ಈ ಬಾರಿ ಬಿಜೆಪಿ 80% ಕ್ಕಿಂತ ಹೆಚ್ಚು ಪಂಚಾಯತ್ ಗಳಲ್ಲಿ ಅಧಿಕಾರ ಪಡೆಯುವುದು ನಿಶ್ಚಿತ : ಕಟೀಲ್
Team Udayavani, Dec 20, 2020, 4:21 PM IST
ಬೆಂಗಳೂರು : ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿಯ ಬೆಂಬಲಿತರು ಅತಿ ಹೆಚ್ಚು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆ ಆಗಿರುವುದು ಪಕ್ಷವು ಗರಿಷ್ಠ ಸ್ಥಾನ ಪಡೆಯುವುದರ ಮುನ್ಸೂಚನೆಯಾಗಿದೆ. ನಾನು ಆರೇಳು ಜಿಲ್ಲೆಗಳ ಪ್ರವಾಸ ಮಾಡಿ ಬಂದಿದ್ದು, ಈ ಬಾರಿ ಬಿಜೆಪಿ ಶೇಕಡಾ 80ಕ್ಕಿಂತ ಹೆಚ್ಚು ಪಂಚಾಯತ್ಗಳಲ್ಲಿ ಅಧಿಕಾರ ಪಡೆಯುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯುವ ಕಾರ್ಯಕರ್ತರಿಗೆ ಹೆಚ್ಚು ಜವಾಬ್ದಾರಿ ನೀಡುವ ಮೂಲಕ ಪಕ್ಷವು ಸಂಘಟನಾತ್ಮಕವಾಗಿ ದೃಢಗೊಂಡಿದೆ. ರಾಜ್ಯದಲ್ಲಿ 1,16,000 ಕಾರ್ಯಕರ್ತರಿಗೆ ಪಕ್ಷವು ವಿವಿಧ ಜವಾಬ್ದಾರಿಗಳನ್ನು ನೀಡಿದೆ. ಇದರಿಂದಾಗಿ, ಪಂಚಾಯತ್ಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಯುವಕರನ್ನೇ ಕಣಕ್ಕೆ ಇಳಿಸಲು ಸಾಧ್ಯವಾಗಿದೆ ಎಂದು ವಿವರಿಸಿದರು. ಮೂರು ತಿಂಗಳುಗಳ ಬಳಿಕ ನಡೆಯುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ:ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ? ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ
ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್, ಫಸಲ್ ಬಿಮಾ ಸೇರಿದಂತೆ ಅತ್ಯುತ್ತಮ ಯೋಜನೆಗಳನ್ನು ಜಾರಿಗೊಳಿಸಿ ರೈತಪರ ಸರಕಾರ ಎಂಬುದನ್ನು ಸಾಬೀತುಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಹಾಗೂ ರೈತಪರ ಕಾರ್ಯಕ್ರಮಗಳ ವಿಷಯವನ್ನು ಜನರ ಗಮನಕ್ಕೆ ತರುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಕೇಂದ್ರದ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮಾರ್ ಅವರು ಈಗಾಗಲೇ ರೈತರಿಗೆ ಒಂದು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿನ ಅಂಶಗಳನ್ನೂ ರೈತರಿಗೆ ಮನದಟ್ಟು ಮಾಡಬೇಕು ಎಂದರು.