ಕುಡಿಯುವ ನೀರಿನ ಘಟಕದಲ್ಲಿ ವಿದ್ಯುತ್ ಅವಘಡ ಯುವಕ ಸಾವು
Team Udayavani, Jun 6, 2020, 7:11 PM IST
ಗಂಗಾವತಿ: ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ಘಟಕದಲ್ಲಿ ವಿದ್ಯುತ್ ಅವಘಡ ಜರುಗಿ ಯುವಕನೊರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಸಾಣಾಪೂರ ಗ್ರಾಮದ ಎಡದಂಡೆ ಕಾಲುವೆಯ ಕೆರೆಯ ದಂಡೆ ಮೇಲೆ ನಡೆದಿದೆ.
ಅಂಜಿನಳ್ಳಿ ಮುದುಕಪ್ಪನ ಕ್ಯಾಂಪ್ ನಿವಾಸಿ ವಿರೇಶ (18) ಮೃತಪಟ್ಟ ಯುವಕನಾಗಿದ್ದಾನೆ. ಕಾಲೇಜು ರಜೆ ಇದ್ದುದ್ದರಿಂದ ಸಾಣಾಪೂರ ಹತ್ತಿರ ಇರುವ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆಯ ಘಟಕದ ಗೇಟ್ ನಿರ್ಮಿಸುವ ಕಾಮಗಾರಿ ಮಾಡುವಾಗ ಕೆರೆಯಿಂದ ಮರಳು ತರುವಾಗ ಕಬ್ಬಿಣದ ಸರಳಿಗೆ ವಿದ್ಯುತ್ ಸ್ಪರ್ಶವಾಗಿದೆ. ಮೃತ ಕೆಂಚಪ್ಪ ಕಬ್ಬಿಣದ ಸರಳು ಹಿಡಿದಾಗ ವಿದ್ಯುತ್ ತಗುಲಿ ಕೆಳಗೆ ಬಿದ್ದಿದ್ದಾನೆ. ಚಿಕಿತ್ಸೆಗಾಗಿ ಗಂಗಾವತಿ ತರುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.
ಆಕ್ರೋಶ: ಕುಡಿಯುವ ನೀರಿನ ಘಟಕದಲ್ಲಿ ವಿದ್ಯುತ್ ವೈರಗಳು ಹೊರಗೆ ಬಿದ್ದಿದ್ದು ಸರಿಪಡಿಸದೇ ಜಿ.ಪಂ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಮತ್ತು ಗೇಟ್ ನಿರ್ಮಾಣದ ಗುತ್ತಿಗೆ ಪಡೆದ ಕಾಂಟ್ರಕ್ಟರ್ ವಿರುದ್ದ ಕ್ರಮಕೈಗೊಳ್ಳುವಂತೆ ಮೃತನ ಕುಟುಂಬ ವರ್ಗದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪಿಎಸ್ಐ ಜೆ.ದೊಡ್ಡಪ್ಪ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.