ರಾಷ್ಟ್ರಧ್ವಜ ಇಟ್ಟುಕೊಂಡೇ ಜನರ ಮುಂದೆ ಬನ್ನಿ; ಸಿಎಂ ಸವಾಲು
Team Udayavani, Feb 23, 2022, 7:40 AM IST
ವಿಧಾನ ಪರಿಷತ್ತು: “ನೀವು ಈಗ ನಡೆಸುತ್ತಿರುವ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡೇ ಜನರ ಮುಂದೆ ಬನ್ನಿ. ನಾವು ಅಭಿವೃದ್ಧಿ ಮಂತ್ರದೊಂದಿಗೆ ಬರುತ್ತೇವೆ. ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್ಗೆ ಸವಾಲು ಹಾಕಿದರು.
ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆ ವೇಳೆ ಮಾತನಾಡಿದ ಅವರು, “ರಾಜಕೀಯ ಲಾಭಕ್ಕಾಗಿ ನೀವು (ಕಾಂಗ್ರೆಸ್) ಅಧಿವೇಶನದಲ್ಲಿ ಈ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಿ. ವಾಸ್ತವವಾಗಿ ಸಚಿವರು ಹೇಳಿದೆ ಇರುವುದನ್ನು, ಸೇರಿಸಿ ಹೋರಾಟ ನಡೆಸುತ್ತಿದ್ದೀರಿ. ಇದು ತಪ್ಪು ಮತ್ತು ಜನ ಕೂಡ ಇದನ್ನು ಒಪ್ಪುವುದಿಲ್ಲ. ಬೇಕಿದ್ದರೆ ಇದೇ ವಿಷಯ ಇಟ್ಟುಕೊಂಡು ಜನರ ಮುಂದೆ ಬನ್ನಿ. ಆಗ ಜನರೇ ತೀರ್ಪು ಹೇಳುತ್ತಾರೆ’ ಎಂದು ಸವಾಲು ಹಾಕಿದರು.
“ಆಡಳಿತ ಪಕ್ಷವಾಗಿ ಅಂತೂ ಕಾಂಗ್ರೆಸ್ ಉಳಿದಿಲ್ಲ. ಈ ಅಧಿವೇಶನದಲ್ಲಿ ತಮ್ಮ ವರ್ತನೆಯಿಂದ ಪ್ರತಿಪಕ್ಷವಾಗುವ ಅರ್ಹತೆಗಳನ್ನೂ ಕಳೆದುಕೊಂಡಂತಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಭಾಗವಹಿಸಿ, ಸರ್ಕಾರದ ನೂನ್ಯತೆಗಳನ್ನು ಎತ್ತಿಹಿಡಿಯಲು ಪ್ರತಿಪಕ್ಷಕ್ಕೆ ಒಂದು ಅವಕಾಶ ಇತ್ತು.
ಪೂರ್ಣಪ್ರಮಾಣದಲ್ಲಿ ಚರ್ಚೆಯಾಗದಿರುವುದು ವಿಧಾನ ಮಂಡಲದ ಇತಿಹಾಸದಲ್ಲಿ ಕಪ್ಪುಚುಕ್ಕೆ. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ, ಸೇನಾಪಡೆಯೊಂದಿಗೆ ಬಂದವರು ನೀವು (ಕಾಂಗ್ರೆಸ್). ಅದರಲ್ಲಿ ಆರು ಜನ ಬಲಿಯಾದರು. ನಿಮ್ಮಂತಹವರಿಂದ ರಾಷ್ಟ್ರಭಕ್ತಿ ಕಲಿಯಬೇಕೇ?’ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಸುನೀಲ್ ಶೆಟ್ಟಿ ನಿರ್ಮಾಣದ “ಇನ್ವಿಸಿಬಲ್ ಮ್ಯಾನ್’ ನಲ್ಲಿ ನಟಿಸಲಿದ್ದಾರೆ ಈಶಾ ಡಿಯೋಲ್
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬರುವ ದಿನಗಳಲ್ಲಿ 8, 9 ಮತ್ತು 10ನೇ ತರಗತಿಯ ಗ್ರಾಮೀಣ ಹೆಣ್ಣುಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇರುವ ವಿದ್ಯಾನಿಧಿ ಯೋಜನೆ ಅಡಿ ಇದುವರೆಗೆ 4.52 ಲಕ್ಷ ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು.
ಆರು ತಿಂಗಳಲ್ಲಿ 11.2 ಲಕ್ಷ ಮನೆಗಳಿಗೆ ಮನೆ ಮನೆ ಗಂಗೆ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 1,400 ಕೋಟಿ ರೂ. ಒಂದೇ ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ. ಬರುವ ವರ್ಷ ಈ ಅನುದಾನವನ್ನು ಮೂರು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದ ಅವರು, ಕೋವಿಡ್ ಮತ್ತು ನೆರೆ ಹಾವಳಿ ನಡುವೆಯೂ ಸರ್ಕಾರ ಅಭಿವೃದ್ಧಿ ಪಥ ಮುಂದುವರಿಸಿದೆ ಎಂದು ಹೇಳಿದರು.