ಬಿಬಿಎಂಪಿ ಅಂದ್ರೆ ಭ್ರಷ್ಟಾಚಾರದ ಸಂತೆ, ಇನ್ಮುಂದೆ ಅಭಿವೃದ್ಧಿ ಕಾರ್ಯ; ಬಿಎಸ್ ಯಡಿಯೂರಪ್ಪ
Team Udayavani, Oct 2, 2019, 1:27 PM IST
ಬೆಂಗಳೂರು:ಇದುವರೆಗೆ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಭ್ರಷ್ಟಾಚಾರದ ಕೂಪವಾಗಿದ್ದು, ಇನ್ಮುಂದೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿಯ ಗೌತಮ್ ಕುಮಾರ್ ಜೈನ್ ಬಿಬಿಎಂಪಿಯ ನೂತನ ಮೇಯರ್ ಆಗಿ ಹಾಗೂ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಬಳಿಕ ಬಿಎಸ್ ವೈ ಸುದ್ದಿಗಾರರ ಜತೆ ಮಾತನಾಡಿದರು.
ಬಿಬಿಎಂಪಿ ಅಂದರೆ ಭ್ರಷ್ಟಾಚಾರದ ಸಂತೆ. ಇನ್ಮುಂದೆ ಅಭಿವೃದ್ಧಿ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳುತ್ತೇವೆ. ಬಿಬಿಎಂಪಿಗೆ ಸರಕಾರದಿಂದ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಿಎಂ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬಿಬಿಎಂಪಿಯಲ್ಲಿ ನಾಲ್ಕು ವರ್ಷಗಳ ನಂತರ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಮಂಗಳವಾರ ನಡೆದ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಗೌತಮ್ ಕುಮಾರ್ ಹಾಗೂ ರಾಮ್ ಮೋಹನ್ ಆಯ್ಕೆಯಾಗಿದ್ದರು.