ಕಿರುಕುಳ: ದೂರು ದಾಖಲು
Team Udayavani, Apr 1, 2023, 5:20 AM IST
ಪಡುಬಿದ್ರಿ: ನಿಟ್ಟೆ ಗ್ರಾಮದ ಮೊಹಮ್ಮದ್ ಹಸನ್ ಸಾಹೇಬ್(67) ಎಂಬವರು ಡಿ. 3ರಂದು ಉನೈಜ್ ಎಂಬಾತನನ್ನು ಭೇಟಿ ಮಾಡಲು ಅವರ ಕಾರಿನಲ್ಲಿ ಬಡಾ ಎರ್ಮಾಳು ಗ್ರಾಮದ ಕಲ್ಯಾಣಿ ಬಾರ್ ಬಳಿ ನಿಂತಿದ್ದಾಗ ಅವರ ಪರಿಚಯದ ಆರೋಪಿಗಳಾದ ಅಬ್ದುಲ್ ಜಬ್ಟಾರ್, ಆತನ ಸ್ನೇಹಿತ ಇರ್ಷಾದ್ ಹಾಗೂ ಮತ್ತಿಬ್ಬರು ಮಹಿಳೆಯರು ಪ್ರಕರಣದ ಎರಡನೇ ಆರೋಪಿ ಆಸೀಫ್ ಆಪತಾºಂಧವ ಎಂಬಾತನೊಂದಿಗೆ ಸೇರಿ ಕಿರುಕುಳ ನೀಡಿ, ಮಹಿಳೆಯರಿಂದ ಹೊಡೆಸಿ, ಫೋನ್ ಪೇ ಮೂಲಕ 11, 000 ರೂ. ಕಸಿದು, ಹೊಡೆಸಿದ ವೀಡಿಯೋ ವೈರಲ್ ಮಾಡಿದ್ದು ಜೀವ ಬೆದರಿಕೆ ಒಡ್ಡಿರುವ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮಾ. 30ರಂದು ದೂರು ದಾಖಲಾಗಿದೆ.
ಮೊಹಮ್ಮದ್ ಹಸನ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ತಿಂಗಳು ಕಾಲ ವಿಶ್ರಾಂತಿ ಪಡೆದಿದ್ದರು. ವೀಡಿಯೋ ವೈರಲ್ ಆಗಿರುವುದರಿಂದ ಈಗಷ್ಟೇ ಈ ಪ್ರಕರಣವು ಬೆಳಕಿಗೆ ಬಂದಿದೆ.
ಘಟನಾ ದಿನದಂದು ಕಲ್ಯಾಣಿ ಬಾರ್ ಬಳಿ ಇತರರೊಂದಿಗಿದ್ದ ಪರಿಚಯದ ಆರೋಪಿ ಜಬ್ಟಾರ್ನನ್ನು ಕಂಡು ಆತನನ್ನು ಮಾತನಾಡಿಸಲು ಹೋದಾಗ ಈ ಘಟನೆಗಳು ಒಂದೊಂದಾಗಿ ಸಂಭವಿಸಿವೆ. ಜಬ್ಟಾರ್ ವಿನಾಕಾರಣ ತಗಾದೆ ಎಬ್ಬಿಸಿ ಸಾರ್ವತ್ರಿಕವಾಗಿ ಮಹಿಳೆಯರಿಂದ ಹೊಡೆಸಿದ. ಮತ್ತೆ ಜಬ್ಟಾರ್ನು ಆತನ ಸ್ನೇಹಿತ ಆಸೀಫ್ ಆಪತ್ಭಾಂಧವ ಎಂಬವನನ್ನು ಫೋನ್ ಮಾಡಿ ಅಲ್ಲಿಗೆ ಕರೆಯಿಸಿಕೊಂಡು, ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ, ಪ್ರಕರಣದ ಎರಡನೇ ಆರೋಪಿಯು ಮೊಹಮ್ಮದ್ ಹಸನ್ ಸಾಹೇಬರ್ ಮೊಬೈಲ್ ಪಡೆದು ನಡೆದ ಘಟನೆಗಳನ್ನೆಲ್ಲಾ ಸರಿ ಮಾಡುವುದಾಗಿ ಹೇಳಿ 11,000 ರೂ. ಗಳನ್ನು ಫೋನ್ ಪೇ ಮೂಲಕ ಆತನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಮತ್ತೆ ದೂರುದಾರರ ಕಾರಿನ ಕೀ ಪಡೆದು ನಂದಿಕೂರಿಗೆ ಹೋಗಿ ದೂರುದಾರರನ್ನು ಕಾರಿನಿಂದ ಇಳಿಸಿ ಆರೋಪಿ ಜಬ್ಟಾರನು ಇತರ ಆರೋಪಿಗಳೊಂದಿಗೆ ಸುತ್ತಾಡಿ ವಾಪಸ್ ನೀಡಿದ್ದಾನೆ. ವಿಷಯ ಯಾರಿಗಾದರೂ ತಿಳಿಸಿದರೆ ಮಹಿಳೆಯರು ಹೊಡೆದಿರುವ ವೀಡಿಯೋ ವೈರಲ್ ಮಾಡುವುದಾಗಿಯೂ, ಸುದ್ದಿಗೆ ಬಂದರೆ ಕೊಲೆ ಮಾಡುವುದಾಗಿಯೂ ಬೆದರಿಕೆಯನ್ನೂ ಒಡ್ಡಿದ್ದಾರೆಂದು ಪೊಲೀಸರಿಗಿತ್ತ ದೂರಿನಲ್ಲಿ ತಿಳಿಸಲಾಗಿದೆ.