ಇಂದು ಕರಾವಳಿಯಾದ್ಯಂತ ಗಣೇಶ ಹಬ್ಬದ ಸಂಭ್ರಮ
Team Udayavani, Sep 2, 2019, 6:00 AM IST
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಲಂಕೃತ ಮಂಟಪದಲ್ಲಿ ಪೂಜೆಗೊಳ್ಳಲಿರುವ ಗಣಪತಿ ವಿಗ್ರಹ.
ಉಡುಪಿ/ಮಂಗಳೂರು/ಕಾಸರಗೋಡು: ರವಿವಾರ ಗೌರಿ ಹಬ್ಬ ನಡೆದಿದ್ದು, ಸೋಮವಾರ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಕರಾವಳಿ ಭಾಗದ ಎಲ್ಲ ಗಣಪತಿ ದೇವಸ್ಥಾನ ಗಳಲ್ಲಿ ಬರುವ ಸಾವಿರಾರು ಭಕ್ತರನ್ನು ನಿರ್ವಹಿ ಸಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಹುತೇಕ ದೇವಸ್ಥಾನಗಳಲ್ಲಿ ಮಧ್ಯಾಹ್ನ ಭೋಜನ ಪ್ರಸಾದದ ವ್ಯವಸ್ಥೆ ಇದೆ.
ಉಡುಪಿ ಜಿಲ್ಲೆಯ 453, ದ.ಕ. ಜಿಲ್ಲೆಯ 379, ಕಾಸರಗೋಡು ಜಿಲ್ಲೆಯ 25 ಸಾರ್ವಜನಿಕ ಗಣೇಶೋತ್ಸವ ಗಳ ಪೆಂಡಾಲುಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿದೆ. ಸೋಮವಾರ ಬೆಳಗ್ಗೆ ಎಲ್ಲ ಕಡೆ ಗಣೇಶನ ವಿಗ್ರಹಗಳನ್ನು ಸ್ವಾಗತಿಸಲು ಸಮಿತಿಗಳು ಸಜ್ಜಾಗಿವೆ. ಕೆಲವು ಗಣೇಶೋತ್ಸವಗಳಲ್ಲಿ ಯಾವುದಾದರೂ ಒಂದು ದಿನ ಭೋಜನ ಪ್ರಸಾದದ ವ್ಯವಸ್ಥೆ ಇರುತ್ತದೆ. ಇನ್ನು ನಾಲ್ಕೈದು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯೇ ಇರಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ನ್ನು ಪೊಲೀಸ್ ಇಲಾಖೆ ಮಾಡಿದೆ. ಮನೆಗಳಲ್ಲಿಯೂ ಗಣೇಶನ ಪೂಜೆಗಳು ನಡೆಯಲಿವೆ.
ಖರೀದಿ ಭರಾಟೆ
ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ಕಬ್ಬು ಖರೀದಿ ಭರಾಟೆ ಜೋರಾಗಿತ್ತು. ಕೆಲವು ದೇಗುಲಗಳಲ್ಲಿ ಚೌತಿಯ ವಿಶೇಷ ಪೂಜೆಯ ಬಳಿಕ ತೆನೆಗಳನ್ನು ವಿತರಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ರವಿವಾರ ದಿನವಿಡೀ ಮಳೆ ಸುರಿದು ಖರೀದಿ ಇತ್ಯಾದಿ ಸಿದ್ಧತೆಗೆ ಕೊಂಚ ಅಡ್ಡಿಯಾಯಿತು.
ಮದ್ಯದಂಗಡಿ ಬಂದ್
ಮಂಗಳೂರು: ಗಣೇಶ ಶೋಭಾ ಯಾತ್ರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವ ಕಾರಣ ಸೆ. 2ರಿಂದ 8ರ ವರೆಗೆ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿ ಮತ್ತು ಸೆ. 2ರಿಂದ 12ರ ತನಕ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಆಯ್ದ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮತ್ತು ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.