ಬೆಳೆ ಸಮೀಕ್ಷೆ ಉತ್ಸವಕ್ಕೆ ರೈತರಿಂದ ನಿರೀಕ್ಷೆಗೂ ಮೀರಿದ ಬೆಂಬಲ: ಬಿ.ಸಿ ಪಾಟೀಲ್
Team Udayavani, Nov 20, 2020, 7:21 PM IST
ಬೆಂಗಳೂರು: ಅನ್ನ ನೀಡುವ ರೈತ ಸಶಕ್ತನಾದರೆ ಮಾತ್ರವೇ ಸಮರ್ಥ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. “ಅನ್ನದಾತೋ ಸುಖೀಭವ” ಅನ್ನುವ ಮಾತು ಕೇವಲ ಮಾತಾಗಿ ಉಳಿಯಬಾರದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳು ನೇರವಾಗಿ ರೈತನಿಗೆ ಸಕಾಲದಲ್ಲಿ ತಲುಪಬೇಕು. ಆಗಲೇ ರೈತರಿಗೆ ಸರಿಯಾದ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ದೇಶದಲ್ಲೇ ಮೊದಲಬಾರಿಗೆ ರೈತರಿಗೆ ಸಹಕಾರಿಯಾಗಲೆಂದು ಬೆಳೆ ಸಮೀಕ್ಷೆ ಆ್ಯಪ್ ಮೂಲಕ, ರೈತನಿಗೆ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ಸ್ವಾತಂತ್ರ್ಯವನ್ನು ನೀಡಲಾಯಿತು. ನಮ್ಮ ಸರ್ಕಾರದ ವಿನೂತನ ಪ್ರಯತ್ನಕ್ಕೆ ರಾಜ್ಯಾದ್ಯಂತ ರೈತರಿಂದ ನಿರೀಕ್ಷೆಗೂ ಮೀರಿದ ಬೆಂಬಲ ದೊರೆಯುವುದರೊಂದಿಗೆ “ಬೆಳೆ ಸಮೀಕ್ಷೆ ಉತ್ಸವ” ಕಾರ್ಯಕ್ರಮ ಯಶ ಕಂಡಿದೆ.
ಮಾನ್ಯ ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಜಿ, ತಮ್ಮ ಪ್ರಶಂಸನೀಯ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಮೊಬೈಲ್ ಆ್ಯಪ್ ಮೂಲಕ ನಡೆಸಿದ ಬೆಳೆ ಸಮೀಕ್ಷೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆ ಅತ್ಯಂತ ಹೆಚ್ಚು ಸಹಕಾರಿಯಾಗಿದ್ದು, ಕರ್ನಾಟಕ ರಾಜ್ಯದ ಸಮಸ್ತ ರೈತ ಬಾಂಧವರ ಪರವಾಗಿ ಪ್ರಧಾನಿ ಅವರಿಗೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಇದನ್ನೂ ಓದಿ: ದೆಹಲಿಯಲ್ಲಿ ಬಂಧಿಸಲ್ಪಟ್ಟ ಇಬ್ಬರು ಜೈಶ್ ಉಗ್ರರು ಐದು ದಿನ ಪೊಲೀಸ್ ಕಸ್ಟಡಿಗೆ
ಈ ಸಂದರ್ಭದಲ್ಲಿ ನನ್ನ ಬೆನ್ನಿಗೆ ನಿಂತು ಸಹಕಾರ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ನನ್ನ ಕೃತಜ್ಞತೆಗಳು. “ಬೆಳೆ ಸಮೀಕ್ಷೆ ಉತ್ಸವ” ಕಾರ್ಯಕ್ಕೆ ಪ್ರಾರಂಭದಿಂದ ಕೊನೆಯವರೆಗೆ ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ ಕೃಷಿ ಇಲಾಖೆಯ ಅಧಿಕಾರಿಗಳು, ಸಹಕಾರ ನೀಡಿದ ತೋಟಗಾರಿಕೆ, ರೇಷ್ಮೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳು. ಅಲ್ಲದೇ, ಈ ವಿಶೇಷ ಪ್ರಯತ್ನಕ್ಕೆ ಬೆಂಬಲಿಸಿದ ಸರ್ಕಾರದ ಸರ್ವ ಆಡಳಿತ ವರ್ಗದವರಿಗೂ ನಾನು ಆಭಾರಿಯಾಗಿದ್ದೇನೆ.
ಮುಂಗಾರು ಬೆಳೆಗೆ ನಡೆಸಿದ ಬೆಳೆ ಸಮೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, ಹಿಂಗಾರು ಬೆಳೆಗೂ ನಡೆಸುವ ಉದ್ದೇಶವಿದ್ದು ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ನಮಗೆ ಇದೆ ಎಂದು ಈ ಮೂಲಕ ಮಾನ್ಯ ಕೇಂದ್ರ ಕೃಷಿ ಸಚಿವರಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಾಧಿಕಾರ ರಚನೆಯ ಮರಾಠಿ ಕೃತಜ್ಞತಾ ನಾಮಫಲಕಕ್ಕೆ ಮಸಿ ಬಳಿದ ಕನ್ನಡಪರ ಕಾರ್ಯಕರ್ತರು