ನ್ಯಾಯಾಲಯಗಳಲ್ಲಿ ಕನ್ನಡದ ಸಮಗ್ರ ಅನುಷ್ಠಾನ ಅಗತ್ಯ: ಬಿಎಸ್ವೈ
Team Udayavani, Jan 4, 2020, 6:52 PM IST
ಬೆಂಗಳೂರು: ಅಧೀನ ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಎಷ್ಟು ಮುಖ್ಯವೋ ಹೈಕೋರ್ಟ್ನಲ್ಲಿಯೂ ಕನ್ನಡದ ಸಮಗ್ರ ಅನುಷ್ಠಾನ ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರುಗಳಿಗೆ 2017 18 ಮತ್ತು 18 19ನೇ ಸಾಲಿನ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ, ನ್ಯಾಯದಾನ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಜನಸಾಮಾನ್ಯ ತಿಳಿದುಕೊಳ್ಳಲು ಸುಲಭವಾಗುವುದಿಲ್ಲ. ಜನ ಸಾಮಾನ್ಯರು ಆಡುವ ಭಾಷೆಯಾದ ಕನ್ನಡದಲ್ಲೇ ತೀರ್ಪು ನೀಡಿದರೆ ಜನರು ನ್ಯಾಯದಾನವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರು ಕನ್ನಡ ಕಲಿಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಅಸ್ಮಿತೆಯನ್ನು ಕಾಪಾಡುವ ಸಾರ್ಥಕ ಕೆಲಸ ಮಾಡುತ್ತಾ ಬಂದಿದೆ. ಆಡಳಿತದಲ್ಲಿ ಕನ್ನಡ ಭಾಷೆ ತರುವ ಉದ್ದೇಶದಿಂದ ಆಡಳಿತ ಸುಧಾರಣೆ, ರಚನಾತ್ಮಕ ಸ್ವರೂಪ ನೀಡುವ ದಿಕ್ಕಿನತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕನ್ನಡ ಭಾಷೆಯ ಅಭ್ಯುದಯ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಆಡಳಿತದಲ್ಲಿ ಸುಧಾರಣೆ, ಸ್ಥಳೀಯರಿಗೆ ಉದ್ಯೋಗ ಅವಕಾಶ, ಗಡಿಭಾಗದ ಕನ್ನಡಿಗರ ಸುಧಾರಣೆ, ನ್ಯಾಯಾಂಗದಲ್ಲಿ ಕನ್ನಡ, ಹೊರನಾಡ ಕನ್ನಡಿಗರ ಸಮಾವೇಶ ಸೇರಿದಂತೆ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಕನ್ನಡವನ್ನು ಜನರ ಜೀವನದಲ್ಲಿ ಹಾಸುಹೊಕ್ಕಾಗಿಸಲು ಪ್ರಾಧಿಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ನ್ಯಾಯಾಂಗ ಕ್ಷೇತ್ರದ ಎಲ್ಲ ವಲಯಗಳಲ್ಲಿ ಕನ್ನಡದ ಬಳಕೆ ಮಾಡುತ್ತಿರುವ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಹೈಕೋರ್ಟ್ನ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ, ಕನ್ನಡದಲ್ಲಿಯೇ ತೀರ್ಪು ನೀಡಲು ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಜಿಲ್ಲಾ, ಸತ್ರ, ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ಶೀಘ್ರಲಿಪಿಕಾರರು ಹಾಗೂ ಬೆರಳಚ್ಚುಗಾರರ ಕೊರತೆ ಇದೆ. ಬಹಳ ಸಂದರ್ಭದಲ್ಲಿ ಕನ್ನಡದಲ್ಲಿಯೇ ತೀರ್ಪು ನೀಡಿದರೂ, ಅದನ್ನು ಬರೆದುಕೊಳ್ಳಲು ಶೀಘ್ರಲಿಪಿಗಾರರಿಲ್ಲ. ಶೀಘ್ರಲಿಪಿ ತರಬೇತಿ ಕೇಂದ್ರಗಳು ಮುಚ್ಚಿರುವುದರಿಂದ ಹುದ್ದೆಗಳ ಭರ್ತಿಗೆ ನ್ಯಾಯಾಲಯ ಅಧಿಸೂಚನೆ ಹೊರಡಿಸಿದರೂ, ಅರ್ಜಿಗಳು ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಶೀಘ್ರ ಲಿಪಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸುಪ್ರೀಂಕೋರ್ಟ್ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಂದು ಒಪ್ಪಿಕೊಂಡಿರುವುದರಿಂದ ಕೆಲವು ಸಂದರ್ಭದಲ್ಲಿ ಇಂಗ್ಲಿಷ್ನಲ್ಲಿಯೇ ತೀರ್ಪು ನೀಡುವುದು ಅನಿವಾರ್ಯವಾಗಿದೆ. ಎಷ್ಟೋ ಬಾರಿ ನಾವು ನೀಡಿದ ತೀರ್ಪುಗಳು ಕಕ್ಷಿದಾರರಿಗೂ ತಿಳಿಯುವುದಿಲ್ಲ. ಅದನ್ನು ವಕೀಲರು ಅರ್ಥೈಸಿಕೊಂಡು ವಿವರಿಸಲು ಸಾಕಷ್ಟು ಸಮಯಬೇಕು. ಅರ್ಥವಾಗುವ ಭಾಷೆಯಲ್ಲಿ ತೀರ್ಪು ನೀಡಿದರೆ ಇಂತಹ ತಾಪತ್ರಯ ಉಂಟಾಗುವುದಿಲ್ಲ ಎಂದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರಿಗಿಂತ ಅನ್ಯ ರಾಜ್ಯದವರೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಕನ್ನಡದಲ್ಲಿ ವಿವರಿಸಿದೇ ಆಂಗ್ಲ ಭಾಷೆಯಲ್ಲಿ ತಿಳಿಸುತ್ತಿದ್ದು, ಸಾಲ ಸೇರಿದಂತೆ ಹಲವಾರು ಕಾರ್ಯಗಳಿಗೆ ಬೇರೆಯವರನ್ನು ಅವಲಂಬಿಸಬೇಕಾಗಿದೆ. ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ಆದ್ಯತೆ ಎಂಬ ನಿಯಮ ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಸಚಿವ ಸಿ.ಟಿ.ರವಿ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಯಾವ ಕ್ಷೇತ್ರಗಳಲ್ಲಿಯೂ ಸ್ವಂತಿಕೆ ಇಲ್ಲದಂತಾಗಿದೆ. ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಇಂದು ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಚಾರವೇ ಆದರೂ, ನಮ್ಮದೇ ನಾಡಿನಲ್ಲಿ ಮಾತೃಭಾಷೆಯಲ್ಲಿ ತೀರ್ಪು ನೀಡಿದವರರಿಗೆ ಪ್ರಶಸ್ತಿ ನೀಡಬೇಕಾಗಿರುವುದು ದುರ್ದೈವದ ಸಂಗತಿ. ಮುಂದೊಂದು ದಿನ ಮನೆಯಲ್ಲಿ ಅಮ್ಮ ಎಂದು ಕರೆಯುವ ಮಕ್ಕಳನ್ನೂ ಸನ್ಮಾನಿಸಬೇಕಾದ ದಿನಗಳು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಕನ್ನಡದಲ್ಲಿ ತೀರ್ಪು ನೀಡಿದ 72 ಮಂದಿ ನ್ಯಾಯಾಧೀಶರು, 10 ಮಂದಿ ಸರ್ಕಾರಿ ಅಭಿಯೋಜಕರು, 20 ಮಂದಿ ವಕೀಲರಿಗೆ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಒಳಗೊಂಡಿದೆ.ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡದಲ್ಲಿಯೇ ತೀರ್ಪನ್ನು ಪ್ರಕಟಿಸಿದರೆ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನ್ಯಾಯ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ತರುವ ಮೂಲಕ ಜನರಲ್ಲಿ ನ್ಯಾಯಾಂಗದ ಬಗೆಗೆ ವಿಶ್ವಾಸ ಮೂಡುತ್ತದೆ.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.
ಪ್ರಾಥಮಿಕ ಶಿಕ್ಷಣ ಭಾಷಾ ನೀತಿ ಪೋಷಕರ ವಿವೇಚನೆಗೆ ಬಿಟ್ಟ ಆಯ್ಕೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರು ಪರಿಶೀಲನೆಗೆ ಅರ್ಜಿ ಹಾಕಬೇಕಿದೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸಲಿದೆ. ಸುಪ್ರೀಂಕೋರ್ಟ್ನ ಈ ತೀರ್ಪು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಭವಿಷ್ಯದಲ್ಲಿ ಮಾರಕವಾಗಲಿದೆ.
– ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ