ಬಂಡೀಪುರ ಅರಣ್ಯ ಉಗ್ರರ ಕಾರಸ್ಥಾನ? ಬಂಧಿತ ಅಲ್-ಹಿಂದ್ ಶಂಕಿತ ಉಗ್ರನಿಂದ ಮಾಹಿತಿ
Team Udayavani, Feb 27, 2020, 7:10 AM IST
ಬೆಂಗಳೂರು: ರಾಜಧಾನಿ ಸೇರಿ ರಾಜ್ಯದಲ್ಲಿ ಪ್ರಭಾವಿ ಹಿಂದೂ ಮುಖಂಡರ ಹತ್ಯೆ ಮತ್ತು ಕೆಲವು ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿ ತಮಿಳುನಾಡಿನ ಕ್ಯೂಬ್ರ್ಯಾಂಚ್ ಮತ್ತು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರಿಂದ ಬಂಧನಕ್ಕೊಳಗಾದ ಅಲ್-ಹಿಂದ್ ಸಂಘಟನೆಯ ಶಂಕಿತ ಉಗ್ರರು ತಮ್ಮ ವಿಧ್ವಂಸಕ ಕೃತ್ಯಗಳ ತರಬೇತಿಗೆ ನಾಡಿನ ಪ್ರಸಿದ್ಧ ಬಂಡೀಪುರ ಅಭಯಾರಣ್ಯವನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಮಂಗಳವಾರವಷ್ಟೇ ಬಂಧನಕ್ಕೊಳಗಾದ ಸೈಯದ್ ಫಜಿ ಉರ್ ರೆಹಮಾನ್, ಅಲ್- ಹಿಂದ್ ಸಂಘಟನೆಯ ಮುಖ್ಯಸ್ಥ ಮೆಹಬೂಬ್ ಪಾಷಾ ಸೂಚನೆಯ ಮೇರೆಗೆ ಬಂಡೀಪುರ ಅಭಯಾರಣ್ಯವನ್ನು ಆಯ್ಕೆ ಮಾಡಿಕೊಂಡಿದ್ದ.
ತರಬೇತಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಡಿ.ಜಿ. ಹಳ್ಳಿ ಮತ್ತು ಸುದ್ದುಗುಂಟೆ ಪಾಳ್ಯದ ಮನೆಗಳಲ್ಲಿ ಶೇಖರಣೆ ಮಾಡುತ್ತಿದ್ದ. ಮುಖ್ಯವಾಗಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸಲು ಅಗತ್ಯವಿರುವ ವಸ್ತುಗಳನ್ನು ಈತನೇ ಸಂಗ್ರಹಿಸುತ್ತಿದ್ದ. ಅದಕ್ಕೆ ತನ್ನ ವೃತ್ತಿಯಾದ ಈವೆಂಟ್ ಮ್ಯಾನೇಜ್ಮೆಂಟ್ ಹೆಸರು ದುರ್ಬಳಕೆ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ತ್ರಿಕೋನ ಕಾರ್ಯಾಚರಣೆ
ಕರ್ನಾಟಕ – ಕೇರಳ ಮತ್ತು ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಂಡೀಪುರ ಅಭಯಾರಣ್ಯದಲ್ಲಿ ಶಂಕಿತರು ಹತ್ಯೆ ನಡೆಸುವ ತರಬೇತಿ ಪಡೆಯಲು ಸಂಚು ರೂಪಿಸಿದ್ದರು. ಒಂದೆರಡು ಬಾರಿ ಅರಣ್ಯಕ್ಕೆ ತೆರಳಿ ಸ್ಥಳವನ್ನು ನೋಡಿಕೊಂಡು ಬಂದಿದ್ದರು ಎನ್ನಲಾಗಿದೆ. ಆರಂಭದಲ್ಲಿ ಭದ್ರತೆಯ ಬಗ್ಗೆ ಅಂಜಿದ್ದ ಆರೋಪಿಗಳು ಅನಂತರ ಮೂರು ರಾಜ್ಯಗಳ ಗಡಿಭಾಗದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದರು.
ವೀರಪ್ಪನ್ ಮಾದರಿಯಲ್ಲಿ ಕಾರ್ಯಾಚರಣೆ
ಕಾಡುಗಳ್ಳ ವೀರಪ್ಪನ್ ಮಾದರಿ ಹತ್ತಾರು ವರ್ಷಗಳ ಕಾಲ ಕಾಡಿನಲ್ಲೇ ವಾಸವಾಗಿದ್ದು ನಾಡಿನಲ್ಲಿ ತಮ್ಮ ಸಹಚರರ ಮೂಲಕ ಹಿಂದೂ ಮುಖಂಡರ ಹತ್ಯೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು. ಮಂಡ್ಯ, ಕೋಲಾರ, ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಸಭೆ ನಡೆಸಿದ್ದರು ಎಂಬುದು ಗೊತ್ತಾಗಿದೆ. ಈ ಮೂಲಕ 3 ರಾಜ್ಯಗಳಲ್ಲಿಯೂ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಏನೆಲ್ಲ ತರಬೇತಿ?
ಅಲ್-ಹಿಂದ್ ಸಂಘಟನೆಯನ್ನು ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಿಸ್ತರಣೆ ಮಾಡಿಕೊಳ್ಳು ತ್ತಿದ್ದುದಲ್ಲದೆ ಸಂಘಟನೆಯ ಸದಸ್ಯರನ್ನು ಜಿಹಾದಿಗಳನ್ನಾಗಿ ಪರಿವರ್ತಿಸಿದ್ದರು. ಅವರನ್ನು ಬಂಡೀಪುರಕ್ಕೆ ಕರೆದೊಯ್ದು ರಹಸ್ಯ ಸ್ಥಳದಲ್ಲಿ ಐಇಡಿ ತಯಾರಿ, ಬಂದೂಕು ಬಳಕೆ ಎಂಬೆಲ್ಲ ತರಬೇತಿ ನೀಡಲು ಮುಂದಾಗಿದ್ದರು.
ಹತ್ಯೆಯಾದ ಆರ್ಎಸ್ಎಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಘಟನೆಯ ಸದಸ್ಯರ ಜತೆಯೂ ಶಂಕಿತರು ಸಂಪರ್ಕ ಹೊಂದಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ವಿದೇಶದಿಂದ ಸಂದೇಶ ರವಾನೆ
ಐಸಿಸ್ ಸಂಘಟನೆಯ ಹಿರಿಯ ಸದಸ್ಯನೊಬ್ಬ ವಿದೇಶದಲ್ಲಿದ್ದು ಅಲ್-ಹಿಂದ್ ಸಂಘಟನೆಯ ಸದಸ್ಯರಿಗೆ ಆನ್ಲೈನ್ ಮತ್ತು ಇಂಟರ್ನೆಟ್ ಕರೆ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಸೂಚಿಸುತ್ತಿದ್ದ. ಅದರಂತೆ ಖ್ವಾಜಾ ಮೊಯ್ದಿàನ್ ಮತ್ತು ಮೆಹಬೂಬ್ ಪಾಷಾ ಹಾಗೂ ಇತರರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
– ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ