ಡಿಕೆ ಶಿವಕುಮಾರ್ ಆರೋಗ್ಯ ವರದಿ ಕೋರ್ಟ್ ಗೆ ಸಲ್ಲಿಕೆ; ಬೇಲ್ ಅಥವಾ ಜೈಲಾ?
Team Udayavani, Sep 18, 2019, 2:13 PM IST
ನವದೆಹಲಿ:ಜಾರಿ ನಿರ್ದೇಶನಾಲಯದ ಸುಳಿಯಲ್ಲಿ ಸಿಲುಕಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ವಿಶೇಷ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದು, ಬುಧವಾರ ಡಿಕೆಶಿಯ ಜಾಮೀನು ಅರ್ಜಿ ವಿಚಾರಣೆ ನಡೆಯಲು ಕ್ಷಣಗಣನೆ ಆರಂಭಗೊಂಡಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಗೆ ಆರ್ ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏತನ್ಮಧ್ಯೆ ಡಿಕೆ ಶಿವಕುಮಾರ್ ಆರೋಗ್ಯದ ಕುರಿತ ವರದಿಯನ್ನು ತಿಹಾರ್ ಜೈಲಿನ ಅಧಿಕಾರಿಗೆ ಕೋರ್ಟ್ ಗೆ ಸಲ್ಲಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಇಂದು ಮಧ್ಯಾಹ್ನ 3.30ರಿಂದ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾರಿ ನಿರ್ದೇಶನಾಲಯದ ಪರವಾಗಿ ನಟರಾಜ್ ವಾದ ಮಂಡಿಸಲಿದ್ದು, ಡಿಕೆ ಶಿವಕುಮಾರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ಇಂದು ವಾದ, ಪ್ರತಿವಾದ ಆಲಿಸಿದ ಬಳಿಕ ವಿಶೇಷ ಕೋರ್ಟ್ ಇ.ಡಿ ಸುಳಿಯಲ್ಲಿ ಸಿಲುಕಿರುವ ಡಿಕೆ ಶಿವಕುಮಾರ್ ಗೆ ಜಾಮೀನು ಸಿಗುತ್ತದೋ ಅಥವಾ ಜೈಲು ಸೇರಲಿದ್ದಾರೆಯೇ ಎಂಬುದು ತೀರ್ಪು ಪ್ರಕಟವಾದ ಬಳಿಕ ತಿಳಿಯಲಿದೆ.