ನೆರ ಸಂತ್ರಸ್ತರ ಮಕ್ಕಳ ಹತ್ರ ಶೈಕ್ಷಣಿಕ ದಾಖಲೆ ಕೇಳಬೇಡಿ: ಸಚಿವ ಸುರೇಶ್ ಕುಮಾರ್
Team Udayavani, Sep 5, 2019, 4:11 PM IST
ಬೆಂಗಳೂರು: ಇತ್ತೀಚೆಗೆ ರಾಜ್ಯದ ಬಹುಭಾಗ ತತ್ತರಿಸುವಂತೆ ಮಾಡಿದ ಭಾರೀ ನೆರೆಗೆ ಮನೆ, ಬೆಳೆಗಳು ನಾಶವಾದಂತೆ ಶಾಲಾ ಮಕ್ಕಳ ಅಮೂಲ್ಯ ದಾಖಲೆಗಳು ಮತ್ತು ಪುಸ್ತಕಗಳೂ ಸಹ ಹಾನಿಗೀಡಾಗಿದ್ದ ಪ್ರಕರಣಗಳು ವರದಿಯಾಗಿತ್ತು.
ಇದಕ್ಕೆ ಪೂರಕವಾಗಿ ನೆರೆ ಸಂತ್ರಸ್ತರ ಮಕ್ಕಳ ಯಾವುದೇ ದಾಖಲಾತಿಗಳನ್ನು ಶಾಲೆಗಳಲ್ಲಿ ಕೇಳಬಾರದು ಎಂಬ ಸೂಚನೆಯನ್ನು ಸ್ವತಃ ಶಿಕ್ಷಣ ಸಚಿವರೇ ನೀಡಿದ್ದಾರೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರು ಈಗಾಗಲೇ ಆದೇಶ ಹೊರಡಿಸಿದ್ದಾರೆ ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಮಾತನಾಡುತ್ತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ಹಾನಿಗೊಳಗಾಗಿರುವ ಪಠ್ಯ ಪುಸ್ತಕಗಳ ಬದಲಿಗೆ ಎರಡನೇ ಪ್ರತಿ ಪಠ್ಯ ಪುಸ್ತಕವನ್ನು ಒದಗಿಸಲಾಗುವುದು ಎಂದು ಸುರೇಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಳೆ ಮತ್ತು ಪ್ರವಾಹದ ಕಾರಣದಿಂದಾಗಿ ಹಲವು ಶಾಲಾ ಕಟ್ಟಡಗಳೂ ಸಹ ಹಾನಿಗೊಳಗಾಗಿದ್ದು ಅವುಗಳ ಸಮೀಕ್ಷೆಯನ್ನು ಮಾಡಲಾಗುತ್ತಿದೆ.
ಶಿಕ್ಷಕರ ಸಂಘ ನೆರೆ ಪರಿಹಾರ ನಿಧಿಗೆಂದು ನೀಡಿರುವ 30 ಕೋಟಿ ರೂಪಾಯಿಗಳ ನೆರವನ್ನು ಶಿಕ್ಷಣ ಇಲಾಖೆಗೆ ಬಳಸಿಕೊಳ್ಳಲು ಮನವಿ ಮಾಡಿಕೊಂಡಿದ್ದೇನೆ ಎಂದೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.