“ಇದು ಮೋದಿ ವಿರೋಧಿ ಮನೋಭಾವದ ಪ್ರತೀಕ’; ಮುಂದುವರಿದ ಮಾಜಿಗಳ “ಬಹಿರಂಗ ಪತ್ರ’ ಸಮರ
108 ಮಾಜಿ ಅಧಿಕಾರಿಗಳ ಪತ್ರಕ್ಕೆ ಪ್ರತಿಯಾಗಿ ಹೊಸ ಬಹಿರಂಗ ಪತ್ರ ಪ್ರಕಟ
Team Udayavani, May 1, 2022, 8:30 AM IST
ಹೊಸದಿಲ್ಲಿ: ಬಿಜೆಪಿ ಆಡಳಿತವಿರುವ ಸರಕಾರಗಳಿಂದ ಆಗುತ್ತಿರುವ ದ್ವೇಷಪೂರಿತ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕೆಂದು 108 ನಿವೃತ್ತ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಬಹಿರಂಗ ಪತ್ರಕ್ಕೆ ಪ್ರತಿಯಾಗಿ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಧಿಕಾರಿಗಳು ಹಾಗೂ ಮಾಜಿ ಸೇನಾಧಿಕಾರಿಗಳು ಸೇರಿ 197 ಮಂದಿಯಿಂದ ಮತ್ತೊಂದು ಬಹಿರಂಗಪತ್ರ ಬಿಡುಗಡೆಯಾಗಿದೆ.
“ದೇಶದ ಕಾಳಜಿಯನ್ನು ಹೊಂದಿರುವ ನಾವು, 108 ಮಾಜಿ ಅಧಿಕಾರಿಗಳ ಬಹಿರಂಗ ಪತ್ರವನ್ನು ವಿರೋಧಿಸುತ್ತೇವೆ. ಆ ಪತ್ರದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ, ಮೋದಿ ವಿರೋಧಿ ಮನೋಭಾವ ಹೊಂದಿರುವ ರಾಜಕೀಯ ಸಿದ್ಧಾಂತಗಳ ಪ್ರತಿಪಾದನೆಯಷ್ಟೇ. ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿಗೆ ಸಿಗುತ್ತಿ ರುವ ಜನಮನ್ನಣೆಯನ್ನು ಸಹಿಸದೇ ಜನರ ಅಭಿಪ್ರಾಯವನ್ನು ಮಾರ್ಪಾಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ತಮ್ಮನ್ನು ತಾವು ಸಾಂವಿಧಾನಿಕ ನಡವಳಿಕೆ ಗುಂಪು (ಸಿಸಿಜಿ) ಎಂದು ಕರೆದುಕೊಂಡಿದ್ದ 108 ನಿವೃತ್ತ ಅಧಿಕಾರಿಗಳು ಎ. 26ರಂದು ಪ್ರಧಾನಿ ಮೋದಿಯವರಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ, ದ್ವೇಷಪೂರಿತ ರಾಜಕಾರಣದ ಬಗ್ಗೆ ಪ್ರಧಾನಿ ಮೌನ ಮುರಿಯಬೇಕು ಎಂದು ತಾಕೀತು ಮಾಡಿದ್ದರು.