ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಮಾರಾಟ ಜಾಲ ಬೆಳಕಿಗೆ
Team Udayavani, Nov 5, 2020, 11:25 AM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ.
ದೊಡ್ಡಬಳ್ಳಾಪುರ: ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ದೇವರಾಜು ಅವರು ದೂರು ದಾಖಲಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಉಪನೋಂದಣಾಧಿಕಾರಿಗಳು ನೀಡಿರುವ ದೂರಿನಲ್ಲಿ ದೇವನಹಳ್ಳಿ ತಾಲೂಕಿನ ಚಿಕ್ಕಜಾಲದ
ಕಾಡಿಗಾನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಬಚ್ಚಹಳ್ಳಿ,ಅರಳುಮಲ್ಲಿಗೆ ಕುಕ್ಕನಹಳ್ಳಿ ಗ್ರಾಮದ 7 ಎಕರೆ ಜಮೀನಿಗೆ ನಕಲಿ ಪತ್ರಗಳನ್ನು ಸೃಷ್ಟಿಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಭೂಮಿ ಖರೀದಿದಾರರಲ್ಲಿ ತಲ್ಲಣ: ಉಪನೋಂದಣಾಧಿಕಾರಿಗಳಿಂದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ತಾಲೂಕಿನಲ್ಲಿ ಜಮೀನು ಖರೀದಿಸಿರುವವರು ತಮ್ಮ ಜಮೀನಿನ ದಾಖಲೆಗಳ ನೈಜ್ಯತೆಯ ಬಗ್ಗೆ ಅನುಮಾನ ಪಡುವಂತಾಗಿದೆ.
ತಾಲೂಕು ಬೆಂಗಳೂರಿಗೆ ಸಮೀಪ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಬಹುತೇಕ ಜನ ಉದ್ಯಮಿಗಳು
ಸೇರಿದಂತೆ ವಿವಿಧ ವಲಯದಲ್ಲಿ ಹಣ ಉಳಿತಾಯ ಮಾಡಿರುವ ಮಂದಿ ಜಮೀನುಗಳನ್ನು ಖರೀದಿಸಿದ್ದಾರೆ. ಈಗಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಜಮೀನಿನ ದಾಖಲೆಗಳ ನೈಜ್ಯತೆ ಕುರಿತಂತೆ ಪರಿಶೀಲಿಸಿಕೊಳ್ಳಲು ತಾಲೂಕು ಕಚೇರಿಗೆ ಬರತೊ ಡಗಿದ್ದಾರೆ.
ತಾಲೂಕು ಕಚೇರಿಯಲ್ಲಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಶತಮಾನಗಳಷ್ಟು ಹಳೆಯ ವರ್ಷಗಳ ಎಲ್ಲಾ ರೀತಿಯ
ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಆನ್ಲೈನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಸ್ಕ್ಯಾನ್ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಈ ದಾಖಲೆಗಳು ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಿಲ್ಲ.
ಇದನ್ನೂ ಓದಿ: ಪೊಲೀಸ್ ದೌರ್ಜನ್ಯದಿಂದ ತಂದೆ ಸಾವು; ಇಲಾಖೆಯಲ್ಲಿ ಇದ್ದರೂ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ
ಸರ್ಕಾರದ ವಿಳಂಬ
ನೀತಿಯೇ ಭೂ ದಾಖಲೆಗಳಲ್ಲಿ ಅಕ್ರಮವಾಗಲು ಕಾರಣವಾಗಿದೆ. ಬೆಂಗಳೂರು ಸುತ್ತಮುತ್ತಲಿನ ತಾಲೂಕುಗಳಲ್ಲಿ ಭೂಮಿ ಬೆಲೆ
ಹೆಚ್ಚಾಗಿರುವ ಹಿನ್ನೆಯಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ. ಅಲ್ಲದೆ, ಸಾಮಾನ್ಯ ಜನ ಭೂ
ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿಗೆ ಹತ್ತಾರು ಬಾರಿ ಅಲೆದಾಡಿ ಹಣ ಖರ್ಚು ಮಾಡಿದರೂ ದೊರೆಯುವುದು
ಕಷ್ಟವಾಗಿದೆ. ಈಗಲಾದರೂ ಸರ್ಕಾರ ಸ್ಕ್ಯಾನ್ ಮಾಡಲಾಗುವ ಎಲ್ಲಾ ಭೂ ದಾಖಲೆಗಳು ಆನ್ಲೈನ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.