ಸಮುದಾಯದ ಆರೋಗ್ಯ ರಕ್ಷಣೆ ಎಲ್ಲರ ಹೊಣೆ
Team Udayavani, Apr 22, 2021, 6:55 AM IST
ಕೊರೊನಾ ಎರಡನೇ ಅಲೆಯ ಹರಡುವಿಕೆ- ಹಾನಿ ಪ್ರಮಾಣ ತೀವ್ರವಾಗಿದೆ. ವೈರಾಣುವಿನ ಮೊದಲ ಅಲೆಯ ಅನಿರೀಕ್ಷಿತ ಹೊಡೆತದ ತೀವ್ರತೆಯನ್ನು ಸಾಧ್ಯವಾದಷ್ಟು ತಡೆಯುವಲ್ಲಿ ಸರಕಾರ ಶಕ್ತಿ ಮೀರಿ ಪ್ರಯತ್ನ ನಡೆಸಿತ್ತು. ಆದರೆ ನಿರೀಕ್ಷೆ ಮೀರಿ ವ್ಯಾಪಕವಾಗಿ ಹರಡುತ್ತಿರುವ ನಿರೀಕ್ಷಿತ ಎರಡನೇ ಅಲೆಯನ್ನು ತಡೆಯುವುದು ಸರಕಾರ ಹಾಗೂ ಆರೋಗ್ಯ ವ್ಯವಸ್ಥೆಗೆ ಸವಾಲಾಗಿದೆ. ಈ ಸವಾಲನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಜನ ಜೀವನ ಅಸ್ತವ್ಯಸ್ತವಾಗದಂತೆ ಎಚ್ಚರವನ್ನೂ ವಹಿಸಬೇಕಿರುವುದರಿಂದ ಸರಕಾರ ಕೂಡ ಅಳೆದು ತೂಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿದೆ. ಬಡವರು, ಮಧ್ಯಮ ಕೆಳ ವರ್ಗದವರು, ಅಸಂಘಟಿತ ವಲಯದವರು ಸೇರಿದಂತೆ ದಿನಗೂಲಿ ಕಾರ್ಮಿಕರು, ವ್ಯಾಪಾರಿಗಳು, ಕುಲಕಸುಬುಗಳನ್ನೇ ನೆಚ್ಚಿಕೊಂಡವರಿಗೆ ಲಾಕ್ಡೌನ್ ಭಾರೀ ಹೊಡೆತ ನೀಡುವುದರಿಂದ ಸರಕಾರ ಲಾಕ್ಡೌನ್ ಮೊರೆ ಹೋಗಿಲ್ಲ. ಬದಲಿಗೆ ರಾತ್ರಿ ಕರ್ಫ್ಯೂ ಅವಧಿ ಎರಡು ಗಂಟೆ ವಿಸ್ತರಣೆ ಜತೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವುದು ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಸಾಧುವೆನಿಸಿದೆ.
ಕೊರೊನಾ ವರ್ಷದಿಂದ ಕಾಡುತ್ತಿದ್ದರೂ ಅನಗತ್ಯ ಓಡಾಟ, ದೊಡ್ಡ ಪ್ರಮಾಣದಲ್ಲಿ ಗುಂಪುಗೂಡುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ತಜ್ಞರ ಸಲಹಾ ಸಮಿತಿಯ ಆಕ್ಷೇಪ. ಇನ್ನೊಂದೆಡೆ ರೋಗ ಲಕ್ಷಣ, ಅಸ್ವಸ್ಥತೆಯಿದ್ದರೂ ಪರೀಕ್ಷೆಗೆ ಒಳಗಾಗದೆ ಸೋಂಕು ಉಲ್ಬಣಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳದಿಂದ ಆಮ್ಲಜನಕ, ವೆಂಟಿಲೇಟರ್ ಸೌಲಭ್ಯ, ಐಸಿಯು ಹಾಸಿಗೆಗಳಿಗೆ ಒಮ್ಮೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಚಿಕಿತ್ಸಾ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂಬುದನ್ನು ಅರಿತಿರುವ ಸರಕಾರ ಅನಗತ್ಯ ಸಂಚಾರ, ಜನಸಂದಣಿಯನ್ನು ತಪ್ಪಿಸಲು ಇನ್ನಷ್ಟು ಬಿಗಿ ಕ್ರಮಗಳನ್ನು ಮೇ 4ರ ವರೆಗೆ ಜಾರಿಗೊಳಿಸಿರುವುದರಿಂದ ತುರ್ತು ಸಂಚಾರ ಹೊರತುಪಡಿಸಿ ಉಳಿದ ಪ್ರಯಾಣಕ್ಕೆ ಕಡಿವಾಣ ಬೀಳಬಹುದು. ಸೋಂಕು ಹರಡುವಿಕೆಯ ವೇಗ ತಗ್ಗಿಸಲು ಹಂತ ಹಂತವಾಗಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿರುವ ಸರಕಾರ ಸೋಂಕಿತರಿಗೆ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ, ಸುಶ್ರೂಷೆ ಸಿಗುವ ವ್ಯವಸ್ಥೆಯನ್ನು ಆದ್ಯತೆ ಮೇರೆಗೆ ಕಲ್ಪಿಸಬೇಕಿದೆ.
ಈ ನಿಟ್ಟಿನಲ್ಲಿ ಕೈಗಾರಿಕ ಬಳಕೆ ಉದ್ದೇಶದ ಆಮ್ಲಜನಕವನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸಲು ಸರಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಹಾಗೆಯೇ ರಾಜ್ಯದಿಂದ ಅನ್ಯರಾಜ್ಯಗಳಿಗೆ ಪೂರೈಕೆಯಾಗುವ ಆಮ್ಲಜನಕ ಪ್ರಮಾಣವನ್ನು ಹಂತ ಹಂತವಾಗಿ ಕಡಿತಗೊಳಿಸಿ ತಾತ್ಕಾಲಿಕವಾಗಿ ಆರೋಗ್ಯ ಸೇವೆಗೆ ಬಳಸುವಂತಾದರೆ ಅಗತ್ಯವಿದ್ದವರಿಗೆ ಸಮರ್ಪಕವಾಗಿ ಪೂರೈಸಲು ನೆರವಾಗಬಹುದು. ಕೋವಿಡ್ ಸೋಂಕಿತರ ಪೈಕಿ ಉಸಿರಾಟದ ತೊಂದರೆ ಸೇರಿದಂತೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವ ಅನಿವಾರ್ಯತೆಯಿದ್ದವರಿಗೂ ಯಾವುದೇ ಕಾರಣಕ್ಕೂ ಚಿಕಿತ್ಸೆಯಲ್ಲಿ ವ್ಯತ್ಯಯವಾಗದಂತೆ ಸರಕಾರ ಕ್ರಮ ವಹಿಸಬೇಕು.
ಸೋಂಕು ನಿಯಂತ್ರಣ ಹಾಗೂ ಸೋಂಕಿತರ ನಿರ್ವಹಣೆ ಸರಕಾರದ ಜವಾಬ್ದಾರಿ ಎಂದುಕೊಳ್ಳದೆ ಸಹಕರಿಸುವುದು ಸಮುದಾಯದ ಹೊಣೆಯೂ ಹೌದು. ಮೊದಲು ನಾವು ಸುರಕ್ಷಿತವಾಗಿದ್ದು, ಇನ್ನೊಬ್ಬರೂ ಸುರಕ್ಷಿತವಾಗಿರಲು ಸಹಕರಿಸಿದರೆ ಸಮುದಾಯಕ್ಕೆ ಹರಡಿರುವ ಸೋಂಕನ್ನು ಶೀಘ್ರವೇ ತಹಬದಿಗೆ ತರಲು ಸಾಧ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ