ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ; ರಾಗ ಬದಲಿಸಿದ ನಾಯಕರು?
Team Udayavani, Jul 25, 2021, 9:54 PM IST
ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬೇರೆ ಬೇರೆ ಸಚಿವರ ರಾಗ ಬದಲಾಗಿದೆ. ಸಿಎಂ ಯಡಿಯೂರಪ್ಪ “ರಾಜೀನಾಮೆ’ ಕುರಿತು ನೀಡಿದ ಹೇಳಿಕೆ ಬಳಿಕ “ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದೆ’ ಎನ್ನುತ್ತಿದ್ದವರು ಈಗ “ಯಡಿಯೂರಪ್ಪ ಅವರು ಕೊನೇ ಕ್ಷಣವರೆಗೂ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ಹೇಳುತ್ತಿದ್ದಾರೆ.
ಜತೆಗೆ, ರಾಜೀನಾಮೆ ವಿಷಯ ಮಾಧ್ಯಮಗಳ ಸೃಷ್ಟಿ ಎನ್ನುವ ಮೂಲಕ ರಾಜೀನಾಮೆ ವಿಷಯವನ್ನು ತೆರೆಗೆ ಸರಿಸುವ ಪ್ರಯತ್ನ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಾಗಿದ್ದು, ಇಂತಹ ಪಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಈಗಾಗಲೇ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಪಾಲನೆ ಮಾಡುವುದಾಗಿ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಏನು ಹೇಳಿಕೆ ನೀಡಿದ್ದಾರೋ ಅದು ಬಹಳ ಮಹತ್ವದ್ದು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಸೌಹಾರ್ದತಯುತವಾಗಿ ಭೇಟಿ ನೀಡಿದ್ದೇನೆ. ಸಿಎಂ ಹುದ್ದೆಗೆ ನನ್ನ ಹೆಸರು ಕೇಳಿ ಬರುತ್ತಾ ಇರುವುದು ಕೇವಲ ಊಹಾಪೋಹ ಎಂದೂ ಬೊಮ್ಮಾಯಿ ಹೇಳಿದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, 75 ವರ್ಷ ಮೇಲ್ಪಟ್ಟವರು ರಾಜಕೀಯವಾಗಿ ನಿವೃತ್ತಿ ಹೊಂದಬೇಕು ಎಂಬುದಾಗಿ ಮತ್ತು ಯಾವುದೇ ಹುದ್ದೆಯಲ್ಲಿ ಇರಬಾರದು ಎಂದು ಬಿಜೆಪಿ ಸಂವಿಧಾನದಲ್ಲಿಲ್ಲ. ಯಡಿಯೂರಪ್ಪ ಅವರು ಸಹ ಮುಖ್ಯಮಂತ್ರಿ ಆಗಿದ್ದು 75 ವರ್ಷ ಆದ ಮೇಲೆಯೇ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸಿದರು.
ಇದನ್ನೂ ಓದಿ :ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಚಿನ್ನದ ಆಮದು ಏರಿಕೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರ ನಿರ್ಧಾರ ಏನೆಂಬುದು ನಮಗೆ ಗೊತ್ತಿಲ್ಲ. ಯಡಿಯೂರಪ್ಪರಿಗೂ ಈ ಬಗ್ಗೆ ಸೂಚನೆ ಬಂದಂತಿಲ್ಲ. ಅವರು ಸಹ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. ಸಿಎ ಹುದ್ದೆ ಖಾಲಿಯಿಲ್ಲದಿರುವಾಗ ಅದರ ಬಗ್ಗೆ ಚರ್ಚಿಸುವ ಅವಶ್ಯಕತೆಯಿಲ್ಲ. ಯಡಿಯೂರಪ್ಪ ಅವರೇ ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಇದುವರೆಗೆ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆ ಕೊಟ್ಟಿಲ್ಲ ಎಂದು ಹೇಳಿದರು.
ಸಿಎಂ ಜತೆಗೆ ಬೆಳಗಾವಿಗೆ ಹೋಗುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಹೈಕಮಾಂಡ್ ನಿಂದ ಸಂದೇಶ ಬರುವ ಬಗ್ಗೆ ಗೊತ್ತಿಲ್ಲ, ಆ ಥರದ ಸಂದೇಶದ ಬಗ್ಗೆ ಗೊತ್ತಿಲ್ಲ ಎಂದರು. ಕೇಂದ್ರದ ನಿರ್ಧಾರದ ಬಗ್ಗೆ ನನ್ನ ಗಮನವಿಲ್ಲ, ನಮ್ಮ ಗಮನ ಪರಿಹಾರ ಕ್ರಮಗಳತ್ತ ಮಾತ್ರ. ಜನರ ಪರ ನಿಲ್ಲೋದು ಯಡಿಯೂರಪ್ಪನವರಿಗೆ ರಕ್ತಗತವಾಗಿ ಬಂದಿದೆ. ಏನೇ ಬಂದರೂ ಯಡಿಯೂರಪ್ಪ ನಿತ್ಯದ ಜನಪರ ಕೆಲಸ ಮಾಡೋದನ್ನು ನಿಲ್ಲಿಸುವುದಿಲ್ಲ ಎಂದು ಕೊಂಡಾಡಿದರು.