ಉಡುಪಿ: ಗಾಂಧಿ ಗ್ರಾಮ ಪುರಸ್ಕಾರ ಪ್ರಕ್ರಿಯೆ ವಿಳಂಬ
Team Udayavani, Dec 30, 2022, 7:00 AM IST
ಉಡುಪಿ: ಗಾಂಧಿ ಗ್ರಾಮ ಪುರಸ್ಕಾರದ 2021-22ನೇ ಸಾಲಿನ ಪ್ರಕ್ರಿಯೆ ವಿಳಂಬವಾಗಿದ್ದು, ಹಲವು ತಿಂಗಳ ಬಳಿಕ ಇದೀಗ ಪುರಸ್ಕಾರಕ್ಕೆ ಅರ್ಹತೆ ಪಡೆಯಲು ಅತೀ ಹೆಚ್ಚು ಅಂಕ ಪಡೆದ ತಾಲೂಕುವಾರು ಗ್ರಾ.ಪಂ.ಗಳ ಪಟ್ಟಿ ಯನ್ನು ಅಂತಿಮಗೊಳಿಸಲು ಎಲ್ಲ ಜಿ.ಪಂ. ಸಿಇಒಗಳಿಗೆ ಸರಕಾರ ನಿರ್ದೇಶನ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನದಂಡಗಳ ಪ್ರಕಾರ ಅತೀ ಹೆಚ್ಚು ಅಂಕ ಪಡೆದ ತಾಲೂಕು ವ್ಯಾಪ್ತಿಯ ಮೂರು ಗ್ರಾಮ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಸಮಿತಿಯ ತಂಡ ಈ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ತಾಲೂಕಿಗೆ ಒಂದು ಗ್ರಾ. ಪಂ. ಅನ್ನು ಆಯ್ಕೆಗೊಳಿಸಿ ಸರಕಾರಕ್ಕೆ ವರದಿ ನೀಡಲಿದೆ.
ಯವ್ಯಾವ ಗ್ರಾ. ಪಂ, ಗಳು ?
ಉಡುಪಿ ಜಿಲ್ಲೆ: ಪಳ್ಳಿ, ಹನೇಹಳ್ಳಿ, 14ನೇ ಕಡೂರು, ನೀಲಾವರ, ಜಡ್ಕಲ್, ಹೇರೂರು, ಕಾಲೊ¤àಡು, ಬಿಜೂರು, ಹೆಬ್ರಿ, ಮಡಾಮಕ್ಕಿ, ಶಿವಪುರ, ನಡಾ³ಲು, ಶಿರ್ವ, ಬೆಳ್ಳೆ, ಪಡುಬಿದ್ರಿ, ಕಲ್ಯ, ಕಾಂತಾವರ, ಹೊಸಾಡು, ವಂಡ್ಸೆ, ತ್ರಾಸಿ, 80ನೇ ಬಡಗಬೆಟ್ಟು, ಮಣಿಪುರ, ಅಂಬಲಪಾಡಿ. ದ.ಕ. ಜಿಲ್ಲೆ: ಕಡೆಶಿವಾಲಯ, ಕೊಳ್ನಾಡು, ಇರ್ವತ್ತೂರು, ಉಜಿರೆ, ಮಡ್ಯಂತಾರು, ಅಲಂಕಾರು, ಕುಟ್ರಾಪಾಡಿ, ಬಿಳಿನೆಲೆ, ಬಾಳ, ಮೂಡುಶೆಡ್ಡೆ, ದರೆಗುಡ್ಡೆ, ಪಡುಪಣಂಬೂರು, ಕಿಲ್ಪಾಡಿ, ಅತಿಕಾರಿ ಬೆಟ್ಟು, ಒಳಮೊಗ್ರು, ಅರ್ಯಾಪು, ಬನ್ನೂರು, ಸಂಪಾಜೆ, ಮಂಡೆಕೋಲು, ಅರಂತೋಡು, ಮುನ್ನೂರು, ಪಜೀರು, ಸಜಿಪನಡು ಗ್ರಾಮ ಪಂಚಾಯತ್ ಗಳು ಅತ್ಯುತ್ತಮ ಅಂಕ ಪಡೆದುಕೊಂಡು ಪಟ್ಟಿಯಲ್ಲಿವೆ.
ವಿಳಂಬಕ್ಕೆ ಅಸಮಾಧಾನ
ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಸರಕಾರದ ವಿಳಂಬ ಧೋರಣೆ ಸರಿಯಲ್ಲ ಎಂದು ಬಹುತೇಕ ಗ್ರಾ.ಪಂ.ಗಳ ಜನಪ್ರತಿನಿಧಿ ಅಭಿಪ್ರಾಯಪಟ್ಟಿದ್ದಾರೆ. 2 ವರ್ಷ ಗಾಂಧಿ ಗ್ರಾಮ ಪುರಸ್ಕಾರದಿಂದ ಗ್ರಾ.ಪಂ.ಗಳು ವಂಚಿತವಾಗಿವೆ.
2019- 20ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದ ವರ್ಚುವಲ್ ಕಾರ್ಯಕ್ರಮ ನಡೆಸಿ ಶುಭಾಶಯ ತಿಳಿಸಿದ್ದು, ಅದಕ್ಕೆ ಸಂಬಂಧ ಪಟ್ಟ ದಾಖಲೆ, ನಗದು ಬಹುಮಾನ ಇನ್ನೂ ಸಿಕ್ಕಿಲ್ಲ. 2020-21ರ ಸಾಲಿನ ಪ್ರಶಸ್ತಿಯನ್ನು ವಿಳಂಬವಾಗಿ ಕಳೆದ ವರ್ಷ ನೀಡಲಾಗಿದೆ. ಸಾಕಷ್ಟು ತಿಂಗಳು ಕಳೆದ ಬಳಿಕ ರಾಜಕೀಯ ಒತ್ತಡದ ಮೇರೆಗೆ 2021-22ರ ಸಾಲಿನ ಪ್ರಶಸ್ತಿ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಬಾಕಿ ಇರುವ ಒಂದು ವರ್ಷವನ್ನು ಸರಿದೂಗಿಸುವ ನಿಟ್ಟಿನಲ್ಲಿ ಗಾಂಧಿ ಜಯಂತಿಯ ಮುನ್ನವೇ ಪುರಸ್ಕಾರ ನೀಡಿ, ಮುಂದೆ ಪ್ರತೀವರ್ಷ ವ್ಯವಸ್ಥಿತ ವಾಗಿ ನಡೆಯುವಂತೆ ಸರಕಾರ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯವಿದೆ.
ಪ್ರತಿಷ್ಠೆಯಾಗಿರುವ ಪುರಸ್ಕಾರ
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆಯುವುದು ಗ್ರಾ.ಪಂ.ಗಳಿಗೆ ಪ್ರತಿಷ್ಠೆಯ ಸಂಗತಿ. ಪ್ರಶಸ್ತಿ ಜತೆಗೆ 5 ಲಕ್ಷ ರೂ. ನಗದು ಸಿಗಲಿದೆ. ಪ್ರಶಸ್ತಿಯಿಂದಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಗ್ರಾ.ಪಂ.ಗಳಿಗೆ ವಿಶೇಷ ಮನ್ನಣೆ ಸಿಗುವುದು, ಹಿರಿಯ ಅಧಿಕಾರಿಗಳು, ಶಾಸಕರು, ಸಚಿವರು ಇಂಥ ಗ್ರಾ.ಪಂ.ಗಳನ್ನು ಮಾದರಿಯಾಗಿ ಪರಿಗಣಿಸುವುದು. ಈ ಮೂಲಕ ಮೂಲಸೌಕರ್ಯಗಳ ವೃದ್ಧಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವುದು. ರಾಜ್ಯ, ಕೇಂದ್ರ ಸರಕಾರ ಘೋಷಿಸಿರುವ ಪೈಲಟ್ ಪ್ರಾಜೆಕ್ಟ್ಗಳಿಗೆ ವಿಶೇಷ ಸಾಧನೆ ಮಾಡಿರುವ ಗ್ರಾ.ಪಂ.ಗಳನ್ನು ಆಯ್ಕೆ ಮಾಡುವುದು ಇತ್ಯಾದಿ ಕಾರಣಗಳಿಂದ ಈ ಪುರಸ್ಕಾರ ಪ್ರತಿಷ್ಠೆಯ ವಿಷಯವಾಗಿದ್ದು, ಒಮ್ಮೊಮ್ಮೆ ಪ್ರಶಸ್ತಿಯ ಪ್ರಯತ್ನದಲ್ಲಿರುವ ಗ್ರಾ.ಪಂ.ಗಳ ನಡುವೆ ಅಸಮಾಧಾನ, ಜಿದ್ದಾಜಿದ್ದಿಯೂ ನಡೆಯುತ್ತದೆ.
“ಗಾಂಧಿ ಗ್ರಾಮ ಪುರಸ್ಕಾರ’ ಪ್ರಕ್ರಿಯೆ ಕೋವಿಡ್ ಮತ್ತಿತರ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ 2021-22ರ ಸಾಲಿನ ಪುರಸ್ಕಾರಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಾಲೂಕುವಾರು ಉತ್ತಮ ಅಂಕ ಗಳಿಸಿದ ಗ್ರಾ.ಪಂ. ಪಟ್ಟಿಯನ್ನು ಜಿಲ್ಲಾ ಸಮಿತಿ ಅಂತಿಮಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.
– ಎಚ್. ಪ್ರಸನ್ನ, ಸಿಇಒ, ಜಿ. ಪಂ. ಉಡುಪಿ
– ಅವಿನ್ ಶೆಟ್ಟಿ