ನಮ್ಮಿಂದಲೇ ಬೆಳೆದ ಕೆಲವು ಮುಸ್ಲಿಂ ನಾಯಕರು ನಮ್ಮನ್ನೇ ವಿಲನ್ ಮಾಡಿದರು: ದೇವೆಗೌಡ
Team Udayavani, Nov 1, 2020, 8:56 PM IST
ಶಿರಾ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಮತದಾರರ ಮೇಲಿದೆ. ನಮ್ಮ ಎದುರಾಳಿಗಳು ಅಪಪ್ರಚಾರದಲ್ಲಿ ಸಾಕಷ್ಟು ಮುಂದಿದ್ದಾರೆ. ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದರು.
ಇಲ್ಲಿನ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ಅನೇಕ ಮುಸ್ಲಿಂ ಮುಖಂಡರು ಈ ಬಾರಿ ಪ್ರಚಾರ ನಡೆಸುತ್ತಿದ್ದು, ಮುಸ್ಲಿಂ ಬಾಂಧವರು ಯಾವುದೇ ಅಪಪ್ರಚಾರಕ್ಕೆ, ಆಮಿಷಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ನಮ್ಮಿಂದಲೇ ಬೆಳೆದ ಕೆಲವು ಮುಸ್ಲಿಂ ನಾಯಕರು ನಮ್ಮನ್ನೇ ವಿಲನ್ ಮಾಡಿದರು. ಅಮ್ಮಾಜಮ್ಮನಿಗೆ ಅನುಭವ ಇಲ್ಲ ಎಂದು ಯೋಚಿಸುವ ಅಗತ್ಯವಿಲ್ಲ. ಕ್ಷೇತ್ರವನ್ನು ವೈಯಕ್ತಿಕವಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸಿದ್ದು, ಖುದ್ದು ನಾನೇ ನಿಂತು ಅಮ್ಮಾಜಮ್ಮನಿಗೆ ಮಾರ್ಗದರ್ಶನ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ಭರವಸೆ ನೀಡಿದರು.
ಇದನ್ನೂ ಓದಿ:ಮಣಿಪಾಲದ ಅಪಾರ್ಟ್ಮೆಂಟ್ ಮೇಲೆ ದಾಳಿ 3.89 ಲ.ರೂ.ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ವಶಕ್ಕೆ
ಸೆರಗೊಡ್ಡಿದ ಅಮ್ಮಾಜಮ್ಮ
ಅಭ್ಯರ್ಥಿ ಅಮ್ಮಾಜಮ್ಮ ಮಾತನಾಡಿ, ಯಜಮಾನರನ್ನು ಕಳೆದುಕೊಂಡ ಸಂಕಟದಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿ ಬಂದಿದೆ. ನನಗೆ ರಾಜಕೀಯ ಗೊತ್ತಿಲ್ಲದೆ ಇದ್ದರೂ ರೈತರ ಕಷ್ಟ ಅರಿವಿದೆ. ದಯವಿಟ್ಟು ನನಗೆ ಮತ ನೀಡಿ ಎಂದು ಸೆರಗೊಡ್ಡಿ ಬೇಡಿದರು.
ಕುಸಿದು ಬಿದ್ದ ಅಭ್ಯರ್ಥಿ
ಪ್ರಚಾರ ಸಭೆ ನಡೆಯುತ್ತಿದ್ದ ವೇಳೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕುಸಿದು ಬಿದ್ದ ಘಟನೆ ನಡೆದಿದೆ. ಸ್ಥಳದಲ್ಲಿದ್ದ ವೈದ್ಯರೊಬ್ಬರು ಪರಿಶೀಲನೆ ನಡೆಸಿ ಬಿಪಿ ಕಡಿಮೆಯಾಗಿರುವ ಬಗ್ಗೆ ಸುಳಿವು ನೀಡಿದ ನಂತರ ಅಮ್ಮಾಜಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಾರ್ಯಕರ್ತರು ವಿಚಲಿತರಾಗದಂತೆ ಕರೆ ನೀಡಿದ ಎಚ್. ಡಿ. ದೇವೇಗೌಡ ಅವರು ನಿತ್ರಾಣದಿಂದ ಹೀಗೆ ಆಗಿದೆ, ಯಾರೂ ಗಾಬರಿ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.