ವಿಜಯಪುರ: ಮಳೆಯ ಅಬ್ಬರಕ್ಕೆ ಒಡೆದ ಸಾರವಾಡ ಕೆರೆ! ಅಲಮೇಲದಲ್ಲಿ ದೇವಸ್ಥಾನ, ಮನೆಗಳು ಜಲಾವೃತ
Team Udayavani, Oct 14, 2020, 2:28 PM IST
ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಸಪ್ಪನ ಕೆರೆ ಒಡೆದಿದೆ.
ಒಡೆದ ಕೆರೆಯಿಂದ ಅಕ್ಕ ಪಕ್ಕದ ಜಮೀನಿಗೆ ನುಗ್ಗಿದ ನೀರು ಮಳೆಯಿಂದ ನೆನೆದಿದ್ದ ಮಣ್ಣು ಸಮೇತ ಬೆಳೆಯನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಬಾಧಿತ ರೈತರು ಕಂಗಾಲಾಗಿದ್ದು, ಸರ್ಕಾರ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹೆಚ್ಚಿನ ಪ್ರದೇಶಗಳು ಪ್ರವಾಹದಿಂದ ತತ್ತರಿಸಿಹೋಗಿದೆ. ರೈತರು ಬೆಳೆದ ಬೆಳೆಗಳೆಲ್ಲಾ ಮಳೆಯ ನೀರಿನಿಂದ ನಾಶವಾಗಿದೆ.
ಅಲಮೇಲ ಭಾರಿ ಮಳೆಗೆ ದೇವಸ್ಥಾನ, ಅರ್ಚಕರ ಮನೆಗಳು ಜಲಾವೃತ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣದಲ್ಲಿ ಪುರಾತನ ವಿಶ್ವೇಶ್ವರ ದೇವಸ್ಥಾನ ಮಳೆ ನೀರಿಂದ ಜಲಾವೃತವಾಗಿದೆ. ದೇವಸ್ಥಾನ ಪಕ್ಕದಲ್ಲೇ ಇರುವ ಅರ್ಚಕರ ಮನೆಯೂ ಜಲಾವೃತವಾಗಿದ್ದು, ಅರ್ಚಕರ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. ಅರ್ಜುಣಗಿ ಹೊಸಮಠ, ಭಜಂತ್ರಿ ಓಣಿ ಸೇರಿದಂತೆ ಧಕ್ಷಿಣಮುಖಿ ಆಂಜನೆಯ ದೇವಸ್ಥಾನದ ವರೆಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು ಜಲಾವೃತವಾಗಿವೆ.