ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ
Team Udayavani, Oct 27, 2021, 12:35 PM IST
ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಅವರ ಸಂಪೂರ್ಣ ಸಂಪುಟ ರಾಜೀನಾಮೆ ನೀಡಬೇಕೆಂದು ಗೋವಾದ ಪ್ರತಿಪಕ್ಷಗಳು ಆಗ್ರಹಿಸಿವೆ. ಅಧಿಕಾರರೂಢ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ ಕಾರಣ ಈ ಬೆಳವಣಿಗೆ ನಡೆದಿದೆ.
ಗೋವಾ ರಾಜ್ಯದ ಪ್ರತಿಪಕ್ಷಗಳಾದ ಟಿಎಂಸಿ ಮತ್ತು ಗೋವಾ ಫೊರ್ವರ್ಡ ಪಕ್ಷದ ಮುಖಂಡರು ಹಾಲಿ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ರವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ರಾಜೀನಾಮೆ ಪಡೆಯುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಾವಂತ್ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಪಣಜಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ 10 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಗೋವಾದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಮೊದಲ ಲಾಕ್ಡೌನ್ ವೇಳೆಯಲ್ಲಿ ಜನರಿಗೆ ಹಂಚಬೇಕಿದ್ದ ಅಗತ್ಯ ವಸ್ತುಗಳಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಎಂದು ಮೇಘಾಲಯ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ರವರು ಸುದ್ಧಿವಾಹಿನಿಗೆ ಹೇಳಿಕೆ ನೀಡಿದ್ದಾರೆ. ಗೋವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಾಮು ನಾಯ್ಕ ರವರು ರಾಜ್ಯಪಾಲರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು-ಸಾಂವಿಧಾನಿಕ ಹುದ್ಧೆಯಲ್ಲಿ ಇದ್ದು ನಮ್ಮ ಸರ್ಕಾರವನ್ನು ದೂಷಿಸಬೇಡಿ. ಮೊದಲು ನಿಮ್ಮ ಹುದ್ಧೆಗೆ ರಾಜೀನಾಮೆ ನೀಡಿ ನಂತರ ಏನು ಹೇಳಬೇಕು ಎಂದಿರುವಿರೋ ಅದನ್ನು ಹೇಳಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರಿಗೆ ಹೇಳಿದ್ದಾರೆ.
ಇದನ್ನೂ ಓದಿ : ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್