ಚಾರ್ಮಾಡಿ :ಕಾರಿನಲ್ಲಿದ್ದವರನ್ನು ಬೆದರಿಸಿ ದರೋಡೆ ಪ್ರಕರಣ; ಆರೋಪಿಗಳ ಬಂಧನ
Team Udayavani, May 6, 2022, 6:23 PM IST
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾಗಿ ನಿಂತಿದ್ದ ಕಾರಿನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಬೆದರಿಸಿ ನಗದು, ಉಂಗುರ ಹಾಗೂ ಮೊಬೈಲ್ ಅನ್ನು ಕಸಿದ ಘಟನೆ ಮೇ 4ರ ತಡರಾತ್ರಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ದೇವನಹಳ್ಳಿಯಿಂದ ಕೊಟ್ಟಿಗೆಹಾರ ಮೂಲಕ ಚಾರ್ಮಾಡಿ ಮಾರ್ಗವಾಗಿ ಸಾಗುತ್ತಿದ್ದ ಕಾರು ರಾತ್ರಿ 12.30ರ ಸುಮಾರಿಗೆ ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡು ಆ್ಯಂಬುಲೆನ್ಸ್ಗೆ ಕರೆ ಮಾಡಲು ನೆಟ್ವರ್ಕ್ ಇಲ್ಲದ ಕಾರಣ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ದ.ಕ. ಜಿಲ್ಲೆ ಕಡೆಯಿಂದ ಬೈಕ್ ಹಾಗೂ ಸ್ಕೂಟರ್ನಲ್ಲಿ ಬಂದ ಮೂವರು ಯುವಕರ ತಂಡ ಕಾರನ್ನು ಸುತ್ತುವರಿದು ಸೊತ್ತುಗಳನ್ನು ದೋಚಿ ಬೆದರಿಕೆ ಒಡ್ಡಿ ಪರಾರಿಯಾಗಿತ್ತು.
ಘಟನೆ ಕುರಿತು ಬೆಂಗಳೂರಿನ ದೇವನಹಳ್ಳಿಯ ಮಧುಸೂದನ್ ಅವರು ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೃತ್ಯ ಎಸಗಿದ ದ.ಕ. ಮೂಲದ ಬಂಟ್ವಾಳ ತಾಲೂಕಿನ ಮಾಣಿ ಸೂರಿ ಕುಮೇರಿನ ಹಮೀದ್ ಅವರ ಪುತ್ರ ಮಹಮ್ಮದ್ ರಮೀಜ್ ಯಾನೆ ರಮ್ಮಿ(19), ಪೆರ್ನೆ ಸತ್ತಿಕಲ್ ನಿವಾಸಿ ಪುತ್ತು ಬ್ಯಾರಿ ಅವರ ಪುತ್ರ ರಜೀನ್ ಯಾನೆ ರಜ್ಜು (20) ಹಾಗೂ ಕೆದಿಲ ಗಡಿಯಾರದ ಅಬ್ದುಲ್ ರೆಹಮಾನ್ ಅವರ ಪುತ್ರ ಮಹಮ್ಮದ್ ಸವಾದ್ ಯಾನೆ ಸವಾದ್ ಕುಂಞ (18) ಎಂಬ ಮೂವರು ಆರೋಪಿಗಳನ್ನು ಮೂಡಿಗೆರೆ ಹಾಗೂ ಬಣಕಲ್ ಪೊಲೀಸರ ತಂಡ ಬಂಧಿಸಿದ್ದು, ಅವರಿಂದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.