ಕರ್ನಾಟಕ ಪಬ್ಲಿಕ್ ಶಾಲೆಗಾಗಿ ಸರ್ಕಾರಿ ಶಾಲೆ ವಿಲೀನ
ಅಧಿಕಾರ ಹಂಚಿಕೆಯಲ್ಲಿ ಮುಂದುವರಿದ ಗೊಂದಲ
Team Udayavani, May 21, 2019, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮಕ್ಕಳ ಸಂಖ್ಯೆ ಕಡಿಮೆಯಿರುವ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದೆ.
2018-19ರಲ್ಲಿ 176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿತ್ತು. 2019-20ನೇ ಸಾಲಿನಲ್ಲಿ ಇದಕ್ಕೆ ಹೊಸದಾಗಿ ನೂರು ಶಾಲೆಗಳು ಸೇರಿಕೊಂಡಿವೆ. ಈ ಎಲ್ಲ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಸಕ್ತ ಸಾಲಿನಿಂದಲೇ ಆರಂಭಿಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಎಲ್ಲಿಯೂ ಹೊಸ ಕಟ್ಟಡ ಅಥವಾ ಕ್ಯಾಂಪಸ್ ರಚಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿಲ್ಲ. ಬದಲಾಗಿ ಇರುವ ಸರ್ಕಾರಿ ಶಾಲಾ ಕ್ಯಾಂಪಸ್ನಲ್ಲೇ ಪಿಯು ತರಗತಿಗಳನ್ನು ತೆರೆದಿದೆ. ಎಲ್ಲೆಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆಯೋ ಅಲ್ಲೆಲ್ಲ ಪಿಯು ತರಗತಿ ಆರಂಭಿಸಲಾಗಿದೆ. ಹಾಗೆಯೇ ಪ್ರೌಢಶಾಲೆ ಹಾಗೂ ಪಿಯು ಇರುವ ಕಡೆಗಳಲ್ಲಿ ಪ್ರಾಥಮಿಕ ಶಾಲಾ ವಿಭಾಗ ತೆರೆದು ಕರ್ನಾಟಕ ಪಬ್ಲಿಕ್ ಶಾಲೆ ಎಂಬ ನಾಮಕರಣ ಮಾಡಲಾಗಿದೆ. ಆದರೆ, ಸುಸಜ್ಜಿತವಾದ ಯಾವ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.
ಶಾಲೆಗಳ ವಿಲೀನ: ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಹಾಗೂ ಒಂದು ಮಗುವಿದ್ದರೂ ಶಾಲೆ ನಡೆಸುತ್ತೇವೆ ಎಂದು ಹೇಳಿರುವ ಸರ್ಕಾರ, ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ವಿಲೀನಗೊಳಿಸಿ, ಕ್ರಮೇಣ, ಶಾಲೆ ಮುಚ್ಚಲು ಕಾರ್ಯತಂತ್ರ ರೂಪಿಸುತ್ತಿದೆ. ಎಲ್ಲೆಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆಯೋ ಅಲ್ಲಿ ಸಮೀಪದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಇದರೊಂದಿಗೆ ವಿಲೀನಗೊಳಿಸಲಾಗಿದೆ.
ಕೆಲವು ಕಡೆ ಎರಡು ಮೂರು ಪ್ರಾಥಮಿಕ ಶಾಲೆ, ತಲಾ ಒಂದು ಅಥವಾ ಎರಡು ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಿಗಾಗಿ ವಿಲೀನಗೊಳಿಸಲಾಗಿದೆ. ಅದರಂತೆ 276 ಕರ್ನಾಟಕ ಪಬ್ಲಿಕ್ ಶಾಲೆಗೆ ಸುಮಾರು 500ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂಬ ಆರೋಪವೂ ರಾಜ್ಯಾದ್ಯಂತ ಕೇಳಿ ಬರುತ್ತಿದೆ.
ಅಧಿಕಾರ ಹಂಚಿಕೆ ಗೊಂದಲ: ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ತರಗತಿಗಳು ಒಂದೇ ಸೂರಿನಡಿ ಇರಲಿದೆ. ಶಿಕ್ಷಣ ಪದ್ಧತಿ ಹೇಗಿರಬೇಕು ಎಂಬುದು ಸೇರಿ ಕರ್ನಾಟಕ ಪಬ್ಲಿಕ್ ಶಾಲೆ ನಡೆಸಬೇಕಾದ ಕಾರ್ಯಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿದೆ. ಆದರೆ, ಅಧಿಕಾರ ಹಂಚಿಕೆಯಲ್ಲಿ ಇನ್ನೂ ಗೊಂದಲವಿದೆ. ಪಿಯು ಕಾಲೇಜಿನ ಪ್ರಾಂಶುಪಾಲರೇ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾಗಿರುತ್ತಾರೆ.
ಪ್ರೌಢಶಾಲೆ ಮುಖ್ಯೋ ಪಾಧ್ಯಾಯರು ಉಪ ಪ್ರಾಂಶುಪಾಲರಾಗಿ ರುತ್ತಾರೆ. ಆದರೆ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಅನುದಾನವನ್ನು ಉಪ ಪ್ರಾಂಶುಪಾಲರ ಹೆಸರಿನಲ್ಲೇ ಬಿಡುಗಡೆ ಮಾಡುತ್ತಿದೆ. ಪ್ರಾಂಶುಪಾಲರಿಗೆ ಆಡಳಿ ತಾತ್ಮಕವಾಗಿ ಅಧಿಕಾರ ಇಲ್ಲದಂತೆ ಮಾಡಲಾಗು ತ್ತಿದೆ ಎಂದು ಸರ್ಕಾರಿ ಪಿಯು ಕಾಲೇಜು ಉಪ ನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾಹಿತಿ ನೀಡಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಪ್ರತ್ಯೇಕವಾದ ವೃಂದಮತ್ತು ನೇಮಕಾತಿ ನಿಯ ಮವಿದೆ. ಆದರೆ, ಕರ್ನಾಟಕ ಪಬ್ಲಿಕ್ ಶಾಲೆಯ ಲ್ಲಿ ಸೇವೆ ಸಲ್ಲಿಸುವ ಶಿಕ್ಷಕ, ಉಪನ್ಯಾಸಕರು ಯಾವ ನಿಯಮ ಪಾಲನೆ ಮಾಡಬೇಕು ಎಂಬುದರ ಸ್ಪಷ್ಟತೆಯೂ ಇಲ್ಲ.ಬಿಇಓ, ಡಿಡಿ ಪಿಐ ಹಾಗೂ ಪಿಯುಡಿಡಿಪಿಐ ಅಧಿಕಾರ ಏನು ಎಂಬುದರ ಬಗ್ಗೆಯೂ ಮಾಹಿತಿ ನೀಡಿಲ್ಲ. ಅನುದಾನ ಬಳಕೆಯಲ್ಲಿಯೂ ತಾರತಮ್ಯ ನಡೆಸಲಾಗುತ್ತಿದೆ. ಸೇವಾ ವಿವರ ಹೇಗಿರುತ್ತದೆ ಎಂಬುದನ್ನು ಕೋರಿಕೊಂಡಿದ್ದೇವೆ. ಅದನ್ನೂ ನೀಡಿಲ್ಲ ಎಂದು ವಿವರಿಸಿದರು.
-ರಾಜು ಖಾರ್ವಿ ಕೊಡೇರಿ