ಚಾಮರಾಜನಗರ: ಶಾಸಕ ಬಸವರಾಜು ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆ
Team Udayavani, Jul 6, 2021, 8:23 PM IST
ಚಾಮರಾಜನಗರ: ಮಂಗಳವಾರ ನಗರಕ್ಕೆ ಆಗಮಿಸಿದ್ದ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಶಾಖೆಯ ಕಾರ್ಯಕರ್ತರು ಹಾಗೂ ಬಿಎಸ್ವೈ ಅಭಿಮಾನಿಗಳು ಘೋಷಣೆ ಕೂಗಿ, ಘೇರಾವ್ ಹಾಕುವ ಯತ್ನ ಮಾಡಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಮಾಡಿ, ದೇವಾಲಯದಿಂದ ಹೊರಬಂದು ಕಾರು ಹತ್ತುವಾಗ, 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಕಾರಿಗೆ ಅಡ್ಡಲಾಗಿ ನಿಂತು, ಯತ್ನಾಳ್ ಅವರಿಗೆ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಜೈಕಾರ ಹಾಕಿದರು. ಇದರಿಂದ ಯತ್ನಾಳ್ ಕಸಿವಿಸಿಗೊಂಡರು. ನಂತರ ಪೊಲೀಸರು ಧಿಕ್ಕಾರ ಕೂಗುತ್ತಿದ್ದವರನ್ನು ಚದುರಿಸುವ ಯತ್ನ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ಮಠ ಮಾನ್ಯಗಳು ಸರ್ಕಾರದ ಏಜೆಂಟ್ಗಳು, ಸ್ವಾಮಿಜೀಗಳು ಕಾವಿ ಬಿಟ್ಟು ರಾಜಕೀಯಕ್ಕೆ ಬನ್ನಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಅವರ ವಿರುದ್ದ ಇಲ್ಲ ಸಲ್ಲದ ಟೀಕೆಗಳನ್ನು ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ :ಮುರುಗೇಶ್ ನಿರಾಣಿ ದಿಢೀರ್ ದೆಹಲಿ ಭೇಟಿ : ರಾಜ್ಯ ಬಿಜೆಪಿಯಲ್ಲಿ ಹೆಚ್ಚಿದ ಕುತೂಹಲ
ಅಲ್ಲದೇ, ಹಳೆ ಮೈಸೂರು ಭಾಗದಲ್ಲಿ ವೀರಶ್ಯವ- ಲಿಂಗಾಯಿತರಲ್ಲಿ ಯಾವುದೇ ತಾರತಮ್ಯವಿಲ್ಲ. ಇಲ್ಲಿರುವ ಗೌಡ ಲಿಂಗಾಯಿತರನ್ನು 2 ಎಗೆ ಸೇರಿಸುವಂತೆ ಹೋರಾಟ ಮಾಡುವ ಮೂಲಕ ವೀರಶೈವ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ, ವರ್ತಕರ ಭವನದ ಬಳಿ ಅಖಿಲ ಭಾರತ ವೀರಶೈವ ಮಹಾಸಭಾ ಶಿವರಾಜ್ ನಂಜೇದೇವನಪುರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾಡಹಳ್ಳಿ ಮಧು, ಸೋಮವಾರಪೇಟೆ ಗುರು, ಶಂಕರ, ಕೆ.ಎಲ್.ಮಹದೇವಸ್ವಾಮಿ, ಕೂಸಪ್ಪ, ವಿಜಯಬೊಮ್ಮನಹಳ್ಳಿ, ಕೊತ್ತಲವಾಡಿ ಗಜ, ರಾಜ್ ಹೊಸೂರು, ಮಲ್ಲಿಕಾರ್ಜುನ, ಮಹೇಂದ್ರಪಾಪು, ಹರಿಪ್ರಸಾದ್, ನಂದಿ, ಪುಣಜನೂರುನಂದೀಶ್, ಕಾಗಲವಾಡಿ ಪ್ರಮೋದ್, ಸಂಜು ಹೊಸೂರು , ಪ್ರದೀಪ್, ಗುರು, ಪ್ರಸಾದ್, ವೀರೇಂದ್ರ, ನಂದೀಶ್ ಇತರರು ಭಾಗವಹಿಸಿದ್ದರು.