲ್ಲಾನ ದರ್ಶನವನ್ನು ಪಡೆಯಲಿದ್ದಾರೆ.