ಮುಂಬಯಿ ಕಟ್ಟಡ ದುರಂತ : ಸಾವಿನ ಸಂಖ್ಯೆ 14ಕ್ಕೆ ಏರಿಕೆ
Team Udayavani, Jul 17, 2019, 8:38 AM IST
ಮುಂಬಯಿ: ಇಲ್ಲಿನ ಡೋಂಗ್ರಿ ಪ್ರದೇಶದಲ್ಲಿ ಮಂಗಳವಾರ ಕುಸಿತಕ್ಕೊಳಗಾದ ಬಹುಮಹಡಿ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು 14ಕ್ಕೆ ಏರಿಕೆಯಾಗಿದೆ.
ಕುಸಿತಕ್ಕೊಳಗಾದ ಶತಮಾನಗಳಷ್ಟು ಹಳೆಯದಾದ ಕೇಸರ್ ಭಾಯ್ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರಬಹುದಾಗಿದ್ದವರನ್ನು ರಕ್ಷಿಸುವ ಕಾರ್ಯ ಮಂಗಳವಾರ ರಾತ್ರಿಯಿಡೀ ಜಾರಿಯಲ್ಲಿತ್ತು. ರಾತ್ರಿ ನಡೆದ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಮತ್ತೆ ನಾಲ್ಕು ಶವಗಳನ್ನು ಅವಶೇಷಗಳಿಡಿಯಿಂದ ಮೇಲೆತ್ತಲಾಯಿತು ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ 9ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಅವರೆಲ್ಲರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕುಸಿದುಬಿದ್ದಿರುವ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ 30 ಜನರು ಸಿಲುಕಿಕೊಂಡಿರುವ ಭೀತಿ ವ್ಯಕ್ತವಾಗಿದೆ.
ಶತಮಾನಗಳಷ್ಟು ಹಳೆಯದಾಗಿದ್ದ ನಾಲ್ಕು ಮಹಡಿಗಳ ಈ ಕಟ್ಟಡದಲ್ಲಿ 16 ಕುಟುಂಬಗಳು ವಾಸವಾಗಿದ್ದವು ಹಾಗೂ ಕಟ್ಟಡದ ತಳ ಮಹಡಿಯಲ್ಲಿ ನಾಲ್ಕು ಅಂಗಡಿಗಳೂ ಸಹ ಇದ್ದವೆಂದು ತಿಳಿದುಬಂದಿದೆ.