ಲಾಕ್ಡೌನ್ ಬಿಗಿಗೊಳಿಸಲು ಸಿಎಂ ಸೂಚನೆ
ಡಿಸಿಗಳೊಂದಿಗೆ ಯಡಿಯೂರಪ್ಪ ವೀಡಿಯೋ ಕಾನ್ಫರೆನ್ಸ್
Team Udayavani, Apr 9, 2020, 6:30 AM IST
ಬೆಂಗಳೂರು: ಕೋವಿಡ್ 19 ನಿಯಂತ್ರಣ ಮತ್ತು ಕೈಗೊಂಡಿರುವ ಕ್ರಮಗಳ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ, ಲಾಕ್ಡೌನ್ ಅನುಷ್ಠಾನ, ಆಹಾರ ಧಾನ್ಯ ಹಂಚಿಕೆ, ಹಾಲು ವಿತರಣೆ ಮಾಹಿತಿ ಪಡೆದರು.
ಲಾಕ್ಡೌನ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು. ಬೆಳಗ್ಗೆಯಿಂದ ರಾತ್ರಿವರೆಗೂ ಅಗತ್ಯ ವಸ್ತುಗಳ ಅಂಗಡಿ ತೆರೆಯುವ ಮೂಲಕ ಜನಸಂದಣಿಯಾಗದಂತೆ ಎಚ್ಚರ ವಹಿಸಬೇಕು. ಕೋವಿಡ್-19ಗೆ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆ ಸಿಬಂದಿಗೆ ಅಗತ್ಯವಾಗಿರುವ ಆಹಾರ, ಕುಡಿಯುವ ನೀರು, ವಸತಿ ಸೌಲಭ್ಯ ಒದಗಿಸಿ ಎಂದು ಆದೇಶ ನೀಡಿದರು.
ಆರೋಗ್ಯ ತಪಾಸಣೆ ನಡೆಸಿ
ಕ್ಯಾಂಪ್ನಲ್ಲಿರುವ ಕಾರ್ಮಿಕರಿಗೆ ಅಗತ್ಯ ವ್ಯವಸ್ಥೆ, ಅವರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು ಅಗತ್ಯ ವೈದ್ಯಕೀಯ ಉಪಕರಣ, ವಸ್ತುಗಳನ್ನು ಎಸ್ಡಿಆರ್ಎಫ್ ಅಡಿ ಖರೀದಿಸಬಹುದು ಎಂದು ಸಲಹೆ ನೀಡಿದರು.
ಮೈಸೂರು, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡು ಎ.14 ರ ಒಳಗೆ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಜನಪ್ರತಿನಿಧಿಗಳ ಮೂಲಕ ಮನವೊಲಿಸಿ, ಎಲ್ಲ ಸಮುದಾಯಗಳ ಸಹಯೋಗದಿಂದ ಕಾರ್ಯ ನಿರ್ವಹಿಸಬೇಕು. ನಿಜವಾಗಿಯೂ ಬಡವರಿದ್ದು, ಪಡಿತರ ಚೀಟಿ ಇನ್ನೂ ಪಡೆಯದೆ ಇದ್ದರೆ, ದಾನಿಗಳ ನೆರವಿನಿಂದ ಆಹಾರ ಧಾನ್ಯ ವಿತರಿಸಲು ವ್ಯವಸ್ಥೆ ಮಾಡಬೇಕು. ಯಾರೂ ಹಸಿವಿನಿಂದ ಬಳಲದಂತೆ ಎಚ್ಚರ ವಹಿಸುವಂತೆ ಸಿಎಂ ತಿಳಿಸಿದರು.
ಮುಖ್ಯಮಂತ್ರಿ ನಿರ್ದೇಶ ಎಲ್ಲ ಜಿಲ್ಲೆಗಳಲ್ಲಿಯೂ ದಾನಿಗಳ ಸಹಕಾರ ಪಡೆದು, ಆಹಾರ ಪೂರೈಕೆ, ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಹಣ್ಣು ತರಕಾರಿ ಬೆಳೆಗೆ ಉತ್ತಮ ಬೆಲೆ ನೀಡಿ ಖರೀದಿಸಿ, ಬಿತ್ತನೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲು ಸಿಎಂ ಯಡಿಯೂರಪ್ಪ ನಿರ್ದೇಶ ನೀಡಿದರು.