ನೋ ರಿಲೀಫ್; ಸೆ.13ರವರೆಗೆ ಡಿಕೆ ಶಿವಕುಮಾರ್ ಇ.ಡಿ. ಕಸ್ಟಡಿಗೆ
Team Udayavani, Sep 4, 2019, 7:05 PM IST
ಬೆಂಗಳೂರು: ಅಕ್ರಮ ಹಣ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯ ವಾದ, ಪ್ರತಿವಾದ ಆಲಿಸಿದ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರು ಡಿಕೆಶಿಯನ್ನು ಸೆ.13ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿ ತೀರ್ಪು ಬುಧವಾರ ಸಂಜೆ ತೀರ್ಪು ಪ್ರಕಟಿಸಿದ್ದಾರೆ.
ಇದರೊಂದಿಗೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಸೆ.13ರಕ್ಕೆ ನಡೆಯಲಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಕುಟುಂಬದ ಸದಸ್ಯರು ಪ್ರತಿದಿನ ಡಿಕೆಶಿ ಭೇಟಿ ಮಾಡಲು ಕೋರ್ಟ್ ಅನುಮತಿ ನೀಡಿದೆ.
ಬುಧವಾರ ಸಂಜೆ ದೆಹಲಿ ರೋಸ್ ಅವೆನ್ಯೂ ವಿಶೇಷ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಡಿಕೆಶಿ ಅವರನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಇ.ಡಿ. ಪರ ವಕೀಲರಾದ ನಟರಾಜನ್ ಅವರು ಮನವಿ ಮಾಡಿಕೊಂಡಿದ್ದರು.
ಫ್ಲ್ಯಾಟ್ ನಲ್ಲಿ ಸಿಕ್ಕ 8 ಕೋಟಿ ಹಣದ ಬಗ್ಗೆ ವಿಚಾರಣೆ ವೇಳೆ ಸರಿಯಾದ ಉತ್ತರ ಕೊಟ್ಟಿಲ್ಲ. ಹೀಗಾಗಿ ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಇಡಿ ಕೋರ್ಟ್ ಗೆ ಮನವರಿಕೆ ಮಾಡಿತ್ತು.
ಇವರ ಮೇಲೆ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಕೆಲವೇ ವರ್ಷಗಳಲ್ಲಿ ಡಿಕೆಶಿ ಕುಟುಂಬದ ಸಂಪತ್ತು ಅಗಾಧ ಏರಿಕೆ ಕಂಡಿತ್ತು. ಹೀಗಾಗಿ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಇಡಿ ವಾದ ಮಂಡಿಸಿತ್ತು. ಪಿಎಂಎಲ್ ಎ ಕಾಯ್ದೆಯಡಿ ಇವರನ್ನು ಶಿಕ್ಷಿಸಬಹುದಾದ ದಾಖಲೆ ಲಭ್ಯವಿದೆ.
ಈಗ ಒಂದೇ ಒಂದು ಕ್ಷಣದ ವಿಚಾರಣೆ ಅಗತ್ಯವಿಲ್ಲ: ಸಿಂಘ್ವಿ
ರೆಡಿಮೇಡ್ ಅರ್ಜಿಗೆ ಡಿಕೆಶಿ 30 ಸೆಕೆಂಡ್ ಗಳಲ್ಲಿ ಸಹಿ ಹಾಕಿದ್ದಾರೆ. ಇಡಿಯವರು ನಾಲ್ಕು ದಿನ ವಿಚಾರಣೆ ನಡೆಸಿದ್ದಾರೆ. ಈಗ ಒಂದೇ ಒಂದು ಕ್ಷಣದ ವಿಚಾರಣೆ ಅಗತ್ಯವಿಲ್ಲ ಎಂದು ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿದ್ದರು. ತನಿಖೆಗೆ ಖುದ್ದು ಅವರೇ ಹಾಜರಾಗಿದ್ದಾರೆ. ಕಳೆದ 4 ದಿನಗಳಲ್ಲಿ 33ಗಂಟೆ ವಿಚಾರಣೆ ನಡೆದಿದೆ.
ಆರೋಪಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದಲ್ಲಿ ಸಹಿ ಹಾಕಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ. ಇ.ಡಿಯಿಂದ ಆರೋಪಿಗೆ ಸಮನ್ಸ್ ನೀಡಲಾಗಿದೆ ಎಂದು ಇ.ಡಿ.ಪರ ವಕೀಲರಾದ ಕೆಎಂ ನಟರಾಜ್ ಮತ್ತೆ ವಾದ ಮಂಡಿಸಿ, ಜಾಮೀನು ನೀಡಬಾರದು ಎಂದು ವಿನಂತಿಸಿಕೊಂಡಿದ್ದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದ್ದರು. ಬಳಿಕ ಕೋರ್ಟ್ ಹೊರಗೆ ಡಿಕೆ ಶಿವಕುಮಾರ್ ಹಾಗೂ ಸಿಂಘ್ವಿ ಚರ್ಚೆ ನಡೆಸಿದರು. ಬಳಿಕ ಇ.ಡಿ. ಅಧಿಕಾರಿಗಳ ಮನವಿ ಮೇರೆಗೆ ಡಿಕೆಶಿಯನ್ನು ಸೆ.13ರವರೆಗೆ ಇ.ಡಿ ವಶಕ್ಕೊಪ್ಪಿಸಿ ತೀರ್ಪು ನೀಡಿದರು.