ಬೆಂಗಳೂರು ದಾಳಿ ಪ್ರಕರಣ ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ! ಕಾರಣವೇನು ಗೊತ್ತಾ?
Team Udayavani, Aug 14, 2020, 9:06 AM IST
ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಬಂಧಿಸಿದ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಬಳ್ಳಾರಿ ಜೈಲಿಗೆ ಆರೋಪಿಗಳು ತಲುಪಿದ್ದು, ದಾಖಲಾತಿ ಆರಂಭವಾಗಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 206 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ರಾತ್ರಿ ನಗರದ ಹಲವೆಡೆ ದಾಳಿ ಮಾಡಿ ಸಿಸಿಬಿ ಪೊಲೀಸರು 60 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿಯಾದ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಆರೋಪಿಗಳ ಪೈಕಿ 80 ಮಂದಿಯನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ವರದಿಯಾಗುತ್ತಿದೆ ಆದರೆ ಎಷ್ಟು ಮಂದಿಯನ್ನು ಸ್ಥಳಾಂತರ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಬಳ್ಳಾರಿ ಕಾರಾಗೃಹ ಯಾಕೆ?
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗಾಗಲೇ ಕೈದಿಗಳ ಸಂಖ್ಯೆ ಹೆಚ್ಚಿದ್ದು, ಇಷ್ಟು ಮಂದಿಯನ್ನು ಇಡಲು ಸ್ಥಳಾವಕಾಶದ ಕೊರತೆಯಿದೆ ಎನ್ನಲಾಗಿದೆ. ಕೋವಿಡ್ ಭೀತಿಯ ನಡುವೆ ಒಂದೇ ಕಡೆ ತುಂಬಾ ಜನರನ್ನು ಇಡುವುದು ಕಷ್ಟ.
ಇದನ್ನೂ ಓದಿ: ಬೆಂಗಳೂರು ಗಲಭೆ: ರಾತ್ರೋರಾತ್ರಿ ಸಿಸಿಬಿ ದಾಳಿ, ಕಾರ್ಪೋರೇಟರ್ ಪತಿ ಸೇರಿ 60 ಮಂದಿಯ ಬಂಧನ
ಅಷ್ಟೇ ಅಲ್ಲದೆ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಿಗೂ, ಈ ಗಲಭೆ ಆರೋಪಿಗಳಿಗೂ ಸಂಪರ್ಕ ಇದೆ ಎನ್ನಲಾಗಿದೆ. ಪಾದರಾಯನಪುರ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇರುವ ಕಾರಣ ಮತ್ತೆ ಸಂಚು ರೂಪಿಸುವ ಸಾಧ್ಯತೆ ಇರುವ ಕಾರಣ ಬಳ್ಳಾರಿ ಕಾರಾಗ್ರಹಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.