ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು
Team Udayavani, Jun 22, 2021, 12:03 AM IST
ಬೆಳಗಾವಿ: ಖಾನಾಪುರ ತಾಲೂಕಿನ ಗಣೇಬೈಲ್ ದಲ್ಲಿ ಶಾಲಾ ವಿದ್ಯಾರ್ಥಿಗಳಿಬ್ಬರು ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಗಣೇಬೈಲ್ ಮರಾಠಿ ಪ್ರಾಥಮಿಕ ಶಾಲೆ ಆರನೇ ತರಗತಿ ವಿದ್ಯಾರ್ಥಿ ಝಾಡ ಅಂಕಲೆ ಗ್ರಾಮದ ವಿಠ್ಠಲ ಪರುಶರಾಮ ನಿಲಜಕರ ಹಾಗೂ ಝಾಡ ಅಂಕಲೆ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭೂತನಾಥ ದೀಪಕ ನಿಲಜಕರ ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ತನ್ನ ಅಜ್ಜಿಯೊಂದಿಗೆ ಎಮ್ಮೆ ತೊಳೆಯಲು ವಿದ್ಯಾರ್ಥಿಗಳು ಹೋಗಿದ್ದರು. ಎಮ್ಮೆ ತೊಳೆದು ಅಜ್ಜಿ ಮನೆಗೆ ವಾಪಸ್ ಬಂದಿದ್ದಾಳೆ. ಆದರೆ ಇಬ್ಬರೂ ವಿದ್ಯಾರ್ಥಿಗಳು ನೀರಿನತ್ತ ಹೋಗಿದ್ದರು. ಇದೇ ನೀರಿನ ಹೊಂಡದಲ್ಲಿ ಒಂದುದಿನ ಹಿಂದೆಯಷ್ಟೇ ಎಮ್ಮೆಯೊಂದು ಬಿದ್ದಿದ್ದ ಜಾಗ ನೋಡಲು ಈ ಇಬ್ಬರು ವಿದ್ಯಾರ್ಥಿಗಳು ಹೋಗಿದ್ದರು. ಒಬ್ಬ ಮುಂದೆ ಹೋದಾಗ ಕಾಲು ಜಾರಿ ರಾಡಿ ತುಂಬಿದ ನೀರಿನಲ್ಲಿ ಬಿದ್ದಿದ್ದಾನೆ. ಈತನನ್ನು ಹಿಡಿಯಲು ಇನ್ನೊಬ್ಬ ಹೋಗಿ ಇಬ್ಬರೂ ನೀರು ಪಾಲಾಗಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.