ಹಬ್ಬಗಳ ಮೇಲೆ ನಿಯಂತ್ರಣ ವಿಧಿಸಿ : ಕೇಂದ್ರ ಸರಕಾರದಿಂದ ರಾಜ್ಯಗಳಿಗೆ ಸೂಚನೆ
Team Udayavani, Aug 29, 2021, 7:35 AM IST
ಹೊಸದಿಲ್ಲಿ : ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗಿನಿಂದಲೇ ಜಾಗ್ರತೆ ವಹಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿರುವ ಕೇಂದ್ರ ಗೃಹ ಇಲಾಖೆ, ಹೆಚ್ಚು ಜನ ಸಂದಣಿ ಸೇರದಂತೆ ನೋಡಿಕೊಳ್ಳಲು ಹೇಳಿದೆ. ಈ ಮೂಲಕ ಹಬ್ಬಗಳ ಸಮಯದಲ್ಲಿ ನಿಯಂತ್ರಣ ವಿಧಿಸುವಂತೆ ಪರೋಕ್ಷವಾಗಿ ಸೂಚಿಸಿದೆ.
ಕೇರಳದಲ್ಲಿ ಮೊದಲಿಗೆ ಬಕ್ರೀದ್, ಅನಂತರ ಓಣಂ ಬಳಿಕ ಕೊರೊನಾ ಬಹಳಷ್ಟು ಹೆಚ್ಚಾಗಿದೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ಸೇರದಂತೆ ಮಾಡಿದರೆ ಕೊರೊನಾ ಹರಡುವಿಕೆ ತಡೆಯಬಹುದು ಎಂಬುದು ಕೇಂದ್ರ ಸರಕಾರದ ಲೆಕ್ಕಾಚಾರ.
ಅಷ್ಟೇ ಅಲ್ಲ, ಅಗತ್ಯ ಬಿದ್ದರೆ ಹಬ್ಬಗಳ ವೇಳೆ ಸ್ಥಳೀಯವಾಗಿ ಲಾಕ್ ಡೌನ್ ನಂಥ ನಿರ್ಬಂಧಗಳನ್ನು ವಿಧಿಸುವಂತೆಯೂ ಗೃಹ ಇಲಾಖೆ ಸೂಚನೆ ನೀಡಿದೆ.
ಸದ್ಯ ಕೊರೊನಾ ಹರಡುವಿಕೆಯ ಗತಿ ಸ್ಥಿರವಾಗಿದೆ. ಆದರೂ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೇಳಿದ್ದಾರೆ.
ಶಾಲೆ ತೆರೆಯಲು ಸಲಹೆ
ಕೊರೊನಾ ಕಡಿಮೆಯಾಗುತ್ತಿದ್ದು, ಶಾಲೆಗಳನ್ನು ಪುನರಾರಂಭಿಸುವಂತೆ 56 ಶೈಕ್ಷಣಿಕ ತಜ್ಞರು, ವೈದ್ಯರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳಿಗೆ ಪತ್ರ ಬರೆದಿದ್ದಾರೆ. ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಇಡೀ ಜಗತ್ತಿನಲ್ಲಿ ಭಾರತ ಸಹಿತ ನಾಲ್ಕೈದು ದೇಶಗಳಲ್ಲಿ ಮಾತ್ರ ಶಾಲೆ ಮುಚ್ಚಲಾಗಿದೆ. ಹೀಗಾಗಿ ಕೂಡಲೇ ಶಾಲೆಗಳನ್ನು ಆರಂಭಿಸುವಂತೆ ಅವರು ಸಲಹೆ ನೀಡಿ ದ್ದಾರೆ.
ಪತ್ರದಲ್ಲಿ ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ಮನ್ಸುಖ ಮಾಂಡವೀಯ ಅವರ ಪ್ರಸ್ತಾವವನ್ನೂ ಮಾಡಿರುವ ತಜ್ಞರು, ಕೊರೊನಾ ಸೋಂಕಿ ನಿಂದ ಮಕ್ಕಳು ಬಾಧಿತರಾಗುವುದು ಕಡಿಮೆ. ಈಗಲೂ ಅವರು ಅತ್ಯಂತ ಕಡಿಮೆ ರಿಸ್ಕ್ ನಲ್ಲಿದ್ದಾರೆ. ಹೀಗಾಗಿ ಪ್ರಾಥಮಿಕ ಶಾಲೆಗಳನ್ನು ಆರಂಭ ಮಾಡುವುದು ಒಳಿತು ಎಂದಿದ್ದಾರೆ. ಈಗ ಶಾಲೆಗಳನ್ನು ತೆರೆಯದಿದ್ದರೆ ಭವಿಷ್ಯದಲ್ಲಿ ಬೇರೆ
ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.