ಎಲ್ಲರಿಗೂ ಲಸಿಕೆ ಕೊಡಲು ಇದೇ ಉತ್ತಮ ಸಮಯ
Team Udayavani, Apr 16, 2021, 6:10 AM IST
ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದ ಮೇಲೆ ಕೇಂದ್ರ ಸರಕಾರ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ನಿರ್ಧಾರ ತೆಗೆದುಕೊಂಡಿದೆ. ಸದ್ಯ ಲಸಿಕೆಯ ಕೊರತೆ ನಡುವೆಯೂ ಈ ವಯೋಮಾನದ ಮೇಲಿನವರಿಗೆ ಲಸಿಕೆಯನ್ನೂ ನೀಡಲಾಗುತ್ತಿದೆ. ಇದರ ಮಧ್ಯೆಯೇ ದೇಶಾದ್ಯಂತ ಕೊರೊನಾ ಕೇಸುಗಳ ಸಂಖ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.
ಗುರುವಾರ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಕೇಸುಗಳು ದೃಢಪಟ್ಟಿವೆ. ಕೊರೊನಾ ಆರಂಭವಾದ ಕಾಲದಿಂದ ಹಿಡಿದು ಇದೇ ಮೊದಲ ಬಾರಿಗೆ ಈ ಪ್ರಮಾಣದ ಕೇಸುಗಳು ಕಾಣಿಸಿಕೊಂಡಿವೆ. ವಿಚಿತ್ರವೆಂದರೆ, ಕೊರೊನಾ ಮೊದಲ ಅಲೆ ವೇಳೆ 97 ಸಾವಿರ ಕೇಸುಗಳೇ ಅತ್ಯಧಿಕ ಎನಿಸಿದ್ದವು. ಆದರೆ ಈ ಬಾರಿ 2 ಲಕ್ಷ ಮೀರಿರುವುದು ತೀರಾ ಆತಂಕಕಾರಿ. ಮೊದಲ ಬಾರಿಗಿಂತಲೂ ಈ ಬಾರಿಯ ವ್ಯತ್ಯಾಸವೆಂದರೆ, ಕೊರೊನಾಗೆ ಹೆಚ್ಚಾಗಿ ಯುವಕರೇ ಸಿಲುಕುತ್ತಿರುವುದು. ಅಂದರೆ ಹಿಂದೆ ವಯಸ್ಸಾದವರಲ್ಲಿ ಮತ್ತು ಇತರ ರೋಗ ಕಾಡುತ್ತಿದ್ದವರಲ್ಲಿ ಹೆಚ್ಚಾಗಿ ಕಾಣಿಸಿತ್ತು. ಆದರೆ ಈ ಬಾರಿ ಯುವಕರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ತೀರಾ ಕಳವಳಕಾರಿಯಾಗಿದೆ.
ಇದನ್ನು ಮನಗಂಡೇ ಆರೋಗ್ಯ ತಜ್ಞರು ಸೇರಿದಂತೆ ರಾಜ್ಯಗಳೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಒತ್ತಾಯ ಆರಂಭಿಸಿ ಇದರಲ್ಲಿ ಯಶಸ್ವಿಯಾಗಿದ್ದವು. ಈಗ ಮಹಾರಾಷ್ಟ್ರವೂ ಸೇರಿದಂತೆ ನಾನಾ ರಾಜ್ಯ ಸರಕಾರಗಳು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಅಗ್ರಹಿಸುತ್ತಿವೆ. ಇದಕ್ಕೆ ಕಾರಣವೂ ಇದೆ. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಈಗ ಕೊರೊನಾ ಹೆಚ್ಚಾಗಿರುವ ರಾಜ್ಯಗಳಲ್ಲಿ ಯುವಕರಲ್ಲೇ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಇವರಿಗೆ ಲಸಿಕೆ ಕೊಟ್ಟಲ್ಲಿ ಕೊರೊನಾ ಹರಡುವುದನ್ನು ತಪ್ಪಿಸಬಹುದು ಎಂಬ ಉದ್ದೇಶ ಈ ರಾಜ್ಯ ಸರಕಾರಗಳದ್ದು.
ಇದರಕ್ಕೆ ಪೂರಕವಾಗಿಯೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು, 45 ವರ್ಷ ಕೆಳಗಿನವರಿಗೂ ಲಸಿಕೆ ನೀಡುವ ಸಂಬಂಧ ಕೇಂದ್ರ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನವಾಗಲಿದೆ ಎಂದು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಸದಾನಂದಗೌಡರ ಈ ಮಾತು ಸ್ವಾಗತಾರ್ಹ. ಬೇಗನೇ ಈ ಬಗ್ಗೆ ನಿರ್ಧಾರ ತೆಗೆದುಕೊಂಡು 18 ವರ್ಷ ಮೇಲಿನ ಎಲ್ಲರಿಗೂ ಲಸಿಕೆ ಕೊಟ್ಟಲ್ಲಿ ಕೊರೊನಾ ಹತೋಟಿಗೆ ತರಬಹುದು. ಎಲ್ಲರಿಗೂ ಲಸಿಕೆ ಕೊಡಿ ಎಂಬ ಒತ್ತಾಯದ ನಡುವೆಯೇ, ಕೆಲವು ರಾಜ್ಯಗಳಲ್ಲಿ ಲಸಿಕೆಯ ಅಭಾವವೂ ಕಾಣಿಸಿಕೊಂಡಿದೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಕಿತ್ತಾಟವೂ ನಡೆದಿದೆ. ರಾಜ್ಯಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಕೊರತೆ ಕಾಣಿಸಿಕೊಂಡಿದೆ ಎಂಬುದು ಕೇಂದ್ರ ಸರಕಾರದ ಹೇಳಿಕೆ. ಸದ್ಯದ ಪರಿಸ್ಥಿತಿಯಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಬೈದುಕೊಂಡು ಕುಳಿತುಕೊಳ್ಳುವುದು ಬೇಡ. ಪರಸ್ಪರ ಮಾತನಾಡಿಕೊಂಡು, ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.
ಜತೆಗೆ ವಿದೇಶಿ ಲಸಿಕೆಗಳಿಗೆ ಒಪ್ಪಿಗೆ ಕೊಡುವ ಸಂಬಂಧವೂ ಕೇಂದ್ರ ಸರಕಾರ ತ್ವರಿತಗತಿಯ ಹೆಜ್ಜೆ ಇಡುತ್ತಿದೆ. ಇದೂ ಉತ್ತಮ ನಿರ್ಧಾರವೇ ಆಗಿದ್ದು, ಬೇಗನೇ ವಿದೇಶಿ ಲಸಿಕೆಗಳನ್ನು ತರಿಸಿಕೊಳ್ಳಲಿ ಅಥವಾ ಇಲ್ಲೇ ಉತ್ಪಾದಿಸಲಿ. ಈ ಮೂಲಕವಾದರೂ ಹೆಚ್ಚು ಜನರಿಗೆ ಲಸಿಕೆ ಸಿಗುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ