ಸರಕಾರ ರಕ್ಷಣೆಯೇ ಅತಂತ್ರ
ಸಿಎಲ್ಪಿ ಸಭೆಗೆ ರಮೇಶ್ ಜಾರಕಿಹೊಳಿ, ಬೇಗ್ ಗೈರು
Team Udayavani, May 30, 2019, 6:00 AM IST
ಬೆಂಗಳೂರು: ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ನ ಕಸರತ್ತು ಮುಂದುವರಿದಿದ್ದು, ಬುಧವಾರವಿಡೀ ದಿನ ಮ್ಯಾರಥಾನ್ ಸಭೆಗಳು ನಡೆದರೂ ಫಲಿತಾಂಶ ‘ಶೂನ್ಯ’ವಾಗಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎರಡೂ ಅನುಮಾನ.
ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆಯ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಆಗುತ್ತಿಲ್ಲ. ಜೆಡಿಎಸ್ ಕಡೆಯಿಂದ ಎರಡಕ್ಕೂ ಆಕ್ಷೇಪ ಅಥವಾ ಷರತ್ತು ಇಲ್ಲ. ಸಂಪುಟ ವಿಸ್ತರಣೆ ಮಾಡಬೇಕಾದರೆ ಯಾರೆಲ್ಲ ಅತೃಪ್ತರಿಗೆ ಅವಕಾಶ ಕೊಡಬೇಕು, ಸಂಪುಟ ಪುನಾರಚನೆಯಾದರೆ ಯಾರನ್ನು ಕೈಬಿಟ್ಟು ಯಾರನ್ನು ಸೇರಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ನಲ್ಲಿ ಸ್ಪಷ್ಟತೆ ಇಲ್ಲ.
ಹೀಗಾಗಿ ಬುಧವಾರ ನಡೆದ ಸಚಿವರ ಸಭೆ ಮತ್ತು ಸಂಜೆಯ ಶಾಸಕಾಂಗ ಪಕ್ಷದ ಸಭೆಯಲ್ಲೂ ಒಮ್ಮತ ಮೂಡಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದಿನವಿಡೀ ನಾಯಕರ ಜತೆ ಚರ್ಚೆ ನಡೆಸಿದರೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಗುರುವಾರ ಮತ್ತೂಮ್ಮೆ ಸರಣಿ ಸಭೆ ನಿಗದಿಯಾಗಿದೆ. ಇದರ ನಡುವೆಯೂ ಬಿಜೆಪಿಯತ್ತ ಮುಖ ಮಾಡಿರುವ ಶಾಸಕರ ಪ್ರಯತ್ನ ನಡೆದಿದೆ.
ಆದರೆ ರಮೇಶ್ ಜಾರಕಿಹೊಳಿ ಮತ್ತು ರೋಷನ್ ಬೇಗ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ವೇಣುಗೋಪಾಲ್ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಯಾರೂ ಹೋಗಬೇಡಿ
ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಯಾರೂ ಬಿಜೆಪಿಗೆ ಹೋಗಬಾರದು. ಯಾರೂ ಆಮಿಷಕ್ಕೆ ಬಲಿಯಾಗಬೇಡಿ ಎಂದರು.
ಕೆಲವು ಶಾಸಕರು ಮಾತನಾಡಲು ಅವಕಾಶ ಕೇಳಿದರಾದರೂ ಸಿದ್ದರಾಮಯ್ಯ ಕೊಡಲಿಲ್ಲ. ಗುರುವಾರ ಸಂಜೆ ಆಯ್ದ ಶಾಸಕರನ್ನು ಕರೆದು ಮಾತನಾಡಿಸುವುದಾಗಿ ಹೇಳಿದ್ದಾರೆ. ಯಾರೂ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸಚಿವರಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಅದೇ ನೆಪದಲ್ಲಿ ಸಭೆಯೂ ನಡೆಯಲಿದೆ. ಸಂಜೆ ಮತ್ತೆ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ.
ರಮೇಶ್ ಜಾರಕಿಹೊಳಿ ಮತ್ತು ರೋಷನ್ ಬೇಗ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಬಸವರಾಜ ದದ್ದಲ್, ಶಿವರಾಂ ಹೆಬ್ಟಾರ್, ಡಾ| ಕೆ. ಸುಧಾಕರ್, ಬಿ.ಸಿ. ಪಾಟೀಲ್, ಬಿ. ನಾಗೇಂದ್ರ , ಆನಂದ್ ಸಿಂಗ್ ಹಾಜರಾಗಿದ್ದರು. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಬಾಗೇಪಲ್ಲಿಯ ಸುಬ್ಟಾರೆಡ್ಡಿ, ಬಸವಕಲ್ಯಾಣದ ನಾರಾಯಣರಾವ್ ಅನುಮತಿ ಪಡೆದು ಗೈರು ಹಾಜರಾಗಿದ್ದರು. ಕಂಪ್ಲಿ ಗಣೇಶ್ ಅವರ ಅಮಾನತು ಆದೇಶ ದಿಢೀರ್ ವಾಪಸ್ ಪಡೆದಿದ್ದರಿಂದ ಅವರೂ ಸಭೆಗೆ ಹಾಜರಾಗಿದ್ದರು.