ಕೋವಿಡ್-19 ದಿಗ್ಬಂಧನಕ್ಕೆ ಸಿನೇಮಾ ರಂಗ ತತ್ತರ
Team Udayavani, May 16, 2020, 8:45 PM IST
ಮಣಿಪಾಲ: ಶೂಟಿಂಗ್ ಮುಗಿಸಿ ಇನ್ನೇನು ಬಿಡುಗಡೆ ಮಾಡಬೇಕು ನಿರ್ಧರಿಸಿದ್ದ ಚಿತ್ರಗಳೆಷ್ಟೋ, ಶೂಟಿಂಗ್ ಅರ್ಧಕ್ಕೆ ನಿಂತು ಪ್ಯಾಕಪ್ ಆದ ಚಿತ್ರಗಳೆಷ್ಟೋ?, ಮತ್ತೆ ಕಲಾವಿದರನ್ನು, ಸಂಪನ್ಮೂಲಗಳನ್ನು ಹೊಂದಿಸುವುದು ಸುಲಭದ ಮಾತಂತೂ ಖಂಡಿತಾ ಅಲ್ಲ. ಒಂದು ಸಿನೇಮಾ ನಿಂತರೆ ಅಸಂಖ್ಯಾತ ಜನ ಸಂಕಟ ಪಡುತ್ತಾರೆ. ಅಷ್ಟೇ ಅಲ್ಲದೆ ಸಿನೇಮಾ ರಂಗವನ್ನೇ ನಂಬಿದ ಪೂರಕ ಉದ್ಯಮಗಳಿವೆ. ಸಿನೇಮಾ ಥಿಯೇಟರ್ಗಳು, ಮಾಲ್ಗಳಲ್ಲಿ ದುಡಿಯುವವರೂ ಕೆಲಸವಿಲ್ಲದೆ ಮನೆಯಲ್ಲೇ ದಿನ ದೂಡುತ್ತಿದ್ದಾರೆ.
ಸಿನೇಮಾ ಪೂರಕ ರಂಗಗಳ ದನಿಯೂ ಕೇಳಿ
ಚಿತ್ರರಂಗವನ್ನು ನಂಬಿಕೊಂಡು ಅನೇಕರು ಉಸಿರಾಡುತ್ತಾರೆ. ಚಿಕ್ಕದಾಗಿ ಸ್ನಾಕ್ಸ್ ಮಾರುವವನಿಂದ ಹಿಡಿದು ಕಲಾವಿದರು, ತಂತ್ರಜ್ಞರು, ಸಿನೇಮಾ ಸಾಹಿತಿ, ಛಾಯಾಚಿತ್ರ ಗ್ರಾಹಕ, ಸಿನೇಮಾ ಸಂಗೀತ ಕಲಾವಿದರು, ಮೇಕಪ್ಮ್ಯಾನ್, ಡಿಸೈನರ್ಗಳು, ಥಿಯೇಟರ್ನಲ್ಲಿ ಟಿಕೇಟು ಮಾರುವವನು, ಲೈಟ್ಬಾಯ್, ಫೋಸ್ಟರ್ ಅಂಟಿಸುವವನು ಸೇರಿದಂತೆ ಇನ್ನೂ ಹಲವರಿಗೆ ಸಿನೇಮಾದಿಂದಲೇ ಬದುಕು. ಇಲ್ಲದಿದ್ದರೆ ಖಾಲಿ ಹೊಟ್ಟೆ.
ಕರ್ನಾಟಕ ಚಿತ್ರ ರಂಗದ ಕತೆ ಏನು?
ಕೋವಿಡ್-19 ವೈರಸ್ ಕನ್ನಡ ಚಲನಚಿತ್ರೋದ್ಯಮವನ್ನು ಬೆಚ್ಚಿಬೀಳಿಸಿದ್ದು, ನಿರ್ದೇಶಕರು, ನಿರ್ಮಾಪಕರು, ನಟರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಎಲ್ಲವೂ ಯೋಜನೆಯಂತೆ ನಡೆದಿದ್ದರೆ, ಕನ್ನಡ ಚಲನಚಿತ್ರೋದ್ಯಮವು ಎಪ್ರಿಲ್ನಿಂದ ಬಹುಶಃ ಸೆಪ್ಟೆಂಬರ್ವರೆಗೆ ನಾಲ್ಕು ದೊಡ್ಡ ಚಲನಚಿತ್ರಗಳನ್ನು ಬಿಡುಗಡೆ ಕಾಣುತ್ತಿತ್ತು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ನಟಿಸಿರುವ ರಾಬರ್ಟ್, ಶಿವ ಕಾರ್ತಿಕ್ ನಿರ್ದೆಶಿಸಿ ಸುದೀಪ್ ನಟಿಸಿರುವ ಅವರ ಕೊಟ್ಟಿಗೊಬ್ಬ 3, ಸಂತೋಷ್ ಆನಂದ್ರಾಮ್ ನಿರ್ದೇಶಿಸಿ ಪುನೀತ್ ರಾಜ್ ಕುಮಾರ್ ನಟಿಸಿರುವ ಯುವರತ್ನ, ಮತ್ತು ನಂದ ಕಿಶೋರ್ ಅವರ ನಿರ್ದೇಶಿಸಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದ ಪೊಗರು ಸಿನೇಮಾ ಬಿಡುಗಡೆ ಮುಂದೂಡಲ್ಪಟ್ಟಿದೆ.
ಸಿನೇಮಾ ಮಂದಿರಗಳ ಕತೆ ಏನು?
ಸದ್ಯಕ್ಕೆ ಇನ್ನೂ 15-20 ದಿನಗಳು ಸಿನೇಮಾ ಮಂದಿರಗಳನ್ನು ತೆರೆಯುವುದು ಅನುಮಾನದ ಮಾತು. ಒಂದು ವೇಳೆ ತೆರೆದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಸಿನೇಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಬರುವುದು ಸಾಧ್ಯವಿಲ್ಲ. ಇವುಗಳ ಆದಾಯಕ್ಕಿಂತಲೂ ನಿರ್ವಹಣಾ ವೆಚ್ಚವೇ ಅಧಿಕವಾಗುವ ಸಾಧ್ಯತೆ ಇರುವುದರಿಂದ ಥಿಯೇಟರ್ಗಳ ಮಾಲಕರೂ ಈ ಬಗ್ಗೆ ಮನ ಮಾಡುವುದು ದೂರದ ಮಾತು.