ಉಪ ಚುನಾವಣೆ: ಮತ್ತೆ ಮೈತ್ರಿಯ ಕಸರತ್ತು?
Team Udayavani, Dec 1, 2019, 5:50 AM IST
ಬೆಂಗಳೂರು: ಉಪ ಚುನಾವಣೆಯ ಅಖಾಡದಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಮೂರೂ ಪಕ್ಷಗಳ ಪ್ರಚಾರದ ಅಬ್ಬರ, ವಾಕ್ಸಮರವೂ ಜೋರಾಗಿದೆ. ಫಲಿತಾಂಶ ಬಳಿಕದ ಮರು ಮೈತ್ರಿ, ಸರಕಾರ ಬದಲಾವಣೆ ವಿಚಾರಗಳು ಪ್ರಸ್ತಾವವಾಗುತ್ತಿವೆ. ಅದರಲ್ಲೂ ಮುಖ್ಯಮಂತ್ರಿ ಗಾದಿ ಬಗ್ಗೆಯೇ ಹೆಚ್ಚಿನ ಚರ್ಚೆಯಾಗುತ್ತಿರುವುದು ವಿಶೇಷ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡ ವರಂತೆ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಹದಿನೈದು ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಮೂರೂ ಪಕ್ಷಗಳ ನಾಯಕರು ಪ್ರತಿಪಾದಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಯಶ ವಂತಪುರ, ಎಚ್.ಡಿ. ದೇವೇಗೌಡರು ಚಿಕ್ಕಬಳ್ಳಾಪುರ, ಸಿದ್ದರಾಮಯ್ಯ ಅಥಣಿ, ಎಚ್.ಡಿ. ಕುಮಾರಸ್ವಾಮಿ ಕಾಗವಾಡ ದಲ್ಲಿ ಶನಿವಾರ ಪ್ರಚಾರ ನಡೆಸಿದರು.
ಇದರ ನಡುವೆ, ಫಲಿತಾಂಶದ ಬಳಿಕ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಮತ್ತೆ ಹೇಳಿದ್ದಾರೆ.
ಮತ್ತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ
ಸರಕಾರ ರಚನೆಯಾಗುವ ಬಗ್ಗೆ ಇದುವರೆಗೆ ತನ್ನ ಜತೆ ಯಾವ ನಾಯಕರೂ ಚರ್ಚಿ ಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ದ್ರೋಹಿ: ಬಿಎಸ್ವೈ
ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೂಂದು ಹೆಸರು ಜೆಡಿಎಸ್. 20 ತಿಂಗಳ ಸಮ್ಮಿಶ್ರ ಸರಕಾರದ ಅನಂತರ ಅಧಿಕಾರ ಹಸ್ತಾಂತರ ಮಾಡಬೇಕೆಂದು ಅಪ್ಪ-ಮಕ್ಕಳು ನಾಟಕ ಮಾಡಿ ಕೈಕೊಟ್ಟು ಓಡಿ ಹೋದರು. ಈಗ ಮತ್ತೂಮ್ಮೆ
ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿ ಕೊಂಡು ಮರು ಚುನಾವಣೆ ನಡೆಯು ವುದಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ. ಇವರ ಹಗಲುಗನಸು ನನಸಾಗದು ಎಂದು ಯಡಿಯೂರಪ್ಪ ಹೇಳಿದರು.
ರಾಜಕೀಯ ಧ್ರುವೀಕರಣ: ಎಚಿxಕೆ
ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯಲಿವೆ. ಸರಕಾರ ರಚನೆ ವಿಷಯದಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಹೇಳಿಕೆಗಳನ್ನು ಗಮನಿಸಿದ್ದೇನೆ. ಈಗ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ವಾಗ್ಧಾಳಿ
ಗೋಕಾಕ್ಗೆ ಸ್ವಾತಂತ್ರ್ಯ ಬೇಕು ಎಂದರೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಸೋಲಬೇಕು. ಈ ಮೂಲಕ ರಿಪಬ್ಲಿಕ್ ಆಫ್ ಗೋಕಾಕ್ ಎಂಬ ಕಳಂಕ ತೊಡೆದುಹಾಕಬೇಕು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಗೋಕಾಕ್ನಲ್ಲಿ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರ ನಡೆಸಿದ ಅವರು, ಗೋಕಾಕ್ ಬಳ್ಳಾರಿಯಂತೆ ಆಗಿದೆ. ಈ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದೆ. ಅದರ ಫಲವಾಗಿ ಜನಾರ್ದನ ರೆಡ್ಡಿ ಜೈಲಿಗೆ ಹೋದರು. ಬಳ್ಳಾರಿಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದರು.
ಅಭಿವೃದ್ಧಿಗೆ ಬಲ: ಎಚ್ಡಿಡಿ
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ತಮಿಳುನಾಡು, ಆಂಧ್ರದ ರೀತಿಯಲ್ಲಿ ರಾಜ್ಯದ ಜನತೆ ಪ್ರಾದೇಶಿಕ ಪಕ್ಷಗಳಿಗೆ ಬಲ ತುಂಬಿದಾಗ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.