ನಾಳೆ ಸಂಪುಟ ವಿಸ್ತರಣೆ? ಹಿರಿಯ ಸಚಿವರಿಗೆ ಗೇಟ್ಪಾಸ್ ಸಾಧ್ಯತೆ
Team Udayavani, May 28, 2019, 6:10 AM IST
ಬೆಂಗಳೂರು: ಆಪರೇಷನ್ ಕಮಲ ಆತಂಕ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ. ಇದಕ್ಕಾಗಿ ಕೆಲವು ಸಚಿವರ ತಲೆದಂಡಕ್ಕೂ ತೀರ್ಮಾನಿಸಿದೆ. ಆದರೆ, ಈ ಕಸರತ್ತು ಜೇನುಗೂಡಿಗೆ ಕಲ್ಲು ಎಸೆದಂತಾಗಬಹುದು ಎಂಬ ಆತಂಕವೂ ಇದೆ.
ಸಂಪುಟ ವಿಸ್ತರಣೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಲಾಗಿದ್ದು, ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಮತ್ತೂಂದು ಸಭೆ ನಡೆಸಿ ಅಂತಿಮ ತೀರ್ಮಾನವಾಗಲಿದೆ. ಬಹುತೇಕ ಬುಧವಾರ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನ ಭರ್ತಿಯಾಗುವ ಸಾಧ್ಯತೆಯಿದೆ.
ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಕೋಟಾದಡಿ ಬಿ.ಸಿ.ಪಾಟೀಲ್, ಪರಿಶಿಷ್ಟ ಪಂಗಡ ಕೋಟಾದಡಿ ಬಿ.ನಾಗೇಂದ್ರ, ಕುರುಬ ಕೋಟಾದಡಿ ಆರ್.ಶಂಕರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ಪುನಾರಚನೆಯಾದರೆೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಂಟು ಸಚಿವರನ್ನು ಕೈ ಬಿಟ್ಟು ಅತೃಪ್ತರು ಹಾಗೂ ಸಚಿವಾಕಾಂಕ್ಷಿಗಳಿಗೆ ಅವಕಾಶ ಸಿಗಲಿದೆ. ಸಂಪುಟದಿಂದ ಕೈ ಬಿಡಲಿರುವವರ ಪಟ್ಟಿಯಲ್ಲಿ ಕಾಂಗ್ರೆಸ್ನಿಂದ ಡಾ.ಜಯಮಾಲಾ, ಯು.ಟಿ.ಖಾದರ್, ಶಿವಶಂಕರ ರೆಡ್ಡಿ, ಪುಟ್ಟರಂಗ ಶೆಟ್ಟಿ, ವೆಂಕಟರಮಣಪ್ಪ ಜೆಡಿಎಸ್ ಕಡೆಯಿಂದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಗುಬ್ಬಿ ಶ್ರೀನಿವಾಸ್ ಅವರ ಹೆಸರುಗಳಿವೆ.
ಅನಿವಾರ್ಯವಾದರೆ ರಾಜೀನಾಮೆಗೆ ಸಿದ್ಧ ಇರುವಂತೆ ಕೃಷ್ಣ ಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಅವರಿಗೂ ಸೂಚನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾದರೆ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಅವರಿಂದಲೂ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲು ತೀರ್ಮಾನಿಸಲಾಗಿದೆ. ಆಗ ಮತ್ತಷ್ಟು ಸಚಿವಾಕಾಂಕ್ಷಿಗಳಿಗೂ ಸಚಿವಗಿರಿ ಭಾಗ್ಯ ದೊರೆಯಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಅತೃಪ್ತರಿಗಾಗಿ ನಾವ್ಯಾಕೆ ರಾಜೀನಾಮೆ ಕೊಡಬೇಕು. ಪಕ್ಷದ ಕಷ್ಟದ ಕಾಲದಲ್ಲಿ ನಾವು ಇದ್ದೆವು. ಇದೀಗ ಅತೃಪ್ತರಿಗೆ ಮಣೆ ಹಾಕಿ ನಮ್ಮನ್ನು ರಾಜೀನಾಮೆ ಕೊಡಿ ಎಂದು ಕೇಳುವುದು ಯಾವ ನ್ಯಾಯ ಎಂದು ಹೆಸರು ಹೇಳಲು ಇಚ್ಛಿಸದ ಸಚಿವರು ಹೇಳುತ್ತಾರೆ. ಸಚಿವರ ರಾಜೀನಾಮೆ ನಂತರ ಅತೃಪ್ತರ ಕಡೆಯಿಂದ ರಮೇಶ್ ಜಾರಕಿಹೊಳಿ, ಡಾ.ಕೆ. ಸುಧಾಕರ್, ರೋಷನ್ಬೇಗ್, ಮಹೇಶ್ ಕುಮಟಳ್ಳಿ, ಪಕ್ಷೇತರ ಶಾಸಕ ನಾಗೇಶ್, ಜೆಡಿಎಸ್ನಿಂದ ಶಿರಾ ಸತ್ಯನಾರಾಯಣ, ಕೆ.ಶ್ರೀನಿವಾಸಗೌಡ, ಎಚ್.ಕೆ.ಕುಮಾರಸ್ವಾಮಿ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ದೆಹಲಿಯಲ್ಲಿ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಲು ಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪಕ್ಷೇತರ ಶಾಸಕ ಆರ್.ಶಂಕರ್ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಬಿಜೆಪಿಯತ್ತ ವಾಲಿದ್ದ ಅವರನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವ ಸಂಬಂಧ ಹೈಕಮಾಂಡ್ ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ ಅವರೇ ಕರೆದೊಯ್ದಿದ್ದರು ಎಂದೂ ಹೇಳಲಾಗಿದೆ.
ಆದರೆ ಈ ಮಧ್ಯೆ, ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯಕ್ಕೆ ಸಂಪುಟ ವಿಸ್ತರಣೆಯೂ ಇಲ್ಲ, ಪುನಾರಚನೆಯೂ ಇಲ್ಲ ಎಂದು ಹೇಳಿದ್ದಾರೆ. ಆದರೂ ಸೋಮವಾರ ಇಡೀ ದಿನ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ಚರ್ಚೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ವಲಯದಲ್ಲಿ ನಡೆದಿತ್ತು.
ಬಿಜೆಪಿಯಿಂದ ಕಾದು ನೋಡುವ ತಂತ್ರ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಕಸರತ್ತು ಕೈಗೊಂಡಿರುವ ಬೆನ್ನಲ್ಲೇ ಬಿಜೆಪಿಯು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ನ ಅತೃಪ್ತರನ್ನು ಸೆಳೆಯಲು ರಹಸ್ಯ ಕಾರ್ಯಾಚರಣೆ ಮಾಡಿತ್ತು. ಕೆಲವರು ಸಂಪರ್ಕಕ್ಕೆ ಸಿಕ್ಕಿ ಬರುವುದಾಗಿಯೂ ಭರವಸೆ ನೀಡಿದ್ದರು. ಪ್ರಧಾನಿ ನರೇಂದ್ರಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ರಾಜೀನಾಮೆ ಪರ್ವ ಆರಂಭವಾಗಬೇಕಿತ್ತು.
ಆದರೆ, ಇದ್ದಕ್ಕಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮೂಲಕ ಅತೃಪ್ತರಿಗೆ ಮಣೆ ಹಾಕುವ ಕಾರ್ಯತಂತ್ರ ರೂಪಿಸಿರುವುದರಿಂದ ಮುಂದೇನು ಮಾಡಬೇಕು ಎಂಬ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಆಥವಾ ಪುನಾರಚನೆಯಾದರೂ ಕಾಂಗ್ರೆಸ್-ಜೆಡಿಎಸ್ನಲ್ಲಿ ಅತೃಪ್ತಿ ಸ್ಫೋಟವಾಗಲಿದ್ದು ಜೂ.1 ರ ನಂತರ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಮೇ 29 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಬಿಜೆಪಿ ರಂಗಪ್ರವೇಶ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.